ಕಾಸರಗೋಡು: ಕರೊನಾ ವೈರಸ್ ಪ್ರತಿರೋಧ ಕಾರ್ಯಾಚರಣೆ ಅಂಗವಾಗಿ ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿದರು. ಮಂಗಳೂರು-ಕೋಯಂಬತ್ತೋರ್ ಇಂಟರ್ಸಿಟಿ ರೈಲಿನಲ್ಲಿ ಕಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಮಹಿಳಾ ಠಾಣೆ ಎಸ್.ಐ ಅಜಿತಾ, ಸ್ಥಳೀಯ ಪೊಲೀಸ್, ಮಹಿಳಾ ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣಾ ಕಾರ್ಯದಲ್ಲಿ ಸಹಕರಿಸಿದರು.
ವಾಹನ, ರೈಲುಗಳಲ್ಲಿ ತಪಾಸಣೆ:
ಕೋವಿಡ್-19 ವೈರಸ್ ಆತಂಕದ ಹಿನ್ನೆಲೆಯಲ್ಲಿ ತಪಾಸಣಾ ಕಾರ್ಯ ಮತ್ತಷ್ಟು ಚುರುಕುಗೊಳಿಸಲಾಗಿದೆ. ರೈಲು ನಿಲ್ದಾಣಗಳಲ್ಲಿ ಡಿವೈಎಸ್ಎಸ್ಪಿ ನೇತೃತ್ವದಲ್ಲಿ ತಪಾಸಣೆ ಆಯೋಜಿಸಲಾಗುತ್ತಿದ್ದರೆ, ಗಡಿಪ್ರದೇಶಗಳಲ್ಲಿ ಆರ್ಟಿಓ ಚೆಕ್ಪೋಸ್ಟ್ಗಳಲ್ಲಿ ಆರ್ಟಿಓ ಅಧಿಕಾರಿಗಳ ನೇತೃತ್ವದಲ್ಲಿ ತಪಾಸಣೆ ಆರಂಭಿಸಲಾಗಿದೆ. ಇವರೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಇರುತ್ತಾರೆ. ಇತರ ರಾಜ್ಯಗಳಿಂದ ಕೇರಳಕ್ಕೆ ಆಗಮಿಸುವವರನ್ನು ತಪಾಸಣೆ ನಡೆಸಲಾಗುತ್ತಿದ್ದು, ರೋಗಲಕ್ಷಣ ಕಂಡುಬಂದಲ್ಲಿ ಆಸ್ಪತ್ರೆಗೆ ದಾಖಲಿಸುವುದು ಹಾಗೂ ಇತರರಿಗೆ ಕಟ್ಟುನಿಟ್ಟಿನ ನಿರ್ದೇಶಗಳನ್ನು ನೀಡಲಾಗುತ್ತಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಪೆರ್ಲ, ಆದೂರು ಸಹಿತ ಗಡಿ ಪ್ರದೇಶದ ಚೆಕ್ಪೋಸ್ಟ್ಗಳಲ್ಲಿ ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತಿದೆ. ರೈಲುಗಳಲ್ಲಿ ಎಲ್ಲ ಬೋಗಿಗಳಲ್ಲೂ ತಪಾಸಣೆ ಚುರುಕುಗೊಳಿಸಲಾಗುತ್ತಿದೆ. ತಪಾಸಣಾ ವರದಿಯನ್ನು ಪ್ರತಿದಿನ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗೆ ಸಮರ್ಪಿಸಿ, ಪ್ರತಿದಿನ ಸಭೆ ನಡೆಸಿ ಅವಲೋಕನ ನಡೆಯಲಿದೆ.ಇನ್ನೊಂದೆಡೆ ಹೊರ ರಾಜ್ಯ ಕಾರ್ಮಿಕರು ವಾಸಿಸುತ್ತಿರುವ ಪ್ರದೇಶಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಮದುವೆ, ಸಮಾರಂಭ, ಹೆಚ್ಚು ಜನರನ್ನು ಸೇರಿಸಿ ನಡೆಸುವ ಧಾರ್ಮಿಕ ಕಾರ್ಯಕ್ರಮ, ಉತ್ಸವಗಳಿಗೂ ಸರ್ಕಾರ ನಿಯಂತ್ರಣ ಹೇರಿದೆ.ಪ್ರವಾಸೋದ್ಯಮ ಕೇಂದ್ರಗಳನ್ನೂ ತಾತ್ಕಾಲಿಕವಾಗಿ ಮುಚ್ಚಲಾಗಿದೆ.


