ಮಂಜೇಶ್ವರ : ಕೋವಿಡ್ 19 ವ್ಯಾಪಕತೆಯನ್ನು ತಡೆಯಲು ತಲಪ್ಪಾಡಿ ಸಹಿತ ಕರ್ನಾಟಕದ ಹಲವು ಗಡಿಗಳನ್ನು ಕರ್ನಾಟಕ ಸರ್ಕಾರ ಸಂಪೂರ್ಣ ಮುಚ್ಚುಗಡೆಗೊಳಿಸಿರುವ ಹಿನ್ನೆಲೆಯಲ್ಲಿ ಕಾಸರಗೋಡು ಸಹಿತ ಉತ್ತರ ಕೇರಳದ ಕೆಲವು ತಾಲೂಕುಗಳು ಚಿಕಿತ್ಸೆ ಸಹಿತ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದೊಂದಿಗೆ ಗಡಿ ತೆರೆಯಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರು ಸುಪ್ರೀಂ ಕೋರ್ಟ್ನ್ನು ಸಂಪರ್ಕಿಸಿದ್ದಾರೆ.
ಅರ್ಜಿಯನ್ನು ತುರ್ತಾಗಿ ಆಲಿಸುವಂತೆ ಉಣ್ಣಿತ್ತಾನ್ ಪರ ವಕೀಲ ಹ್ಯಾರಿಸ್ ಬೀರನ್ ಸುಪ್ರೀಂ ಕೋರ್ಟ್ ಗೆ ಸೂಚಿಸಿದ್ದಾರೆ. ಬೇಡಿಕೆಯನ್ನು ಅಂಗೀಕರಿಸಿದರೆ ಉಣ್ಣಿತ್ತಾನ್ ರವರದ್ದು ಸುಪ್ರೀಂ ಕೋರ್ಟ್ ವಿಡಿಯೋ ಕಾನ್ಫರೆನ್ಸಿಂಗ್ ವಿಚಾರಣೆ ನಡೆಸಿದ ಮೊದಲ ಉನ್ನತ ಪ್ರಕರಣವಾಗಲು ಸಾಧ್ಯತೆ ಇದೆ.
ವಾಟ್ಸ್ಆಫ್ ಗಳಲ್ಲೂ ಹಲವು ಸಂದೇಶ:
ಕರ್ನಾಟಕದ ಗಡಿಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಎದ್ದಿರುವ ವಿವಾದಕ್ಕೆ ಸಂಬಂಧಿಸಿ ಪರ-ವಿರೋಧ ಸಂದೇಶಗಳೊಂದಿಗೆ ಸಾಮಾಜಿಕ ಜಾಲತಾಣಗಳೂ ಸಕ್ರಿಯವಾಗಿದ್ದು, ಕರ್ನಾಟಕದ ಭಾಗವಾಗಿದ್ದ ಕಾಸರಗೋಡನ್ನು ಮರಳಿ ದಕ್ಷಿಣ ಕನ್ನಡದ ಭಾಗವಾಗಿಸಲು ಈಗ ಸಕಾಲ ಎಂಬ ಸಂದೇಶ ಕಂಡುಬಂದಿದೆ. ಜೊತೆಗೆ ಇಷ್ಟು ವರ್ಷ ಕಾಸರಗೋಡನ್ನು ಕೇರಳ ಅವಗಣಿಸಿದ್ದರ ದ್ಯೋತಕವಾಗಿ ಇಂದಿನ ತುರ್ತು ಸಂದರ್ಭ ಸಂಕಷ್ಟಕ್ಕೊಳಗಾಗಿದೆ ಎಂಬ ಸಂದೇಶಗಳೂ ಹರಿದಾಡುತ್ತಿದೆ.