ಬದಿಯಡ್ಕ: ನೀರ್ಚಾಲು ಖಂಡಿಗೆಯ ಪುರಾತನ ಮದಕದ ಪುನರ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ತೃಶೂರ್ ವಿಭಾಗದ ಸಹಾಯಕ ಯೋಜನಾ ಅಭಿಯಂತರ ದಿನೇಶ್ ಅವರ ನೇತೃತ್ವದ ತಜ್ಞರ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿತು.
2011ರಲ್ಲಿ ಸಹಸ್ರ ಸರೋವರ 20ನೇ ಯೋಜನೆಯಲ್ಲಿ ಒಳಪಡಿಸಿ 94 ಲಕ್ಷ ರೂ.ಗಳ ಬೃಹತ್ ಮೊತ್ತ ಬಳಸಿ ವಿಶಾಲ ಮಳೆ ನೀರು ಸಂಗ್ರಹ ಜಲಾಶಯವು ನಿರ್ಮಾಣ ಪ್ರಸ್ತುತ 156 ಮೀಟರ್ ಉದ್ದ, 20 ಮೀಟರ್ ಅಗಲ 4.5 ಮೀಟರ್ ಆಳದ ಕಾಮಗಾರಿಯನ್ನು ವೀಕ್ಷಿಸಿದ ಅಧಿಕಾರಿಗಳ ತಂಡ ಮಾಹಿತಿ ಸಂಗ್ರಹಿಸಿ ಚರ್ಚೆ ನಡೆಸಿತು.
ಕೆರೆಯನ್ನು ಆಳಗೊಳಿಸುವ ಸಂದರ್ಭ ಸಂಗ್ರಹವಾದ ಕೆಂಪುಮಣ್ಣು ಮಿಶ್ರಿತ ಖನನಗೊಂಡ ಮಣ್ಣು ಬಹಿರಂಗ ಹರಾಜಿನಲ್ಲಿ ವಿಲೇವಾರಿಗೊಳಿಸಿರುವ ಬಗ್ಗೆ ವಿವರ ಸಂಗ್ರಹಿಸಿದರು. ಆಳಗೊಳಿಸಲಾದ ಮದಕದ ಸುಸ್ಥಿರವಾಗಿ ಸುಧೀರ್ಘ ಅವಧಿ ಸುರಕ್ಷಿತವಾಗಿ ಇರುವ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಕೆರೆಯ ಒಳ ಹಾಗೂ ಬಾಹ್ಯಜಲ ಒತ್ತಡದ ಶಕ್ತಿ ತಡೆಹಿಡಿದುಕೊಳ್ಳುವ ರೀತಿ-ಪರಿಣಾಮಗಳ ಬಗ್ಗೆ ಜಲತಜ್ಞರ ಅಭಿಪ್ರಾಯ ಸಂಗ್ರಹಿಸಿ ಸುರಕ್ಷಿತ ಅಡಿಪಾಯದೊಂದಿಗೆ ಸುತ್ತುಗೋಡೆ ನಿರ್ಮಿಸಬೇಕಾಗಿ ಯೋಜನಾ ಅಭಿಯಂತರರ ತಂಡ ಮದಕ ನಿರ್ಮಾಣ ಸಮಿತಿ ಸಂಚಾಲಕ ಎಂ.ಎಚ್.ಜನಾರ್ದನ ಅವರಿಗೆ ಮಾರ್ಗದರ್ಶನ ನೀಡಿದರು.
ಈಗಾಗಲೇ ಮದಕ ನಿರ್ಮಾಣದ ಶೇ.65 ಕೆಲಸ ಕಾರ್ಯಗಳು ಅಂತಿಮ ಹಂತದಲ್ಲಿದ್ದು, ಮಳೆಗಾಲಕ್ಕೆ ಮೊದಲು ಪೂರ್ಣಗೊಳ್ಳುವುದಾಗಿ ಅಧಿಕೃತರು ತಿಳಿಸಿರುವರು. ಸಹಾಯಕ ಯೋಜನಾ ಅಭಿಯಂತರ ಅವರೊಂದಿಗೆ ಅಭಿಯಂತರರಾದ ಅನು, ಅರ್ಜುನ್ ತಂಡದಲ್ಲಿದ್ದರು.