ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಮತ್ತೆ ಅಟ್ಟಹಾಸ ಮುಂದುವರಿದಿದೆ. ಕೇರಳದಲ್ಲಿ ಶುಕ್ರವಾರ ಪತ್ತೆಯಾಗಿರುವ 39 ಕರೊನಾ ವೈರಸ್ ಪ್ರಕರಣದಲ್ಲಿ 34 ಮಂದಿ ಕಾಸರಗೋಡು ನಿವಾಸಿಗಳದ್ದೆಂದು ಖಚಿತಗೊಂಡಿದೆ. ಕಣ್ಣೂರಿನಲ್ಲಿ ಇಬ್ಬರು, ತೃಶ್ಯೂರ್, ಕೋಯಿಕ್ಕೋಡ್ ಹಾಗೂ ಕೊಲ್ಲಂನಲ್ಲಿ ತಲಾ ಒಬ್ಬರಲ್ಲಿ ವೈರಸ್ ಪತ್ತೆಯಾಗಿದೆ.
ಈ ಮೂಲಕ ಕಾಸರಗೋಡಿನಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ 81 ಕ್ಕೇರಿದೆ. ಇವರೆಲ್ಲರಿಗೂ ಚಿಕಿತ್ಸೆ ನೀಡುವುದೇ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ರಾಜ್ಯದಲ್ಲಿ ಅತಿ ಹೆಚ್ಚು ಮಂದಿಯಲ್ಲಿ ವೈರಸ್ ಖಚಿತಗೊಂಡ ದಿನವಾಗಿದೆ. ಕೊಲ್ಲಂನಲ್ಲಿ ಇದೇ ಮೊದಲ ಬಾರಿಗೆ ಕೋವಿಡ್-19 ಪತ್ತೆಯಾಗಿದ್ದು, ಈ ಮೂಲಕ ಕೇರಳದ ಎಲ್ಲ ಜಿಲ್ಲೆಗಳಲ್ಲೂ ಕರೊನಾ ವೈರಸ್ ಪತ್ತೆಯಾದಂತಾಗಿದೆ.
ಕೇರಳದಲ್ಲಿ ವೈರಸ್ ಸೋಂಕುಪೀಡಿತರ ಸಂಖ್ಯೆ 164ಕ್ಕೇರಿದೆ. 112ಮಂದಿಯನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯದಲ್ಲಿ ಒಟ್ಟು 110299ಮಂದಿ ನಿಗಾದಲ್ಲಿದ್ದು, ಇವರಲ್ಲಿ 616ಮಂದಿ ಆಸ್ಪತ್ರೆ ಹಾಗೂ ಉಳಿದವರು ಮನೆಗಳಲ್ಲಿ ನಿಗಾದಲ್ಲಿದ್ದಾರೆ. ಶುಕ್ರವಾರ 5679ಮಂದಿಯ ತಪಾಸಣಾ ವರದಿ ಕೈಸೇರಿದ್ದು, ಇದರಲ್ಲಿ 4448ಮಂದಿಯಲ್ಲಿ ರೋಗಬಾಧೆಯಿಲ್ಲ ಎಂದು ಖಚಿತಗೊಂಡಿದೆ.
ಕಾಸರಗೋಡಿನ ಸ್ಥಿತಿ ಗಂಭೀರವಾಗಿ ಮುಂದುವರಿಯುತ್ತಿದ್ದರೂ, ಜನತೆ ಆತಂಕಪಡಬೇಕಾಗಿಲ್ಲ. ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆ ಹಾಗೂ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗುವುದು. ಜೊತೆಗೆ ಉಕ್ಕಿನಡ್ಕದಲ್ಲಿ ನಿರ್ಮಾಣಹಂತದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನೂ ಕೋವಿಡ್ ಆಸ್ಪತ್ರೆಯನ್ನಾಗಿ ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು. ಕಾಸರಗೋಡು ಪೆರಿಯದಲ್ಲಿರುವ ಕೇಂದ್ರೀಯ ವಿಶ್ವ ವಿದ್ಯಾಲಯವನ್ನು ಕೋವಿಡ್-19ರ ಪ್ರಾಥಮಿಕ ಕೇಂದ್ರವನ್ನಾಗಿ ಮಾರ್ಪಡಿಸಲಾಗುವುದು, ಈ ಬಗ್ಗೆ ಐಸಿಎಂಆರ್ನ ಅನುಮತಿ ಪಡೆದುಕೊಳ್ಳಲಾಗುವುದು. ಇಲ್ಲಿ ಕೋವಿಡ್ ತಪಾಸಣೆಗೆ ಬೇಕಾದ ಎಲ್ಲ ಸೌಕರ್ಯ ಹೊಂದಿದೆ. ಕೇರಳ-ಕರ್ನಾಟಕ ಗಡಿ ಹಂಚಿಕೊಂಡಿರುವ ಪ್ರದೇಶಗಳಲ್ಲಿ ಕರ್ನಾಟಕ ಸರ್ಕಾರ ರಸ್ತೆಗೆ ಮಣ್ಣು ಸುರಿದು ಹಾಗೂ ಅಗೆದು ರಸ್ತೆ ತಡೆ ನಿರ್ಮಾಣಮಾಡಿರುವುದನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ.


