ಕಾಸರಗೋಡು: ಕೋವಿಡ್-19 ವೈರಸ್ ಕೇರಳದ ಜನತೆಯನ್ನು ಹೆಚ್ಚಾಗಿ ಬಾಧಿಸುತ್ತಿದ್ದರೂ, ಮದ್ಯಪಾನದಿಂದ ಹಿಂದೆ ಸರಿಯಲು ಇಲ್ಲಿನ ಮದ್ಯಪ್ರಿಯರ ಮನಸ್ಸು ಸುತರಾಂ ಒಪ್ಪುತ್ತಿಲ್ಲ. ಕಾಸರಗೋಡು ಜಿಲ್ಲೆಯಲ್ಲಿ ಮದ್ಯಮಾರಾಟಕೇಂದ್ರಗಳೆಲ್ಲ ಮುಚ್ಚುಗಡೆಗೊಂಡಿರುವುದರಿಂದ ಮದ್ಯಪ್ರಿಯರಲ್ಲಿ ತಳಮಳವುಂಟಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರಲ್ಲಿ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಟ್ಟುನಿಟ್ಟಿನ ನಿಯಂತ್ರಣ ಜಾರಿಯಲ್ಲಿದೆ. ಇಲ್ಲಿ ಬಾರ್, ಬೀವರೇಜಸ್ ಮದ್ಯಮಾರಾಟ ಔಟ್ಲೆಟ್ಗಳನ್ನೂ ಬಂದ್ ಮಾಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಬೀವರೇಜಸ್ ಹೊರತುಪಡಿಸಿ, ಇತರ ಮದ್ಯಮಾರಾಟಕೇಂದ್ರಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಈ ಮಧ್ಯೆ ಬೀವರೇಜಸ್ ನಿಗಮದ ಮದ್ಯ ಮಾರಾಟಕೇಂದ್ರಗಳಲ್ಲಿ ಮದ್ಯಕ್ಕಾಗಿ ಸರತಿಸಾಲು ಭಾರಿ ಸಂಖ್ಯೆಯಲ್ಲಿ ಹಚ್ಚಾಗುತ್ತಿದ್ದು, ಇದು ಕರೊನಾವೈರಸ್ ನಿಯಂತ್ರಣಕ್ಕಿರುವ ಸರ್ಕಾರದ ಮಾನದಂಡ ಪಾಲನೆಗೆ ತಡೆಯಾಗುತ್ತಿದೆ. ಮದ್ಯಖರೀದಿಗಾಗಿ ಆಗಮಿಸುವ ಗ್ರಾಹಕರನ್ನು ಒಂದು ಮೀ. ಅಂತರದಲ್ಲಿ ಕ್ಯೂ ನಿಲ್ಲಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆಲುವ ನಿವಾಸಿಯೊಬ್ಬರು, ಕರೊನಾ ವೈರಸ್ನಿಂದ ಪಾರುಮಾಡಲು ಮದ್ಯಮಾರಾಟವನ್ನು ಆನ್ಲೈನ್ ಮೂಲಕ ವಿತರಿಸುವಂತೆ ಸರ್ಕಾರಕ್ಕೆ ಶಿಫಾರಸುಮಾಡುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಿಂದ ಛೀಮಾರಿಹಾಕಿಸಿಕೊಂಡಿರುವುದಲ್ಲದೆ, ನ್ಯಾಯಾಲಯ ಈ ಅರ್ಜಿದಾರರಿಗೆ 50ಸಾವಿರ ರೂ. ದಂಡವನ್ನೂ ಹಾಕಿದೆ. ಈ ಮೊತ್ತವನ್ನು ರಾಜ್ಯ ವಿಪತ್ತು ನಿರ್ವಹಣಾ ಪರಿಹಾರ ನಿಧಿಗೆ ಪಾವತಿಸಿ, ರಶೀದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದೆ. ಈ ಮಧ್ಯೆ ಸರ್ಕಾರವೂ ಆನ್ಲೈನ್ ಮೂಲಕ ಮದ್ಯಮಾರಾಟಕ್ಕೆ ಸರ್ಕಾರ ಚಿಂತನೆ ನಡೆಸಿಲ್ಲ ಎಂಬ ಹೇಳಿಕೆ ನೀಡಿದೆ. ಆನ್ಲೈನ್ಮೂಲಕ ಮದ್ಯಮಾರಾಟ ನಡೆಸಬೇಕಾದರೆ ಇಡೀ ಅಬಕಾರಿ ಕಾನೂನಿಗೆ ತಿದ್ದುಪಡಿತರಬೇಕಾಗಿಬರಲಿದೆ. ಈ ನಿಟ್ಟಿನಲ್ಲಿ ಆನ್ಲೈನ್ ಮೂಲಕ ಮದ್ಯಮಾರಾಟದ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ರಾಜ್ಯ ಅಬಕಾರಿ ಸಚಿವ ಟಿ.ಪಿ ರಾಮಕೃಷ್ಣನ್ ತಿಳಿಸಿದ್ದಾರೆ.


