ಪೆರ್ಲ: ವ್ಯಾಪಕ ಕರೊನಾ ಭೀತಿಯ ಮಧ್ಯೆ ಜನಸಾಮಾನ್ಯರು, ಅಧಿಕಾರಿಗಳು ಗೊಂದಲದಲ್ಲಿ ಸಂಕಷ್ಟಕ್ಕೊಳಗಾಗಿದ್ದಾರೆ. ಕೋವಿಡ್ 19 ವೈರಸ್ ಹರಡುವಿಕೆಯನ್ನು ತಡೆಯಲು ಕೇರಳ-ಕರ್ನಾಟಕ ಗಡಿ ಪ್ರದೇಶಗಳು ಮುಚ್ಚುಗಡೆಗೊಂಡಿರುವಂತೆ ಗಡಿ ಪ್ರದೇಶಗಳ ಜನಜೀವನ ಅಸ್ತವ್ಯಸ್ತಗೊಂಡಿದ್ದು ತುರ್ತು ಆವಶ್ಯಕ ಸನ್ನಿವೇಶಗಳನ್ನು ಎದುರಿಸುವಲ್ಲಿ ಸವಾಲುಗಳು ಬಂದೊದಗಿದೆ.
ಕಾಸರಗೋಡು ಜಿಲ್ಲೆಯ ಗಡಿ ಗ್ರಾಮ ಎಣ್ಮಕಜೆ ವ್ಯಾಪ್ತಿಯ ಸಾಯ-ಬಾಕಿಲಪದವು ಎಂಬ ಎರಡು ವಾರ್ಡ್ಗಳಿಗೆ ತೆರಳಬೇಕಾದರೆ ಸಾರಡ್ಕದ ಕರ್ನಾಟಕ ಗಡಿಯನ್ನು ದಾಟಿ ಅಡ್ಯನಡ್ಕ ಮೂಲಕ ಸಂಚರಿಸಬೇಕು. ಕರೊನಾ ವೈರಸ್ ಆತಂಕವನ್ನು ನಿಯಂತ್ರಿಸುವಲ್ಲಿ ಸೋಮವಾರದಿಂದ ಕಠಿಣ ಕ್ರಮಗಳು ಜಾರಿಯಾಗಿದ್ದು ಗಡಿ ಪ್ರದೇಶಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಈ ಮಧ್ಯೆ ಮಂಗಳವಾರ ಬೆಳಿಗ್ಗೆ ಎಣ್ಮಕಜೆ ಗ್ರಾ.ಪಂ. ವ್ಯಾಪ್ತಿಯ ಸಾಯ ವಾರ್ಡ್ ಗೊಳಪಟ್ಟ ಅಡ್ಯನಡ್ಕ ಪೇಟೆಯ ಒಂದು ಬದಿಯಲ್ಲಿ ವಯೋವೃದ್ದರೋರ್ವರು ಸಹಜ ಮರಣಹೊಂದಿದ್ದು, ಈ ಹಿನ್ನೆಲೆಯಲ್ಲಿ ನಿಬಂಧನೆಗಳನ್ನು ಜಾರಿಗೊಳಿಸಲು ಪೆರ್ಲ ಆರೋಗ್ಯ ಕೇಂದ್ರದ ಅಧಿಕೃತರು ಪಡುಪಾಟಲು ಪಡಬೇಕಾದ ಪ್ರಸಂಗ ನಡೆದಿದೆ.
ಕರೊನಾ ನಿಯಂತ್ರಣದಂತೆ ಯಾವ ಕಾರಣಕ್ಕೂ ಸಾರ್ವಜನಿಕರು ಗುಂಪುಗೂಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕೃತರು ಈ ಬಗ್ಗೆ ಪರಿಶೀಲನೆ ನಡೆಸಲು ಅಡ್ಯನಡ್ಕಕ್ಕೆ ತೆರಳಲು ವಾಹನದ ಮೂಲಕ ಸಾರಡ್ಕಕ್ಕೆ ಆಗಮಿಸುತ್ತಿರುವಂತೆ ಅಂತರ್ ರಾಜ್ಯ ರಸ್ತೆಯನ್ನು ಮುಚ್ಚಲಾಗಿತ್ತು. ಗೇಟ್ ಮುಚ್ಚಿರುವಲ್ಲಿದ್ದ ಪೋಲೀಸರಲ್ಲಿ ತಮ್ಮ ವಾಹನಕ್ಕೆ ತುರ್ತು ತೆರಳಲು ಅವಕಾಶ ನೀಡುವಂತೆ ವಿನಂತಿಸಿದರೂ ಮಾತು ಕೇಳಲು ಸಿದ್ದರಿಲ್ಲದ ಪೋಲೀಸರು ಗೇಟ್ ಗೆ ಹಾಕಲಾದ ಬೀಗ ತೆರೆಯಲು ಕೀಲಿಕೈ ತಹಶೀಲ್ದಾರರ ಬಳಿ ಇದೆಯೆಂದು ತಿಳಿಸಿ ಕೈಚೆಲ್ಲಿದರು. ಈ ಕಾರಣದಿಂದ ದಿಕ್ಕು ಕಾಣದೆ ಆರೋಗ್ಯ ಇಲಾಖೆಯ ಅಧಿಕೃತರು ಕಾಲ್ನಡಿಗೆಯ ಮೂಲಕ ಗೇಟ್ ದಾಟಿ ಸುಮಾರು ಒಂದು ಕಿಲೋಮೀಟರ್ ನಡೆದು ಬಳಿಕ ಅಲ್ಲಿಂದ ಕರ್ನಾಟಕದ ಬೇರೊಂದು ವಾಹನದಲ್ಲಿ ಮರಣ ಸಂಭವಿಸಿದ ಗೃಹ ಸಂದರ್ಶನ ನಡೆಸಿ ಕರ್ತವ್ಯ ಪಾಲಿಸಬೇಕಾದ ಸ್ಥಿತಿ ಉಂಟಾಯಿತು.
ಈ ಬಗ್ಗೆ ಸಮರಸ ಸುದ್ದಿಯೊಂದಿಗೆ ಮಾತನಾಡಿದ ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಜ್ಯೂನಿಯರ್ ಹೆಲ್ತ್ ಇನ್ಸ್ಫೆಕ್ಟರ್ ಜೆರಿನ್ ಅವರು, ತುರ್ತು ಸಂದರ್ಭಗಳಲ್ಲಿ ಇಲಾಖೆಗಳೊಳಗೆ ಪರಸ್ಪರ ಅರ್ಥೈಸುವ ಮನೋಸ್ಥಿತಿ ಇರಬೇಕು. ಕೊರೊನಾ ಹಿನ್ನೆಲೆಯ ನಿಯಂತ್ರಣಗಳು ಸರ್ಕಾರಿ ವಲಯಗಳ ಕರ್ತವ್ಯಕ್ಕೆ ಚ್ಯುತಿಯೊದಗಿಸುವಂತಿರುವುದಾದರೆ ಜನಸಾಮಾನ್ಯರ ಸ್ಥಿತಿ, ಮನೋಸ್ಥಿತಿಗಳ ವಿಕೋಪತೆ ತೀವ್ರಗೊಂಡು ಇನ್ನಷ್ಟು ಅಪಾಯಗಳು ಉಂಟಾಗುವುದು. ಆದ್ದರಿಂದ ಕರ್ನಾಟಕ ಅಧಿಕಾರಿ ವಲಯ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವರು.


