ಮಂಜೇಶ್ವರ: ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ದಿನದಂದು(ಅ.21) ಮತಗಟ್ಟೆ ಮತ್ತು ಮತಗಟ್ಟೆಯ ನೂರು ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮತಗಟ್ಟೆಗೆ ಮೊಬೈಲ್ ಸಹಿತ ಆಗಮಿಸಿದಲ್ಲಿ, ಮೊಬೈಲ್ ವಶಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿ 20 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ನಡೆಸಲಾಗುವುದು. 49 ಮತಗಟ್ಟೆಗಳಲ್ಲಿ ಸಶಸ್ತ್ರಸೇನೆಯ ಭದ್ರತೆ ಇರುವುದು. 53 ಮತಗಟ್ಟೆಗಳಲ್ಲಿ ಮೈಕ್ರೋ ಒಬ್ಸರ್ ವರ್ ಗಳು ಇರುವರು. 198 ಬೂತ್ ಗಳಲ್ಲೂ ಬುರ್ಖಾ ಧರಿಸಿದ ಮಹಿಳೆಯರ ಗುರುತುಪತ್ತೆಗೆ ಮಹಿಳಾ ಸಿಬ್ಬಂದಿ ಇರುವರು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾಧಿಕಾರಿ ಅವರ ಛೇಂಬರ್ ನಲ್ಲಿ ಸೋಮವಾರ ನಡೆದ ವಿವಿಧ ರಾಜಕೀಯ ಪಕ್ಷಗಳ ನೇತಾರರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 11 ಮತಗಟ್ಟೆಗಳಲ್ಲಿ ವೀಡಿಯೋ ಗ್ರಾಫರ್ ಗಳು ನೇರವಾಗಿ ಚಿತ್ರೀಕರಣ ನಡೆಸಲಿದ್ದಾರೆ. ಬೆಳಗ್ಗೆ 6ರಿಂದ ಸಂಜೆ 6 ಗಂಟೆ ವರೆಗೆ ಈ ಚಿತ್ರೀಕರಣ ನಡೆಯಲಿದೆ. ಅಕ್ರಮ ಮತದಾನ ನಿಯಂತ್ರಿಸುವಲ್ಲಿ ಕಠಿಣ ಕ್ರಮ ಕೈಘೊಳ್ಳಲಾಗುವುದು. ಅ.15ರ ನಂತರ ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಒಂದೇ ವಾಹನದಲ್ಲಿ 6 ಮಂದಿಗಿಂತ ಅಧಿಕ ಜನ ಸಂಚಾರ ನಡೆಸಿದರೆ ಸೂಕ್ಷ್ಮ ತಪಾಸಣೆಗೊಳಪಡಿಸಲಾಗುವುದು. ಕೋಮುಗಲಭೆ ಸೃಷ್ಟಿಸುವ ಯತ್ನವನ್ನು ಪ್ರಬಲವಾಗಿ ತಡೆಯಲಾಗುವುದು. ಪೊಲೀಸ್ ಭದ್ರತೆಯನ್ನು ಏರ್ಪಡಿಸಲಗುವುದು. ಕೇಂದ್ರ ಸೇನಾ ಸುರಕ್ಷೆಯೂ ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿರುವುದು.
ಮಂಜೇಶ್ವರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಸರ್ವಪಕ್ಷ ಸಭೆ ನಡೆಸಲಾಗುವುದು. ಮೆರವಣಿಗೆ, ಪ್ರಚಾರ ಇತ್ಯಾದಿ ನಡೆಸುವ ವೇಳೆ ರಾಜಕೀಯ ಪಕ್ಷಗಳು ಪೊಲೀಸರ ಮುಂಗಡ ಅನುಮತಿ ಪಡೆದಿರಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು. ಶಾಂತಿಯುತ, ಸಂವಿಧಾನಬದ್ಧ, ಸುಧಾರಿತ ಚುನಾವಣೆ ನಡೆಸುವಲ್ಲಿ ಬೆಂಬಲ ನೀಡುವುದಾಗಿ ಸಭೆಯಲ್ಲಿ ಭಾಗವಹಿಸಿದ್ದ ರಾಜಕೀಯ ಪಕ್ಷಗಳ ನೇತಾರರು ಭರವಸೆ ನೀಡಿದರು.
ಸಭೆಯಲ್ಲಿ ಸಾರ್ವಜನಿಕ ನಿರೀಕ್ಷಕಿ ಸುಷ್ಮಾ ಗೋಡ್ ಬೋಲೆ, ಖರ್ಚುವೆಚ್ಚ ನಿರೀಕ್ಷಕ ಕಮಲ್ ಜೀತ್ ಕೆ.ಕಮಲ್, ಮಂಜೇಶ್ವರ ವಿಧಾನಸಭೆ ಕ್ಷೇತ್ರ ಚುನಾವಣೆ ಅಧಿಕಾರಿ ಎನ್.ಪ್ರೇಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ, ಹೆಚ್ಚುವರಿ ದಂಡನಾಧಿಕಾರಿ ಕೆ.ಸುನಿಲ್ ಕುಮಾರ್, ಆರ್.ಡಿ.ಒ.ಕೆ.ರವಿ ಕುಮಾರ್, ಹುಸೂರ್ ಶಿರಸ್ತೇದಾರ್ ಕೆ.ನಾರಾಯಣನ್,ವಿ.ಕೆ.ರವಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಡಾ.ವಿ.ಪಿ.ಪಿ.ಮುಸ್ತಫಾ, ಬಾಕೃಷ್ಣ ಶೆಟ್ಟಿ, ಗೋವಿಂದನ್ ಪಳ್ಳೀಕ್ಕಾಪಿಲ್, ಎಂ.ಕುಂ?ಂಬು ನಂಬ್ಯಾರ್, ಎಂ.ಅನಂತನ್ ನಂಬ್ಯಾರ್, ನ್ಯಾಷನಲ್ ಅಬ್ದುಲ್ಲ, ಜೋಸೆಫ್ ವಡಗರ, ಎ.ಕೆ.ಆರಿಫ್, ಎಂ.ಎಚ್.ಜನಾರ್ದನ, ಅಶ್ರಫ್ ಕರ್ಲ ಮೊದಲಾದವರು ಉಪಸ್ಥಿತರಿದ್ದರು.


