ಮಧೂರು: ಸಹಸ್ರಾರು ಭಕ್ತರ ಇಷ್ಟಾರ್ಥ ಸಿದ್ಧಿಗೆ ಪ್ರಸಿದ್ಧವಾದ ಮಧೂರು ಶ್ರೀ ಕಾಳಿಸಹಿತ ಭುವನೇಶ್ವರಿ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕಾಗಿ ಸ್ವಾಗತ ಸಮಿತಿ ಸಭೆ ಕ್ಷೇತ್ರದಲ್ಲಿ ಭಾನುವಾರ ಜರಗಿತು.
ಮೇ.23ರಿಂದ 25ರ ವರೆಗೆ ಬ್ರಹ್ಮಕಲಶೋತ್ಸವ ನಡೆಸಲು ನಿರ್ಧರಿಸಲಾಗಿದೆ. ಕ್ಷೇತ್ರ ಕುಟುಂಬದ ಹಿರಿಯವರಾದ ಸುರೇಂದ್ರ ಆಚಾರ್ಯ ಬೀರಂತಬೈಲ್ ಸಭೆಯ ಅಧ್ಯಕ್ಷತೆವಹಿಸಿದ್ದರು. ಧಾರ್ಮಿಕ ಮುಂದಾಳು ಕುಂಟಾರು ರವೀಶ ತಂತ್ರಿ ದೀಪ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದರು. ಮಧೂರು ಗ್ರಾ.ಪಂ.ಅಧ್ಯಕ್ಷೆ ಮಾಲತಿ ಸುರೇಶ್,ಉಪಾಧ್ಯಕ್ಷ ದಿವಾಕರ ಆಚಾರ್ಯ ಅಡ್ಕ, ಗ್ರಾ.ಪಂ.ಸದಸ್ಯ ಯೋಗೀಶ್ ಎಂ.ಆರ್., ಕಾಸರಗೋಡು ಬ್ಲಾ.ಪಂ.ಸದಸ್ಯ ಪ್ರಭಾ ಶಂಕರ ಮಾಸ್ತರ್, ಅಳಕೆ ನಾರಾಯಣ ಭಟ್, ಕಾರ್ಳೆ ಕ್ಷೇತ್ರದ ರಾಮಕೃಷ್ಣ ಆಚಾರ್ಯ ಅರಿಕ್ಕಾಡಿ, ಮಧೂರು ಕಾಳಿಕಾಂಬ ಮಠದ ಅಧ್ಯಕ್ಷ ಪರಮೇಶ್ವರ ಆಚಾರ್ಯ ನೀರ್ಚಾಲು, ವಾಸ್ತು ಶಿಲ್ಪಿ ತುಕರಾಮ ಆಚಾರ್ಯ ಮಾಯಿಪ್ಪಾಡಿ, ಮಧೂರು ಮದನಂತೇಶ್ವರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಜೊತೆ ಕಾರ್ಯದರ್ಶಿ ಮುರಳಿ ಗಟ್ಟಿ, ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಕಾಳಿ ಸಹಿತ ಭುವನೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕ ಪುರೋಹಿತ ಜನಾರ್ಧನ ಆಚಾರ್ಯ, ಸಹಾಯಕ ದಿನೇಶ್ ಆಚಾರ್ಯ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಪಲ್ಲವಿ ವಿಶ್ವಜ್ಞ ಆಚಾರ್ಯ ಸ್ವಾಗತಿಸಿ, ಸತೀಶ್ ಬಿ.ಎಂ.ಮಧೂರು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಸ್ವಾಗತ ಸಮಿತಿ ರಚಿಸಲಾಯಿತು.
ಹಲವಾರು ವರ್ಷಗಳ ಪುರಾತನ ಆರಾಧನಾ ಕೇಂದ್ರವಾದ ಕಾಳಿ ಸಹಿತ ಭುವನೇಶ್ವರಿ ಕ್ಷೇತ್ರವು ಶತ್ರುದೋಷ ಪರಿಹಾರ ಸಹಿತ ದೇವಿ ಆರಾಧನೆಯ ಮೂಲಕ ಪ್ರಸಿದ್ಧವಾಗಿದೆ. ನವರಾತ್ರಿ ವಿಶೇಷ ಆರಾಧನೆಗಳಲ್ಲದೆ ಮಾಸಂಪ್ರತಿ ಹಾಗೂ ವಾರದ ಮಂಗಳವಾರ,ಶುಕ್ರವಾರ ವಿಶೇಷ ಸೇವೆಗಳು ನಡೆಯುತ್ತಿದೆ. ಇದೀಗ 25 ವರ್ಷಗಳ ದೀರ್ಘ ಅವಧಿಯ ಬಳಿಕ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು ನಾಗದೇವತೆ,ಮೂಕಾಂಬಿ ಗುಳಿಗ,ರಕ್ತೇಶ್ವರೀ,ಗುಳಿಗ ಸಾನಿಧ್ಯದ ಪ್ರತಿಷ್ಠಾಪನ ಕಾರ್ಯ ಈ ಬ್ರಹ್ಮಕಲಶೋತ್ಸವದಲ್ಲಿ ಜರಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.



