ಮಂಜೇಶ್ವರ: ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಕೇರಳದ ರೋಗಿಗಳ ಪ್ರವೇಶವನ್ನು ತಡೆಗಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ ಕ್ರೂರತೆಗೆ ಚಿಕಿತ್ಸೆ ಲಭಿಸದೆ ಇದೀಗ ಇಬ್ಬರು ಬಲಿಯಾಗಿದ್ದಾರೆ. ಜೊತೆಗೆ ಪಾಣತ್ತೂರಿನ ಕಲ್ಲಪ್ಪಳ್ಳಿ ಎಂಬಲ್ಲೂ ಸೂಕ್ತ ಚಿಕಿತ್ಸೆ ಲಭಿಸದೆ ವ್ಯಕ್ತಿಯೋರ್ವ ಮೃತನಾಗಿದ್ದು ಈ ಮೂಲಕ ಒಟ್ಟು ಹತ್ತು ಮಂದಿ ಮೃತಪಟ್ಟು ಕೊರೊನಾ ಭೀತಿಗಿಂತಲೂ ಹೆಚ್ಚು ಭಯಗೊಳಿಸುವ ವಾತಾವರಣ ನಿರ್ಮಾಣವಾಗುತ್ತಿದೆ.
ಸುಪ್ರೀಂ ಕೋರ್ಟಿನ ಆದೇಶದಂತೆ ಉಭಯ ರಾಜ್ಯಗಳ ಕಾರ್ಯದರ್ಶಿಗಳ ಸಭೆಯಲ್ಲಿ ಮಂಗಳೂರಿನ ಆಸ್ಪತ್ರೆಗಳಲ್ಲಿ ಕೇರಳದ ರೋಗಿಗಗಳನ್ನು ದಾಖಲಿಸುವಂತೆ ತೀರ್ಮಾನವಾಗಿದ್ದರೂ, ತಲಪಾಡಿ ಗಡಿಯಲ್ಲಿ ಯಾವುದೇ ರೋಗಿಗಳ ವಾಹನಗಳನ್ನು ಪೆÇಲೀಸರು ಗಡಿ ದಾಟಲು ಬಿಡದೇ ಇರುವುದು ದೇವರು ಕೊಟ್ಟರೂ ಪೂಜಾರಿ ಬಿಡಲಾರ ಎಂಬ ಗಾದೆ ಮಾತಿನಂತೆ ಗಡಿ ಪ್ರದೆಶದ ಜನತೆ ಚಿಕಿತ್ಸೆ ಇಲ್ಲದೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಾ ಇದೆ.
ತೂಮಿನಾಡು ನಿವಾಸಿ ಪಾವೂರು ಅಲಿ ಕುಂಞ ಯೂಸುಫ್ (59) ಹಾಗೂ ಹೊಸಂಗಡಿ ಅಂಗಡಿ ಪದವು ನಿವಾಸಿ ರುದ್ರಪ್ಪ (60) ಮೃತ ದುರ್ದೈವಿಗಳು. ಯೂಸುಫ್ ರಿಗೆ ದಿಢೀರಣೆ ಎದೆ ನೋವು ಕಾಣಿಸಿಕೊಂಡಾಗ ಚಿಕಿತ್ಸೆಗಾಗಿ ಇವರನ್ನು ಮಂಗಳೂರಿಗೆ ಕೊಂಡೊಯ್ಯಲು ಪ್ರಯತ್ನ ನಡೆಸಿದರೂ ಗಡಿ ಪ್ರದೇಶದಲ್ಲಿ ತಡೆ ಇರುವ ಹಿನ್ನೆಲೆಯಲ್ಲಿ ಅದು ಫಲಪ್ರದವಾಗಲಿಲ್ಲ. ಬಳಿಕ ಇವರನ್ನು ಉಪ್ಪಳದ ಖಾಸಗಿ ಆಸ್ಪತ್ರೆಯೊಂದಕ್ಕೆ ಕೊಂಡೊಯ್ದರೂ ಅಲ್ಲಿ ಸರಿಯಾದ ಚಿಕಿತ್ಸೆ ಲಭಿಸದ ಹಿನ್ನೆಲೆಯಲ್ಲಿ ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಸೋಮವಾರ ಮಧ್ಯಾಹ್ನ ಮರಣ ಸಂಭವಿಸಿದೆ.
ಕಳೆದ ಏಳು ತಿಂಗಳ ಹಿಂದೆ ರುದ್ರಪ್ಪನವರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯ ಸಂಬಂಧ ಖಾಯಿಲೆಗಾಗಿ ದಾಖಲಾಗಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಅವರಿಗೆ ಔಷಧಿಗಳನ್ನು ಸೇವಿಸಲು ವೈದ್ಯರು ಸಲಹೆ ನೀಡಿದ್ದರು. ಈ ಮಧ್ಯೆ ಔಷಧಿ ಮುಗಿದಿದ್ದು ಲಾಕ್ ಡೌನ್ ಹಿನ್ನೆಲೆಯಲ್ಲಿ ಔಷಧಿ ತರಿಸುವ ವ್ಯವಸ್ಥೆಗಳು ಲಭ್ಯವಾಗಿರಲಿಲ್ಲ. ಭಾನುವಾರ ರಾತ್ರಿ ಎದೆ ನೋವು ಕಾಣಿಸಿಕೊಂಡಾಗ ಉಪ್ಪಳದ ಆಸ್ಪತ್ರೆಯೊಂದಕ್ಕೆ ಕರೆದೊಯ್ದರೂ ಸೂಕ್ತ ಚಿಕಿತ್ಸೆ ಲಭಿಸದ ಹಿನ್ನೆಲೆಯಲ್ಲಿ ಕಾಸರಗೋಡಿಗೆ ಕರೆದೊಯ್ಯುವ ದಾರಿ ಮಧ್ಯೆ ಮೃತಪಟ್ಟರು.
ಪಾಣತ್ತೂರಿನ ಕಲ್ಲಪ್ಪಳ್ಳಿ ನಿವಾಸಿ ಕೃಷ್ಣ ಗೌಡ (71) ಅವರಿಗೆ ಭಾನುವಾರ ಅನಾರೋಗ್ಯ ಮರುಕಳಿಸಿದ್ದು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದ ಕಾರಣ ಮೃತಪಟ್ಟರು.
ಇದರೊಂದಿಗೆ ಚಿಕಿತ್ಸೆ ಲಭಿಸದೆ ಸಾವನ್ನಪ್ಪಿದವರ ಸಂಖ್ಯೆ 10 ಕ್ಕೇರಿದೆ. ಯಾವುದೇ ಕಾರಣಕ್ಕೂ ಕಾಸರಗೋಡು ಜಿಲ್ಲೆಯ ರೋಗಿಗಳನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಗೆ ಅವಕಾಶ ನೀಡಲಾಗುವುದೆಂಬ ತೀರ್ಮಾನಗಳಾಗಿದ್ದರೂ ಸೂಕ್ತ ಕಾನೂನು ಇನ್ನೂ ಜಾರಿಗೊಳ್ಳದೆ ಹಿನ್ನೆಲೆಯಲ್ಲಿ ಗಡಿ ದಾಟಲು ಸಾಧ್ಯವಾಗದೆ ಇರುವುದು ಗಡಿ ಪ್ರದೇಶದ ಜನತೆಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

