ಕಾಸರಗೋಡು: ಕಾರ್ಮಿಕರ ಕನಿಷ್ಠ ತಿಂಗಳ ವೇತನ 21 ಸಾವಿರ ರೂ.ಗೇರಿಸಬೇಕು, ಕನಿಷ್ಠ ಪಿಂಚಣಿಯನ್ನು 10000 ರೂ. ಆಗಿ ನಿಗದಿಪಡಿಸಬೇಕು, ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಕ್ರಮದಿಂದ ಹಿಂದೆ ಸರಿಯಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳು ಇಂದು(ಬುಧವಾರ)ಕರೆ ನೀಡಿರುವ `ಭಾರತ್ ಬಂದ್'ನಿಂದ ಕೇರಳ ರಾಜ್ಯ ಸ್ತಬ್ದಗೊಳ್ಳುವ ಸಾಧ್ಯತೆಯಿದೆ.
ಬುಧವಾರ ರಾತ್ರಿ 12 ಗಂಟೆಯವರೆಗೆ ನಡೆಯುವ 24 ಗಂಟೆಗಳ ಭಾರತ್ ಬಂದ್ನಲ್ಲಿ ಕೇಂದ್ರ ಮತ್ತು ಸರ್ಕಾರಿ ನೌಕರರು, ಬ್ಯಾಂಕ್, ಇನ್ಶೂರೆನ್ಸ್, ಬಿಎಸ್ಎನ್ಎಲ್ ನೌಕರರ ಸಂಘಟನೆಗಳು ಭಾಗವಹಿಸಲಿವೆ ಎಂದು ಸಿಐಟಿಯು ಕೇರಳ ರಾಜ್ಯ ಕಾರ್ಯದರ್ಶಿ ಎಳಮರಂ ಕರೀಂ ತಿಳಿಸಿದ್ದಾರೆ. ವ್ಯಾಪಾರಿ ಸಂಸ್ಥೆಗಳನ್ನು ಮುಚ್ಚಲಾಗುವುದೆಂದು ವ್ಯಾಪಾರಿ ವ್ಯವಸಾಯಿ ಸಮಿತಿ ಅಧ್ಯಕ್ಷ ವಿ.ಕೆ.ಸಿ.ಮೊಹಮ್ಮದ್ ಕೋಯ ತಿಳಿಸಿದ್ದಾರೆ. ರಾಷ್ಟ್ರೀಯ ಮುಷ್ಕರದಿಂದಾಗಿ ಖಾಸಗಿ ಬಸ್ಗಳಾಗಲಿ, ಕೆಎಸ್ಆರ್ಟಿಸಿ ಬಸ್ಗಳಾಗಲಿ ರಸ್ತೆಗಿಳಿಯುವ ಸಾಧ್ಯತೆ ಕಡಿಮೆ. ಈ ಕಾರಣದಿಂದ ಜನಜೀವನ ಅಸ್ತವ್ಯಸ್ತಗೊಳ್ಳುವುದು ಬಹುತೇಕ ಖಚಿತವಾಗಿದೆ.
ದೇಶದ ಪ್ರಮುಖ 10 ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ಗೆ ಬೆಂಬಲ ನೀಡಿರುವುದರಿಂದ ಬಹುತೇಕ ಎಲ್ಲಾ ವಲಯಗಳು ಸ್ತಬ್ದಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳು, ಸರಕು ಸಾಗಾಟ ಲಾರಿಗಳು ಸಂಚಾರ ಸ್ಥಗಿತಗೊಳ್ಳುವುದರ ಜೊತೆಗೆ ಬ್ಯಾಂಕಿಂಗ್, ವಿಮೆ ಸಹಿತ ವಿವಿಧ ಕಚೇರಿ ಚಟುವಟಿಕೆಗಳೂ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ಸಿ.ಐ.ಟಿ.ಯು, ಐಎನ್ಟಿಯುಸಿ, ಎಐಟಿಯುಸಿ, ಎಸ್ಟಿಯು, ಎಚ್ಎಂಎಸ್, ಯುಟಿಯುಸಿ, ಎಐಟಿಯು, ಎಐಟಿಯುಸಿ, ಟಿಯುಸಿಐ, ಕೆಟಿಯುಸಿ(ಜೆ), ಕೆಟಿಯುಸಿ(ಎಂ), ಐಎನ್ಎಲ್ಸಿ, ಎನ್ಎನ್ಸಿ, ಎನ್.ಎಲ್.ಒ.ಒ, ಕೆಟಿಯುಸಿ, ಎಚ್.ಎಂ.ಕೆ.ಪಿ. ಮತ್ತು ಜೆ.ಟಿ.ಯು. ಮೊದಲಾದ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ನಲ್ಲಿ ಭಾಗವಹಿಸಲಿವೆ.
ಬಿ.ಎಂ.ಎಸ್. ಹೊರತುಪಡಿಸಿ ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳು ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ. ವಿವಿಧ ಕಾರ್ಮಿಕ ಸಂಘಟನೆಗಳು ಆಯೋಜಿಸಿರುವ ಭಾರತ್ ಬಂದ್ ರಾಜಕೀಯ ಪ್ರೇರಿತ ಹಾಗು ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ಕಾರ್ಮಿಕರನ್ನು ಎತ್ತಿಕಟ್ಟಲಿರುವ ತಂತ್ರ ಎಂದು ಬಿಜೆಪಿ ಬೆಂಬಲಿತ ಕಾರ್ಮಿಕ ಸಂಘಟನೆಗಳು ಹೇಳಿವೆ.
ಸ್ಪಷ್ಟೀಕರಣ ಸಭೆ : ಭಾರತ್ ಬಂದ್ ಸಂಬಂಧ ಸ್ಟೇಟ್ ಎಂಪೆÇ್ಲೀಯಿಸ್ ಆ್ಯಂಡ್ ಟೀಚರ್ಸ್ ಓರ್ಗನೈಸೇಶನ್ (ಸೆಟ್ಟೋ) ಕಾಸರಗೋಡು ತಾಲೂಕು ಸಮಿತಿಯ ನೇತೃತ್ವದಲ್ಲಿ ಹೊಸ ಬಸ್ ನಿಲ್ದಾಣ ಪರಿಸರದ ಸಹಿ ಮರದಡಿಯಲ್ಲಿ ಆಯೋಜಿಸಿದ ಸ್ಪಷ್ಟೀಕರಣ ಸಭೆಯನ್ನು ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಕುನ್ನಿಲ್ ಉದ್ಘಾಟಿಸಿ ಮಾತನಾಡಿದರು.
ಬೆಂಬಲವಿಲ್ಲ : ಜ.8 ರಂದು ನಡೆಯುವ ಭಾರತ ಬಂದ್ಗೆ ಕೇರಳ ಎನ್.ಜಿ.ಒ.ಸಂಘ್ ಬೆಂಬಲಿಸುವುದಿಲ್ಲವೆಂದು ಎನ್ಜಿಒ ಸಂಘ್ ಕಾಸರಗೋಡು ಜಿಲ್ಲಾ ಸಮಿತಿ ತಿಳಿಸಿದೆ. ಕೇಂದ್ರದ ಸಾರ್ವಜನಿಕ ಸಂಸ್ಥೆಗಳನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಭಾರತ್ ಬಂದ್ಗೆ ಕರೆ ನೀಡಿರುವವರು ಕೇರಳದ ಪ್ರಮುಖ ಸಾರ್ವಜನಿಕ ಸಂಸ್ಥೆಯಾಗಿರುವ ಕೆಎಸ್ಆರ್ಟಿಸಿಯನ್ನು ನಾಶದತ್ತ ಕೊಂಡೊಯ್ದವರಾಗಿದ್ದಾರೆ. ಸಹಭಾಗಿತ್ವ ಪಿಂಚಣಿ ಹಿಂತೆಗೆದುಕೊಳ್ಳುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇರಳ ಸರ್ಕಾರ ಈವರೆಗೂ ಈ ಭರವಸೆಯನ್ನು ಈಡೇರಿಸಿಲ್ಲ. ಅಂತಹ ಸಂಘಟನೆ ಕೇರಳ ಸರ್ಕಾರದ ವಿರುದ್ಧ ಭಾರತ್ ಬಂದ್ಗೆ ಕರೆ ನೀಡಿದೆ. ಈ ಮುಷ್ಕರ ರಾಜಕೀಯ ಪ್ರೇರಿತವಾಗಿದೆ ಎಂದು ಎನ್ಜಿಒ ಸಂಘ್ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಗಂಗಾಧರನ್, ರಾಜ್ಯ ಉಪಾಧ್ಯಕ್ಷ ಪಿ.ಪಿತಾಂಬರನ್, ಜಿಲ್ಲಾ ಕಾರ್ಯದರ್ಶಿ ಸಿ.ವಿಜಯನ್, ಕರುಣಾಕರನ್ ಹೇಳಿದರು.




