ಕುಂಬಳೆ: ಸಿಪಿಎಂ ಪಕ್ಷವು ತನ್ನ ಮೂಲ ಸಿದ್ದಾಂತವನ್ನು ಬದಿಗಿರಿಸಿ ತಾನು ಈವರೆಗೆ ವಿರೋಧಿಸಿಕೊಂಡಿದ್ದ ಆಚಾರ-ಅನುಷ್ಠಾನಗಳನ್ನು ಪಕ್ಷದಲ್ಲೂ ಅಳವಡಿಸುವ ಕಾಲ ಸನ್ನಿಹಿತವಾಗಿದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ತಿಳಿಸಿದರು.
ಮಂಜೇಶ್ವರ ಉಪಚುನಾವಣೆಯ ಹಿನ್ನೆಲೆಯಲ್ಲಿ ಕುಂಬಳೆ ಮಾವಿನಕಟ್ಟೆಯಲ್ಲಿರುವ ಎನ್ಡಿಎ ಚುನಾವಣಾ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು ಎಡಪಕ್ಷಗಳ ಇತ್ತೀಚಿನ ಕಾರ್ಯತಂತ್ರಗಳನ್ನು ಕಟು ಶಬ್ದಗಳಿಂದ ಟೀಕಿಸಿದರು.
ಪ್ರಸ್ತುತ ನಡೆಯಲಿರುವ ಉಪ ಚುನಾವಣೆಯಲ್ಲಿ ಅಭಿವೃದ್ದಿ ಮತ್ತು ನಂಬಿಕೆಗಳ ಬಗ್ಗೆ ಭಾರೀ ಚರ್ಚೆಗಳು ನಡೆದಿದೆ. ಕೇಂದ್ರ ಸರ್ಕಾರ ಜನ ಕಲ್ಯಾಣಕ್ಕಾಗಿ ಒದಗಿಸಿದ ನಿಧಿಯನ್ನು ತನ್ನ ಸ್ವಾರ್ಥಕ್ಕಾಗಿ ಇತರ ಯೋಜನೆಗಳಿಗೆ ಬಳಸಿರುವುದು ಮತ್ತು ನೇತಾರರು ಸ್ವ ಹಿತಾಸಕ್ತಿಗೆ ಬಳಸಿರುವುದು ಎಡಪಕ್ಷ ರಾಜ್ಯಕ್ಕೆ ನೀಡಿರುವ ದೊಡ್ಡ ಕೊಡುಗೆಯಾಗಿದೆ. ರಾಜ್ಯ ಎದುರಿಸಿರುವ ಪ್ರಾಕೃತಿಕ ದುರಂತ ನಿರ್ವಹಣೆಗೆ ಕೇಂದ್ರ ಒದಗಿಸಿರುವ ನೆರವನ್ನು ಹೇಗೆ ಬಳಸಲಾಗಿದೆ ಎಂಬ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟಪಡಿಸಬಲ್ಲರೇ ಎಂದು ಕುಮ್ಮನಂ ರಾಜಶೇಖರನ್ ಹರಿಹಾಯ್ದರು. ಹೊರ ಪ್ರಪಂಚಕ್ಕೆ ಪ್ರಾಕೃತಿಕ ದುರಂತದ ನಿರಾಶ್ರಿತರಿಗೆ ನೆರವು ನೀಡುವ ನಾಟಕವಾಡಿರುವ ರಾಜ್ಯ ಎಡರಂಗ ಸರ್ಕಾರ ನೈಜವಾಗಿ ಎಲ್ಲೂ ಪರಿಹಾರ ಕಲ್ಪಿಸಿಲ್ಲ. ಧರ್ಮ, ನಂಬಿಕೆಗಳಲ್ಲಿ ಎಡಪಕ್ಷ ನೈಜ ಕಾಳಜಿ ವಹಿಸುವುದಾದರೆ ಶಬರಿಮಲೆಯ ಮಹಿಳಾ ಪ್ರವೇಶದ ಕುರಿತಾಗಿ ನಿಲುವನ್ನು ಸ್ಪಷ್ಟಪಡಿಸಬೇಕು. 2013ರಲ್ಲಿ ಪಾಲಕ್ಕಾಡಿನಲ್ಲಿ ನಡೆದ ಎಡಪಕ್ಷದ ಕಾರ್ಯಕಾರಿಣಿಯಲ್ಲಿ ಪಕ್ಷದ ಮೂಲ ಸಿದ್ದಾಂತದಂತೆ ಸಭೆ ಸಮಾರಂಭಗಳಲ್ಲಿ ಗಣಪತಿ ಹವನ, ಭಗವತಿ ಸೇವೆಗಳಂತಹ ಆಚಾರಗಳಿಗೆ ಪಕ್ಷ ಮನ್ನಣೆ ನೀಡದೆ, ತಡೆಹಿಡಿಯಬೇಕೆಂಬ ತೀರ್ಮಾನ ಕೈಗೊಂಡಿತ್ತು. ಆದರೆ ಇಂದು ಪಕ್ಷದ ಅಸ್ತಿತ್ವಕ್ಕಾಗಿ ನಂಬಿಕೆ, ಅನುಷ್ಠಾನಗಳಲ್ಲಿ ನಂಬಿಕೆ ಉಳ್ಳವರಂತೆ ವರ್ತಿಸುತ್ತಿರುವುದು ಪ್ರಜ್ಞಾವಂತ ನಾಗರಿಕರ ಅರಿವಿಗೆ ಬರುತ್ತಿದೆ ಎಂದು ಕುಮ್ಮನಂ ತಿಳಿಸಿದರು. ನಂಬಿಕೆ, ಅನುಷ್ಠಾನಗಳಿಗೆ ಎದುರಾಗಿರುವ ಸರ್ಕಾರದ ನಿಲುವಳಿಗಳನ್ನು ಸಂಘಪರಿವಾರ ಹಿಂದಿನಿಂದಲೂ ವಿರೋಧಿಸುತ್ತಿದೆ.Áದರೆ ಆ ಸಂದರ್ಭ ಮೌನವಾಗಿದ್ದ ಯುಡಿಎಫ್ ಶಬರಿಮಲೆ ವಿಚಾರಕ್ಕೆ ಸಂಬಂಧಿಸಿ ವಿಶ್ವಾಸ ಸಂರಕ್ಷಣೆಯ ಯಾತ್ರೆ ನಡೆಸಿರುವುದು ವ್ಯಂಗ್ಯದ ಪರಮಾವಧಿಯೆಂದು ಅವರು ಕುಟುಕಿದರು. ಎಡ-ಬಲ ರಂಗಗಳು ಸ್ವಾರ್ಥ ಲಾಲಸೆಗಳಿಗಾಗಿ ವಂಚನೆಗೈಯ್ಯುತ್ತಿರುವುದು ಜನರಿಗೆ ಈಗ ಅರಿವಾಗಿರಬಹುದು. ಈ ನಿಟ್ಟಿನಲ್ಲಿ ಬದಲಾವಣೆಯ ಪರ್ವ ಸನ್ನಿಹಿತವಾಗಿದೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್ ಮೊದಲಾದವರು ಉಪಸ್ಥಿತರಿದ್ದರು.


