ಕಾಸರಗೋಡು: ವೈರಸ್ ವ್ಯಾಪಿಸುವುದನ್ನು ತಡೆಗಟ್ಟಲು ಸರ್ಕಾರ ತುರ್ತು ಕ್ರಮಕ್ಕೆ ಮುಂದಾಗಿದ್ದು, ಜಿಲ್ಲಾದ್ಯಂತ ಎಲ್ಲ ಅಂಗಡಿಮುಂಗಟ್ಟುಗಳನ್ನು ಬೆಳಗ್ಗೆ 11ಕ್ಕೆ ತೆರೆದು, ಸಂಜೆ 5ಕ್ಕೆ ಮುಚ್ಚುವಂತೆ ನೀಡಿರುವ ಆದೇಶ ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಅವಲೋಕನ ನಡೆಸಲು ಶನಿವಾರ ಜಿಲ್ಲಾಧಿಕಾರಿ ಖುದ್ದು ಕಾರ್ಯಾಚರಣೆ ನಡೆಸಿದರು.
ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಸಮಯಕ್ಕೆ ಮೊದಲೇ ಅಂಗಡಿ ತೆರೆದ 11 ಪ್ರಕರಣ ಪತ್ತೆಹಚ್ಚಿ ಅಂಗಡಿ ಮಾಲಿಕರ ವಿರುದ್ಧ ಕೇಸು ದಾಖಲಿಸಿಕೊಳ್ಳಲು ಪೊಲೀಸರಿಗೆ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿ ಡ. ಡಿ.ಸಜಿತ್ಬಾಬು ಅವರು ಪೊಲೀಸರೊಂದಿಗೆ ಪೇಟೆಯ ವಇವಿಧೆಡೆ ಸಂಚರಿಸಿ ಆದೇಶ ಪಾಲನೆಯಾಗುತ್ತಿರುವ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು. ಮಾರಕ ಕರೊನಾ ವೈರಸ್ ವ್ಯಾಪಿಸುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮತ್ತು ಆರೋಗ್ಯ ಇಲಾಖೆ ನೀಡುತ್ತಿರುವ ಸೂಚನೆ, ನಿರ್ದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.
ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯಾಚರಣೆಯನ್ವಯ ಸರ್ಕಾರಿ ಕಚೇರಿಗಳನ್ನು ಒಂದು ವಾರ ಕಾಲ ಮುಚ್ಚಲಾಗುವುದು. ಆರಾಧನಾಲಯ, ಕ್ಲಬ್ಗಳನ್ನು ಎರಡು ವಾರಗಳ ಮುಚ್ಚಲು ಈಗಾಗಲೇ ನಿರ್ದೇಶಿಸಲಾಗಿದೆ. ಇದು ಸರ್ಕಾರಿ ಆದೇಶವಾಗಿ ಜಾರಿಯಾಗಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಒಂದು ದಿನ ಬಿಟ್ಟು ಒಂದು ದಿನ ಹಾಜರಾಗುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಈ ಮೂಲಕ ಕಚೇರಿಗಳಲ್ಲಿ ನೌಕರರ ಸಂಖ್ಯೆ ಕಡಿತಗೊಳಿಸಲು ತೀರ್ಮಾನಿಸಲಾಗಿದೆ.
ಸೋಂಕುಪೀಡಿತರಿಗೆ ಪ್ರತ್ಯೇಕ ವ್ಯವಸ್ಥೆ:
ಕೋವಿಡ್-19'ಸಂಬಂಧಿಸಿ ನಿಗಾದಲ್ಲಿರುವವರಿಗೆ ವಾಸ್ತವ್ಯಕ್ಕೆ ಖಾಸಗಿ ಆಸ್ಪತ್ರೆ ಹಾಗೂ ಶಾಲೆಗಳಲ್ಲಿ ವ್ಯವಸ್ಥೆ ಏರ್ಪಡಿಸಲು ಜಿಲ್ಲಾ ಮಟ್ಟದ ಅವಲೋಕನಾ ಸಭೆ ತೀರ್ಮಾನಿಸಿದೆ. ಇಂತಹ ಕೇಂದ್ರಗಳಲ್ಲಿ ಮೂಲಸೌಕರ್ಯದೊಂದಿಗೆ ಅಗತ್ಯ ಸೌಕರ್ಯ ಕಪ್ಲಿಸಲಾಗುವುದು. ಇದಕ್ಕಾಘಿ ಈಗಾಗಲೇ ಹೊಸದುರ್ಗ ಮತ್ತು ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಗಳ ಬ್ಲಾಕ್ಗಳನ್ನು ಪಡೆದುಕೊಳ್ಳಲಾಗಿದೆ. ವಿದೇಶದಿಂದ ಆಗಮಿಸುವ ಶಂಕಿತ ಸೋಂಕು ಪೀಡಿತರನ್ನು ನಿಗದಿತ ಕಾಲದ ವರೆಗೆ ಈ ಕೇಂದ್ರಗಳಲ್ಲಿ ದಾಖಲಿಸಲಾಗುವುದು.ಇದರ ಫಲಿತಾಂಶ ಲಭಿಸಿದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದರ ಹೊರತಾಗಿ ಕಾಸರಗೋಡು ಸರ್ಕಾರಿ ಹೈಯರ್ ಸಎಕೆಂಡರಿ ಶಾಲೆ ಮತ್ತು ಹೊಸದುರ್ಗ ಜಿಲ್ಲಾ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯನ್ನೂ ಪಡೆದುಕೊಳ್ಳಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಗಿದೆ.


