ಪೆರ್ಲ:ಗಾಳಿಗೋಪುರ ಏತಡ್ಕ ಜಂಕ್ಷನ್ ನಲ್ಲಿ ಲಾರಿಯೊಂದು ಮುಂದಕ್ಕೂ ಹಿಂದಕ್ಕೂ ಚಲಿಸದೆ ನಿಂತ ಪರಿಣಾಮ ಪೆರ್ಲ ಸ್ವರ್ಗ ರಸ್ತೆಯಲ್ಲಿ ಎರಡುವರೆ ತಾಸು ಸಂಚಾರಕ್ಕೆ ಅಡಚಣೆ ಉಂಟಾಯಿತು.
ಭಾನುವಾರ ಬೆಳಿಗ್ಗೆ 10.45ರ ವೇಳೆ ಕುರಿ ಗೊಬ್ಬರ ಸಾಗಿಸುತ್ತಿದ್ದ ಬೃಹತ್ ಲಾರಿಯೊಂದು ಏತಡ್ಕದಿಂದ ಪೆರ್ಲ ಸ್ವರ್ಗ ರಸ್ತೆಯ ಸ್ವರ್ಗ ಭಾಗಕ್ಕೆ ತಿರುಗಿಸಲು ಪ್ರಯತ್ನಿಸಿದ್ದು ಮುಂದಕ್ಕೂ ಹಿಂದಕ್ಕೂ ಚಲಿಸದೆ ರಸ್ತೆಯಲ್ಲೆ ನಿಂತ ಪರಿಣಾಮ ಎರಡೂವರೆ ತಾಸು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಪೆರ್ಲದಿಂದ ಪಾಣಾಜೆ ದಾರಿಯಾಗಿ ಪುತ್ತೂರು, ಪುತ್ತೂರಿನಿಂದ ಪೆರ್ಲ ದಾರಿಯಾಗಿ ವಿಟ್ಲ ಸಂಚರಿಸುವ ಬಸ್ಸುಗಳು ಅರ್ಧಮೂಲೆ ಕಾಟುಕುಕ್ಕೆ ಬದಲಿ ರಸ್ತೆಯಲ್ಲಿ ಸಂಚರಿಸಿದವು. ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳು, ಫ್ಲೈಯಿಂಗ್ ಸ್ಕ್ವಾಡ್ ವಾಹನಗಳು, ಇತರ ಲಘು ವಾಹನಗಳು ಕ್ಷಣಕಾಲ ರಸ್ತೆಯಲ್ಲೇ ಸಾಲುಗಟ್ಟಿ ನಿಲ್ಲುವಂತಾಯಿತು. ಮಧ್ಯಾಹ್ನ 1ರ ವೇಳೆ ಅರ್ಧದಷ್ಟು ಕುರಿ ಗೊಬ್ಬರ ಚೀಲಗಳನ್ನು ಇತರ ವಾಹನಗಳಿಗೆ ಹೇರಿ ಜೆಸಿಬಿ ಬಳಸಿ ಲಾರಿಯನ್ನು ಬದಿಗೆ ಸರಿಸಲಾಯಿತು.
ಗಾಳಿಗೋಪುರ ಏತಡ್ಕ ಜಂಕ್ಷನ್ ಪೆರ್ಲ ಸ್ವರ್ಗ ರಸ್ತೆಯ ಏರು ಭಾಗದಲ್ಲಿದ್ದು ಏತಡ್ಕ ಅಥವಾ ಸ್ವರ್ಗ ಭಾಗಕ್ಕೆ ತಿರುಗಿಸಲು ಪ್ರಯತ್ನಿಸುವಾಗ ಹಲವು ಬಾರಿ ಬೃಹತ್ ಲಾರಿಗಳು ಹಿಂದಕ್ಕೂ ಮುಂದಕ್ಕೂ ಚಲಿಸಲಾಗದೆ ರಸ್ತೆಯಲ್ಲೇ ಬಾಕಿಯಾಗಿ, ಇತರ ವಾಹನಗಳ ಸಂಚಾರವೂ ಅಸ್ತವ್ಯಸ್ತಗೊಂಡ ಘಟನೆ ಈ ಹಿಂದೆಯೂ ಹಲವು ಬಾರಿ ನಡೆದಿದೆ. ಎರಡು ವರ್ಷಗಳ ಹಿಂದೆ ಮೆಕ್ಡಾಂ ಡಾಮರೀಕರಣ ನಡೆದ ಪೆರ್ಲ ಸ್ವರ್ಗ ರಸ್ತೆ ಉದ್ದಕ್ಕೂ ಎರಡೂ ಬದಿಗಳಲ್ಲಿ ಡಾಮರ್ ಕತ್ತರಿಸಲ್ಪಟ್ಟಿದೆ. ಅಭಿಮುಖವಾಗಿ ವಾಹನಗಳು ಆಗಮಿಸುವ ವೇಳೆ ಲಘು ವಾಹನ, ದ್ವಿಚಕ್ರ ವಾಹನ ಚಾಲಕರು ವಾಹನಗಳನ್ನು ರಸ್ತೆಯಿಂದ ಕೆಳಗಿಳಿಸಲು ಹಿಂಜರಿಯುತ್ತಿದ್ದಾರೆ.ತೀರಾ ಅಗಲ ಕಿರಿದಾಗಿ, ಏರಿಳಿತ ಹಾಗೂ ಪ್ರಪಾತಗಳಿಂದ ಕೂಡಿದ ಈ ರಸ್ತೆಯಲ್ಲಿ ಅಪಘಾತಗಳು ನಿತ್ಯ ಘಟನೆಯಾಗುತ್ತಿವೆ.


