ಬದಿಯಡ್ಕ: ಅವ್ಯವಹಾರಗಳನ್ನು ಮುಚ್ಚಿಹಾಕಲು ಯತ್ನಿಸುವ ಮುಸ್ಲಿಂಲೀಗಿನ ಒತ್ತಾಸೆಯೊಂದಿಗೆ ಕೈಜೋಡಿಸಿಕೊಂಡು ಅಧಿಕಾರವನ್ನು ಮುಂದುವರಿಸದೆ ಅಧ್ಯಕ್ಷರು ರಾಜೀನಾಮೆಯನ್ನು ನೀಡಿ ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಭ್ರಷ್ಟರೊಂದಿಗೆ ಕೈಜೋಡಿಸುವುದೂ ಮಹಾ ಅಪರಾಧವೇ ಆಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದರು.
ಬದಿಯಡ್ಕ ಗ್ರಾಮಪಂಚಾಯಿತಿಯಲ್ಲಿ ನಡೆದ ಅವ್ಯವಹಾರಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ರಾಜೀನಾಮೆನ್ನು ನೀಡಬೇಕೆಂದು ಆಗ್ರಹಿಸಿ ಗ್ರಾಮಪಂಚಾಯಿತಿ ಕಚೇರಿಯ ಮುಂಭಾಗದಲ್ಲಿ ಮಂಗಳವಾರ ಬಿಜೆಪಿ ಪಂಚಾಯಿತಿ ಸಮಿತಿಯು ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಮಾನಸದಲ್ಲಿ ಉತ್ತಮ ಹೆಸರನ್ನು ಗಳಿಸಿಕೊಂಡ ಕೃಷ್ಣ ಭಟ್ ಅವರನ್ನು ಬಲಿಪಶುವನ್ನಾಗಿಸುವ ಮುಸ್ಲಿಂಲೀಗ್ನೊಂದಿಗೆ ಕಾಂಗ್ರೆಸ್ ಕೈಜೋಡಿಸದೆ ಅಧಿಕಾರದಿಂದ ಕೆಳಗಿಳಿಯುವುದು ಸೂಕ್ತವಾಗಿದೆ. ಅವ್ಯವಹಾರಗಳ ಬಗ್ಗೆ ಉನ್ನತ ತನಿಖೆಗೆ ಬಿಜೆಪಿ ಆಗ್ರಹಿಸುತ್ತಿದೆ ಎಂದರು.
ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಎಂ.ಸುಧಾಮ ಗೋಸಾಡ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ 19 ವರ್ಷಗಳ ಸುಧೀರ್ಘವಾದ ಆಡಳಿತದ ಮೂಲಕ ಬದಿಯಡ್ಕ ಗ್ರಾಮಪಂಚಾಯಿತಿಯಲ್ಲಿ ಅವ್ಯವಹಾರಗಳನ್ನು ನಡೆಸುತ್ತಿರುವ ಮುಸ್ಲಿಂಲೀಗ್ ನೇತಾರರು ಶ್ರೀಮಂತರಾಗುತ್ತಿದ್ದಾರೆ. ಕೃಷ್ಣ ಭಟ್ ಅವರ ವರ್ಚಸ್ಸಿಗೆ ಮಸಿಬಳಿಯಲು ಯತ್ನಿಸುತ್ತಾ ಅಧಿಕಾರವನ್ನು ದುರುಪಯೋಗಪಡಿಸುತ್ತಿದ್ದಾರೆ. ಅಂಗನವಾಡಿಯ ಪುಟ್ಟ ಮಕ್ಕಳಿಗೆ ನೀಡಬೇಕಾದ ಆಟದ ಸಾಮಾಗ್ರಿಗಳಲ್ಲೂ ಅವ್ಯವಹಾರವನ್ನು ನಡೆಸಿರುವುದಲ್ಲದೆ ವಿವಿಧ ಕಾಮಗಾರಿಗಳಲ್ಲೂ ಇದೇ ರೀತಿ ಗ್ರಾಮಪಂಚಾಯಿತಿ ಆಡಳಿತ ಅವ್ಯವಹಾರವನ್ನು ನಡೆಸಿಕೊಂಡಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಮಪ್ಪ ಮಂಜೇಶ್ವರ, ನೇತಾರರಾದ ನಾರಾಯಣ ಭಟ್ ಮೈರ್ಕಳ, ಸುಕುಮಾರ ಕುದ್ರೆಪ್ಪಾಡಿ, ಅವಿನಾಶ್ ರೈ ಬದಿಯಡ್ಕ, ಕೆ.ಬಾಲಕೃಷ್ಣ ಶೆಟ್ಟಿ ಕಡಾರು, ಕೃಷ್ಣ ಮಣಿಯಾಣಿ ಮೊಳೆಯಾರು ಪಾಲ್ಗೊಂಡಿದ್ದರು. ಡಿ.ಶಂಕರ ಸ್ವಾಗತಿಸಿ, ವಿಶ್ವನಾಥ ಪ್ರಭು ಕರಿಂಬಿಲ ವಂದಿಸಿದರು. ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆ ನಡೆಯಿತು. ಗ್ರಾಮಪಂಚಾಯಿತಿ ವ್ಯಾಪ್ತಿಯ ವಿವಿಧ ವಾರ್ಡುಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅಭಿಮತ:
ಗ್ರಾಮಪಂಚಾಯಿತಿನಲ್ಲಿ ನಡೆದ ಅವ್ಯವಹಾರಗಳ ಕುರಿತು ಚರ್ಚಿಸಲು ವಿಶೇಷ ಸಭೆಯನ್ನು ನಡೆಸಲು ಬಿಜೆಪಿ ಜನಪ್ರತಿನಿಧಿಗಳು ಆಗ್ರಹಿಸಿತ್ತು. ಸಾಮಾನ್ಯ ಸಭೆಯಲ್ಲಿ ವಿಷಯವನ್ನು ಮಂಡಿಸಿದ ಆಡಳಿತ ಸಮಿತಿಯು ಮುಸ್ಲಿಂಲೀಗಿನ ಒತ್ತಾಸೆಯೊಂದಿಗೆ ಅವ್ಯಹಾರ ಪ್ರಕರಣಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ಅವ್ಯವಹಾರಗಳು ನಡೆದಿವೆ ಎಂದು ಸ್ವತಃ ಒಪ್ಪಿಕೊಂಡ ಅಧ್ಯಕ್ಷರು ಅಧಿಕಾರದಲ್ಲಿ ಮುಂದುವರಿಯುವುದು ಸರಿಯಲ್ಲ.
- ಡಿ.ಶಂಕರ, ಬದಿಯಡ್ಕ ಗ್ರಾಪಂ ಸದಸ್ಯರು.


