ಕುಂಬಳೆ: ವಿದ್ಯಾರ್ಥಿಗಳ ಸಾಲಿನಲ್ಲಿ ಪ್ರತಿಭಾವಂತರೋ, ದಡ್ಡರೋ ಯಾರೂ ನಗಣ್ಯರಲ್ಲ. ಪ್ರತಿಯೊಬ್ಬರಲ್ಲೂ ಖಂಡಿತಾ ಅಸೀಮ ಪ್ರತಿಭೆಯ ಸಾಮಥ್ರ್ಯ ಇದ್ದೇ ಇದೆ. ಆದರೆ ಅದನ್ನು ಗುರುತಿಸಿ, ಆ ಮಾರ್ಗದಲ್ಲಿ ಮುನ್ನಡೆಸುವ ಕೆಲಸ ಶಿಕ್ಷಣ ನೀಡುವ ಅಧ್ಯಾಪಕರಿಂದಾಗಬೇಕು. ಮುಗ್ಧ ಮಕ್ಕಳನ್ನು ಅಂಕ ಗಳಿಸುವ ಯಂತ್ರಕ್ಕಿಂತ ಮಿಗಿಲಾಗಿ ಶ್ರೇಷ್ಠ ಸಜ್ಜನ ನಾಗರಿಕ, ಅತ್ಯುತ್ತಮ ಸಾಧಕರನ್ನಾಗಿ ರೂಪಿಸಬೇಕಾದರೆ ಎಳವೆಯಿಂದಲೇ ಅವರಿಗೆ ಪ್ರೇರಣೆಯ, ಸ್ಪೂರ್ತಿಯ ಶಿಕ್ಷಣ ಸಿಗಬೇಕು. ಪ್ರಪಂಚದ ಸಾಧಕರ ಜೀವನಗಾಥೆಗಳ ಬೋಧನೆಯಾಗಬೇಕು ಎಂದು ಹಿರಿಯ ಪತ್ರಕರ್ತ, ಗಡಿನಾಡು ಕಾಸರಗೋಡಿನ ಬಹುಮುಖೀ ಸಾಂಸ್ಕøತಿಕ ಸಾಧಕ ಎಂ.ನಾ. ಚಂಬಲ್ತಿಮಾರ್ ಮಕ್ಕಳಿಗೆ ಪ್ರೇರಣೆಯ ಮಾತುಗಳೊಂದಿಗೆ ಸ್ಪೂರ್ತಿಯ ಕನಸು ಬಿತ್ತಿದರು.
"ಸಾಧಕರೆಡೆಗೆ ಶಾಲಾ ಮಕ್ಕಳ ನಡಿಗೆ" ಎಂಬ ಕೇರಳ ಸರಕಾರದ ನೂತನ ಶೈಕ್ಷಣಿಕ ಯೋಜನೆಯಂಗವಾಗಿ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯು 4ನೇ ತರಗತಿಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು 'ಕಣಿಪುರ' ಯಕ್ಷಗಾನ ಮಾಸಪತ್ರಿಕೆಯ ಸಂಸ್ಥಾಪಕ\ಸಂಪಾದಕ ಎಂ.ನಾ. ಚಂಬಲ್ತಿಮಾರ್ ಅವರನ್ನು ತಮ್ಮದೇ ಶಾಲೆಯ ಕ್ರೀಡಾಂಗಣದಲ್ಲಿ (ನ.21) ಸಂದರ್ಶಿಸಿ, ಸಂವಾದ ನಡೆಸಿದಾಗÀ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಕ್ಕಳಿಗೆ ಪ್ರೇರಣೆಯ ಮಾತುಗಳಲ್ಲಿ ಜೀವನದ ಯಶಸ್ಸಿಗೆ ಕನಸುಗಳನ್ನು ಕಾಣಬೇಕೆಂದೂ, ಅದರ ನನಗಾಸುವಿಕೆಗೆ ಹೆಜ್ಜೆ ಹೆಜ್ಜೆಯ ಪ್ರಯತ್ನ ಅಗತ್ಯವೆಂದೂ ಮಾರ್ಗದರ್ಶನ ಇತ್ತರು.
ಹಿಂದಿನ ಶಾಲಾ ಶಿಕ್ಷಣದಲ್ಲಿ ಈ ರೀತಿಯ ಅವಕಾಶಗಳಿರಲೇ ಇಲ್ಲ. ಆದ್ದರಿಂದ ನಮ್ಮ ತಲೆಮಾರು ಅವಕಾಶ ವಂಚಿತವಾಗಿದೆ. ಆದರೀಗ ಶಿಕ್ಷಣದ ಪದ್ಧತಿಗಳೇ ಬದಲಾಗಿ ಈಗಿನ ಮಕ್ಕಳು ಬಹುಮುಖೀ ಸಾಧ್ಯತೆಗಳಿಂದ ಅದೃಷ್ಟವಂತರಾಗಿದ್ದಾರೆ. ಇದನ್ನು ಸದುಪಯೋಗಿಸಲೇಬೇಕು, ತನ್ಮೂಲಕ ಭವ್ಯ ಭಾರತದ ನವಯುಗ ನಮ್ಮಿಂದಲೇ ಸೃಷ್ಟಿಯಾಗಬೇಕು ಎಂದು ಪ್ರತಿಯೊಬ್ಬ ಮಕ್ಕಳೂ ಪಣತೊಡಬೇಕು ಎಂದು ಮಕ್ಕಳಿಗೆ ಅವರು ಪ್ರೇರಣೆ ಇತ್ತರು.
ಖ್ಯಾತ ಪಕ್ಷಿ, ಪರಿಸರಾಸಕ್ತ ತಜ್ಞ, ಅಧ್ಯಾಪಕ ರಾಜು ಕಿದೂರು ಅವರ ಸಂಯೋಜನೆಯಲ್ಲಿ ವಿದ್ಯಾರ್ಥಿಗಳು ಸಾಧಕರನ್ನು ಸಂದರ್ಶಿಸಿ, ಟಿಪ್ಪಣಿ ಮಾಡಿಕೊಂಡರು. ವಿದ್ಯಾರ್ಥಿಗಳಾದ ಕು. ರಕ್ಷಿತಾ ಸ್ವಾಗತಿಸಿ, ತೇಜಸ್ ವಂದಿಸಿದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಎಲಿಜಬೆತ್ ಉಪಸ್ಥಿತರಿದ್ದರು.



