ಕಾಸರಗೋಡು: ಮಹಾಮಾರಿ ಕೊರೋನಾ ಬಗ್ಗೆ ತಲೆದೋರಿರುವ ಭೀತಿಯ ಪ್ರತಿರೋಧಕ್ಕೆ ಸಾರ್ವಜನಿಕ ಮಾನಸಿಕ ದೃಡತೆ ಅಗತ್ಯ ಎಂದು ಮೆಂಟಲ್ ಹೆಲ್ತ್ ನೋಡೆಲ್ ಅಧಿಕಾರಿ ಡಾ.ಸನ್ನಿ ಮ್ಯಾಥ್ಯೂ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಕೊರೋನಾ ಬಾಧಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭ ಸಾರ್ವಜನಕಿರು ಆತಂಕಕ್ಕೀಡಾಗುವುದು ಸಹಜ. ಜೊತಗೆ ಕೆಲವು ತಪ್ಪು ಭಾವನೆಗಳು, ಹುಸಿ ಮಾಹಿತಿಗಳು ಇತ್ಯಾದಿ ಸಮಾಜದ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು ಎಂದವರು ಅನಿಸಿಕೆ ವ್ಯಕ್ತಪಡಿಸುತ್ತಾರೆ. ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಕೊರೋನಾ ನಿಯಂತ್ರಣ ಘಟಕದಲ್ಲಿ ಕೊರೋನಾ ಭೀತಿ ಸಂಬಂಧ ಕೌನ್ಸಿಲಿಂಗ್ ಮತ್ತು ಸಲಹೆಗಾಗಿ ದೂರವಾಣಿ ಕರೆಮಾಡುತ್ತಿರುವವ ಸಂಖ್ಯೆ ದಿನಂದಿಂದ ದಿನಕ್ಕೆ ಹೆಚ್ಚುತ್ತಿದೆ.
ಆದರೆ ಇಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ. ಕೊರೋನಾ ಸೋಂಕು ಮೂಲಕ ಬರುವ ಜ್ವರ ಕೇವಲ ವೈರಲ್ ಜ್ವರ. ವೈದ್ಯರ ಸಲಹೆ-ಸೂಚನೆ ಪಡೆದು ಪರಿಪೂರ್ಣ ರೀತಿಯಲ್ಲಿ ಶುಶ್ರೂಷೆ, ಔಷಧ, ವಿಶ್ರಾಂತಿ ಪಡೆದರೆ ಗುಣಮುಖವಾಗುವ ಅಸೌಖ್ಯವೇ ಇದು. ರೋಗಬಾಧಿತರೊಂದಿಗೆ ಯಾವುದೇ ರೀತಿ ಸಂಪರ್ಕ ಇರಿಸದಂತೆ ಸಂಬಂಧಿಕರು, ಆಪ್ತರೂ ಗಮನಿಸಬೇಕು. ಆರೋಗ್ಯ ಇಲಾಖೆ ನೀಡಿರುವ ಸಲಹೆ-ಸೂಚನೆ ಕಡ್ಡಾಯವಾಗಿ ಪಾಲಿಸಿ, ಎಲ್ಲರೂ ಮನೆಗಳಲ್ಲೇ ಉಳಿದರೆ ಕೊರೋನಾ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯ ಎಂದವರು ತಿಳಿಸಿದರು.
ಇಂಥಾ ಒಂದು ಪರಿಸ್ಥಿತಿಯನ್ನು ಎದುರಿಸುತ್ತಿರುವವರಲ್ಲಿ ಬಹುತೇಕ ಮಂದಿಗೆ ಇದು ಹೊಸ ಅನುಭವವಾಗಿದೆ. ಹೀಗಾಗಿ ಮೊದಲ ಹಂತದ ದಿನಗಳಲ್ಲಿ ಮಾನಸಿಕ ಒತ್ತಡ, ಸಂಕಷ್ಟ ತಲೆದೋರಬಹುದು. ಈ ವೇಳೆ ತಮಗೆ ಪ್ರಿಯವಾದ ವಿಚಾರಗಳನ್ನು ನಡೆಸುತ್ತಾ(ಸಂಗೀತ ಕೇಳುವುದು ಇತ್ಯಾದಿ) ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದವರು ಸಲಹೆ ಮಾಡಿದ್ದಾರೆ.


