ತಿರುವನಂತಪುರ: ವಿಶ್ವವನ್ನು ತಲ್ಲಣಗೊಳಿಸಿರುವ ಕೋವಿಡ್-19 ವೈರಸ್ನಿಂದ ದಡ ಸೇರುವ ಸನ್ನಾಹದಲ್ಲಿರುವ ಕೇರಳಕ್ಕೆ ಇನ್ನೊಂದು ಮಹಾಮಾರಿ ನಿಫಾ ವೈರಸ್ ವಿರುದ್ಧವೂ ಜಾಗ್ರತೆ ಪಾಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಳೆದ ಎರಡು ವರ್ಷಗಳ ಕಾಲ ಮೇ ಹಾಗೂ ಜೂನ್ ತಿಂಗಳಲ್ಲಿ ಕೇರಳದಲ್ಲಿ ನಿಫಾ ಕಾಣಿಸಿಕೊಂಡಿದ್ದು, ಕೆಲವೊಂದು ಜಿಲ್ಲೆಗಳ ಜನರನ್ನು ಮಕಾಡೆ ಮಲಗಿಸಿತ್ತು. ನಿಫಾ ವೈರಸ್ ಹರಡುವ ಪ್ರಮುಖ ವಾಹಿನಿ ಎಂದೇ ಪರಿಗಣಿಸಲಾಗಿರುವ ಬಾವಲಿಗಳ ಸಂತಾನವೃದ್ಧಿಯ ಕಾಲಘಟ್ಟ ಇದಾಗಿರುವುದರಿಂದ ಹೆಚ್ಚಿನ ಜಾಗ್ರತೆ ಪಾಲಿಸುವುದು ಅನಿವಾರ್ಯವಾಗಿದೆ. ರೋಗ ವ್ಯಾಪಿಸುವುದನ್ನು ತಡೆಗಟ್ಟಲು ಸಜ್ಜಾಗಿರುವಂತೆ ಕ್ಯುಸಾಟ್ ಬಯೋ ಟೆಕ್ನಾಲಜಿ ಇಲಾಖೆ ವೈರಲಜಿ ಲ್ಯಾಬ್ನ ಡಾ. ಮೋಹನನ್ ವಲಿಯವೀಟಿಲ್ ಅವರ ನೇತೃತ್ವದಲ್ಲಿ ತಯಾರಿಸಲಾದ ವರದಿಯಲ್ಲಿ ತಿಳಿಸಲಾಗಿದೆ. ಈ ಮಾಹಿತಿ ಪ್ರಮುಖ ಅಂತಾರಾಷ್ಟ್ರೀಯ ಜರ್ನಲ್'ವೈರಸಸ್'ನಲ್ಲೂ ಪ್ರಕಟಗೊಂಡಿದೆ. ಸಂತಾನಾಭಿವೃದ್ಧಿ ಸಂದರ್ಭ ಬಾವಲಿಗಳಲ್ಲಿ ವೈರಸ್ನ ಗಾಢತೆ ಹೆಚ್ಚಾಗಿರುತ್ತದೆ. ವೈರಸ್ ವಾಹಕ ಪ್ರಾಣಿಗಳು ಇದಾಗಿದ್ದರೂ, ತನ್ನಲ್ಲಿ ರೋಗಪ್ರತಿರೋಧ ಶಕ್ತಿ ಹೆಚ್ಚಾಗಿರುವುದರಿಂದ ಬಾವಲಿಗಳಿಗೆ ಇದು ಬಾಧಿಸುವುದಿಲ್ಲ ಎಂದೂ ಡಾ. ಮೋಹನನ್ ತಿಳಿಸುತ್ತಾರೆ.
ರಾಜ್ಯ ಕೋವಿಡ್-19 ವೈರಸ್ ಬಾಧೆಯಿಂದ ಕಂಗೆಟ್ಟಿದ್ದು, ಇದರ ಜತೆಗೆ ನಿಫಾ ವಕ್ಕರಿಸಿದಲ್ಲಿ, ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಭಾರತದಲ್ಲಿ ಮೊತ್ತಮೊದಲ ಬಾರಿಗೆ 2001ರಲ್ಲಿ ಪಶ್ಚಿಮಬಂಗಾಳದ ಸಿಲಿಗುರಿಯಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿದ್ದರೆ, 2018ರಲ್ಲಿ ಕೇರಳದ ಕೋಯಿಕ್ಕೋಡಿನಲ್ಲಿ ನಿಫಾ ಕಾಣಿಸಿಕೊಂಡು ಹಲವರು ಪ್ರಾಣಕಳೆದುಕೊಂಡಿದ್ದರು. ಎರಡನೇ ಬಾರಿಗೆ 2019ರಲ್ಲಿ ಮತ್ತೆ ನಿಫಾ ಕಾಣಿಸಿಕೊಂಡಿದ್ದರೂ, ಸರ್ಕಾರದ ಮುಂಜಾಗ್ರತಾ ಕ್ರಮದಿಂದ ಹೆಚ್ಚಿನ ಜೀವಹಾನಿ ಸಂಭವಿಸಿರಲಿಲ್ಲ. 2018 ರಲ್ಲಿ ಕಾಣಿಸಿಕೊಂಡ ನಿಫಾ ವೈರಸ್ಗೆ 17ಮಂದಿ ಬಲಿಯಾಗಿದ್ದರೆ, 18ಮಂದಿಯಲ್ಲಿ ವೈರಸ್ ಖಚಿತಗೊಂಡು, ನಂತರ ಚೇತರಿಸಿಕೊಂಡಿದ್ದರು.
ನಿಫಾ ವ್ಯಾಪಿಸದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮ ಅನಿವಾರ್ಯವಾಗಿದೆ. ಬಾವಲಿಗಳ ವಾಸಸ್ಥಾನದಿಂದ ಅಂತರ ಪಾಲಿಸಿಕೊಳ್ಳುವುದರ ಜತೆಗೆ ಬಾವಲಿಗಳು ತಿಂದುಹಾಕಿದ ಹಣ್ಣುಹಂಪಲುಗಳನ್ನು ಸೇವಿಸದಿರುವಂತೆಯೂ ಆರೋಗ್ಯ ಇಲಾಖೆ ಸೂಚಿಸಿದೆ. ಜತೆಗೆ ವೈಯಕ್ತಿಕ ಶುಚೀಕರಣ ಪಾಲಿಸುವುದರೊಂದಿಗೆ ಗಾಯಗೊಂಡ ಅಥವಾ ಸಾವನ್ನಪ್ಪಿದ ಬಾವಲಿಗಳನ್ನು ಬರಿಗೈಯಿಂದ ಸ್ಪರ್ಶಿಸದಿರುವಂತೆಯೂ ಸೂಚಿಸಿದೆ.



