HEALTH TIPS

ಹಿರಿಯರ ನೆನಪು-ಪೂರ್ವರಂಗ ಅಧ್ಯಯನ ಶಿಬಿರ ಆರಂಭ: ಯಕ್ಷಗಾನದ ಸಾಂಪ್ರದಾಯಿಕ ಪೂರ್ವರಂಗ ಮರೆಯಾಗದಿರಲಿ-ಗ್ರಾಮಾಧಿಕಾರಿ ಸತ್ಯನಾರಾಯಣ ತಂತ್ರಿ-ಸ್ವಸ್ತಿಶ್ರೀ ಪ್ರತಿಷ್ಠಾನ ಹಾಗೂ ಯಕ್ಷಗಾನ ಅಕಾಡೆಮಿಯ ಜಂಟಿ ಕಾರ್ಯಕ್ರಮ


         ಕುಂಬಳೆ: ಕಲೆಯನ್ನು ಆರಾಧನೆಯಾಗಿ ಕಂಡುಕೊಂಡ ಸಂಸ್ಕøತಿ ನಮ್ಮ ಮಣ್ಣಿನ ಹಿರಿಮೆಯಾಗಿದೆ. ಹಿರಿಯ ತಲೆಮಾರಿನ ನಿರಂತರ ಶ್ರಮ, ತ್ಯಾಗದ ಪರಿಣಾಮವಾಗಿ ಇಂದು ಶ್ರೀಮಂತ ವೈವಿಧ್ಯ ಕಲಾರೂಪಗಳು ನಮಗೆ ಆಸ್ವಾದನೆಗೆ ಲಭ್ಯವಾಗಿದೆ. ಯಕ್ಷಗಾನ ಇಂತಹ ಕಲಾ ಪ್ರಪಂಚದ ಅದ್ವಿತೀಯ ಕಲಾಪ್ರಕಾರವಾಗಿ ಜಗತ್ತನ್ನು ಬೆರಗಾಗಿಸಿದ್ದು, ಪರಂಪರೆಯ ಮೂಲ ಸ್ವರೂಪವನ್ನು ಉಳಿಸುವ ಅಗತ್ಯ ಇದೆ ಎಂದು ಎಡನಾಡು ಗ್ರಾಮಾಧಿಕಾರಿ ಸತ್ಯನಾರಾಯಣ ತಂತ್ರಿ ಅವರು ತಿಳಿಸಿದರು.
        ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನ ಎಡನಾಡು ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಸೂರಂಬೈಲು ಶ್ರೀಗಣೇಶ ಕಲಾಮಂದಿರದಲ್ಲಿ ಆಯೋಜಿಸಲಾದ ಎರಡು ದಿನಗಳ ವಿಶೇಷ ಕಾರ್ಯಕ್ರಮ "ಹಿರಿಯರ ನೆನಪು ಮತ್ತು ಯಕ್ಷಗಾನ ಪೂರ್ವರಂಗ ಅಧ್ಯಯನ ಶಿಬಿರ"ವನ್ನು ಶನಿವಾರ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
         ಜ್ಞಾನ ಸಂಪನ್ನತೆಯ ಮುಕುಟವಾದ ಯಕ್ಷಗಾನ ಕಲೆಯು ಪೂರ್ವ ಸೂರಿಗಳ ಅಹರ್ನಿಶಿ ನಿರೂಪಣೆಯಲ್ಲಿ ಸಿದ್ದಗೊಂಡ ಅತ್ಯಪೂರ್ವ ಶ್ರೀಮಂತ ಕಲೆಯಾಗಿದ್ದು, ಪೂರ್ವರಂಗದಂತಹ ಸಾಂಪ್ರದಾಯಿಕತೆ ಇಂದು ಮರೆಯಾಗಿರುವುದು ಕಲೆಗೆಸೆವ ಅಪಚಾರವಾಗಿದೆ. ಪರಂಪರೆಯನ್ನು ಉಳಿಸಿ ಪರಿಪೋಶಿಸಿವ ಅಗತ್ಯವನ್ನು ನಾವು ಮನಗಾಣಬೇಕು ಎಂದು ಅವರು ತಿಳಿಸಿದರು.
        ಹಿರಿಯ ಸಾಂಸ್ಕøತಿಕ ಸೇವಕ ಗೋಪಾಲಕೃಷ್ಣ ಭಟ್ ಮಜಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ತಲೆಮಾರಿನ ಕಲಾಸಕ್ತಿಗೆ ಸ್ಪಷ್ಟ ಮಾರ್ಗದರ್ಶನ ನೀಡುವ ಜವಾಬ್ದಾರಿ ಹಿರಿಯರಿಗಿದೆ. ಈ ನಿಟ್ಟಿನಲ್ಲಿ ಮಾರ್ಗದರ್ಶಿ ಶಿಬಿರಗಳನ್ನು ಆಯೋಜಿಸಿರುವ ಸ್ವಸ್ತಿಶ್ರೀ ಪ್ರತಿಷ್ಠಾನದ ಚಿಂತನೆ ಸ್ತುತ್ಯರ್ಹವಾದುದು ಎಂದು ತಿಳಿಸಿದರು.
        ಕೇರಳ ಸರ್ಕಾರದ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಮಾಜಿ ಅಧ್ಯಕ್ಷ ಶಂಕರ ರೈ ಮಾಸ್ತರ್, ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಪ್ರಬಂಧಕ ಎ.ಕೃಷ್ಣ ಭಟ್, ಎಡನಾಡು ಕ್ಷೀರೋತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಎಂ.ಶಂಕರನಾರಾಯಣ ರಾವ್, ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್ ಆನಂದ ಭಂಡಾರಿ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಸ್ವಸ್ತಿಶ್ರೀಕಲಾ ಪ್ರತಿಷ್ಠಾನದ ನಿರ್ದೇಶಕ ದಿವಾಣ ಶಿವಶಂಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಯ ಎಸ್ ಚಿಗುರುಪಾದೆ ಸ್ವಾಗತಿಸಿ, ಹೃಶಿಕೇಶ ಬದಿಯಡ್ಕ ವಂದಿಸಿದರು. ಅವಿನಾಶ ಕಾರಂತ ಪಾಡಿ ಕಾರ್ಯಕ್ರಮ ನಿರೂಪಿಸಿದರು.
    ಬಳಿಕ ದಿವಾಣ ಶಿವಶಂಕರ ಭಟ್ ನಿರ್ದೇಶನದಲ್ಲಿ ಯಕ್ಷಗಾನ ಪೂರ್ವರಂಗದ ಅಧ್ಯಯನ ಶಿಬಿರ ನಡೆಯಿತು.
   ಇಂದು(ಭಾನುವಾರ):
   ಭಾನುವಾರ ಬೆಳಿಗ್ಗೆ 10 ರಿಂದ 11ರ ವರೆಗೆ ಯಕ್ಷಗಾನೀಯ ರಸಪ್ರಶ್ನೆ ಸ್ಪರ್ಧೆ, 11 ರಿಂದ ಅಪರಾಹ್ನ 1ರ ವರೆಗೆ ಮಾತಿನ ಮಂಟಪ ಯಕ್ಷಕವಿ-ಕಾವ್ಯ ವಿಚಾರ ನಡೆಯಲಿದ್ದು ಜಬ್ಬಾರ್ ಸಮೋ ಸಂಪಾಜೆ ಸಮನ್ವಯಕಾರರಾಗಿ ಭಾಗವಹಿಸುವರು. ಜಿಲ್ಲಾ ವಾರ್ತಾ ಇಲಾಖೆಯ ಕನ್ನಡ ಮಾಹಿತಿ ಸಹಾಯಕ ಅಧಿಕಾರಿ ವೀ.ಜಿ.ಕಾಸರಗೋಡು, ಪತ್ರಕರ್ತ ಪುರುಷೋತ್ತಮ ಭಟ್ ಅವಲೋಕನ ನಡೆಸುವರು. ಕಣಿಪುರ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಸಂಯೋಜನೆ ನಡೆಸುವರು. ಅಪರಾಹ್ನ 2.30 ರಿಂದ ಸಂಜೆ 5.30ರ ವರೆಗೆ ಕರ್ಣಬೇಧನ ಆಖ್ಯಾಯಿಕೆಯ ಯಕ್ಷಗಾನ ಕೂಟ ನಡೆಯಲಿದೆ. ಸಚಿನ್ ಶೆಟ್ಟಿ ಕುದ್ರೆಪ್ಪಾಡಿ,(ಭಾಗವತಿಕೆ), ರಾಜೇಂದ್ರಪ್ರಸಾದ್ ಪುಂಡಿಕಾೈ, ಶ್ರೀಸ್ಕಂದ ದಿವಾಣ(ಚೆಂಡೆ-ಮದ್ದಳೆ), ಅರ್ಥಧಾರಿಗಳಾಗಿ ನಾರಾಯಣ ಮಣಿಯಾಣಿ ಬೆಳ್ಳಿಗೆ, ಗೋಪಾಲಕೃಷ್ಣ ನಾಯಕ್ ಸೂರಂಬೈಲು, ಪುರುಷೋತ್ತಮ ಭಟ್ ಕೆ ಭಾಗವಹಿಸುವರು. ಸಂಜೆ 5ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ರತ್ನಾಕರ ಮಲ್ಲಮೂಲೆ ಅವರು ಲಾಂಛನ ಬಿಡುಗಡೆಗೊಳಿಸುವರು. ಈ ಸಂದರ್ಭ ನಡೆಯುವ ಹಿರಿಯರ ನೆನಪು ಕಾರ್ಯಕ್ರಮದಲ್ಲಿ ದಿ.ಕೆ.ಗೋವಿಂದ ಭಟ್ ಸೂರಂಬೈಲು, ದಿ.ಕೆ.ರಾಮಯ್ಯ ಭಟ್ ಕುಳ್ಳಂಬೆಟ್ಟು, ದಿ.ವಿಠಲ ಶರ್ಮ ಅಜ್ಜಕಾನ, ದಿ.ಆನಂದ ನಾಯಕ್ ಸೂರಂಬೈಲು, ದಿ.ಗಣಪತಿ ದಿವಾಣ ಇವರ ಸಂಸ್ಮರಣೆಯನನು ನಾರಾಯಣ ಮಣಿಯಾಣಿ ಬೆಳ್ಳಿಗೆ ಹಾಗೂ ಗೋಪಾಲಕೃಷ್ಣ ನಾಯಕ್ ಸೂರಂಬೈಲು ನಿರ್ವಹಿಸುವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ, ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯ ಟಿ.ಎ.ಎನ್.ಖಂಡಿಗೆ, ಪುತ್ತಿಗೆ ಗ್ರಾ.ಪಂ.ಸದಸ್ಯ ವರಪ್ರಸಾದ್ ಪೆರ್ಣೆ, ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯಂತ ಪಾಟಾಳಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಯಕ್ಷಗಾನ ಅಧ್ಯಯನಕ್ಕೆ ಡಾಕ್ಟರೇಟ್ ಪದವಿ ಪೆಡೆದ ಡಾ.ಸತೀಶ ಪುಣಿಚಿತ್ತಾಯ ಪೆರ್ಲ ಅವರನ್ನು ಈ ಸಂದರ್ಭ ಗೌರವಿಸಿ ಅಭಿನಂದಿಸಲಾಗುವುದು. ಬಳಿಕ ಸಂಜೆ 6.30 ರಿಂದ ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ ನಡೆಯಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries