ಕಾಸರಗೋಡು: ದೇಶದಲ್ಲಿ ಅತೀ ಹೆಚ್ಚು ಕರೊನಾ ಸೋಂಕಿತರಿರುವ ಜಿಲ್ಲೆಯಾಗಿ ಹೆಸರು ಪಡೆದಿರುವ ಕಾಸರಗೋಡನ್ನು ಕೇರಳ ರಾಜ್ಯ ಸರ್ಕಾರ ನಿರ್ಲಕ್ಷ್ಯವಹಿಸುತ್ತಿದೆ ಎಂದು ಆರೋಪಿಸಿ ಕಾಸರಗೋಡನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಶಿಸಬೇಕೆಮದು ಇಲ್ಲಿಯ ಯುವ ಸಮುದಾಯ ಟ್ವಿಟರ್, ಫೇಸ್ಬುಕ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ಹ್ಯಾಶ್ ಟ್ಯಾಗ್ ಅಭಿಯಾನಕ್ಕೆ ಚಾಲನೆ ನೀಡಿದೆ.
//MakeUtOfKasaragod, //FreeKasaragodFromKL ಎಂಬ ಹ್ಯಾಷ್ ಟ್ಯಾಗ್ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲು ಭಾರೀ ಅಭಿಯಾನ ನಡೆಯುತ್ತಿದೆ.
ಭಾಷಾವಾರು ಪ್ರಾಂತ್ಯ ವಿಭಜನೆಯ ವೇಳೆ ಮಂಗಳೂರು ಜಿಲ್ಲೆಯಿಂದ ಬೇರ್ಪಟ್ಟು ಕೇರಳಕ್ಕೆ ಸೇರ್ಪಡೆಗೊಂಡ ಕಾಸರಗೋಡು ನಿರಂತರ ಅವಗಣನೆಗೆ ಒಳಗಾಗಿದೆ. ಇಲ್ಲಿಯ ಭಾಷಾ ಅಲ್ಪಸಂಖ್ಯಾತರಾದ ತುಳುವರು ಮತ್ತು ಕನ್ನಡಿಗರು ಸಾಂವಿಧಾನಿಕ ಹಕ್ಕಿನಿಂದಲೂ ವಂಚಿತರಾಗಿ ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರಾಥಮಿಕ ಆವಶ್ಯಕತೆಗಳ ಸಹಿತ ಮೂಲಭೂತ ಅಗತ್ಯಗಳಿಗೂ ಈಗಲೂ ಮಂಗಳೂರನ್ನೇ ಆರ್ಶರಯಿಸಿರುವ ಇಲ್ಲಿಯ ಜನರು ಕರೊನಾ ಸೋಂಕಿನ ಕಾರಣ ಗಡಿಗಳು ಮುಚ್ಚಲ್ಪಟ್ಟು ಮಂಗಳೂರು ಸಂಪರ್ಕಿಸಲಾಗದೆ ಸಂಕಷ್ಟಕ್ಕೊಳಗಾಗಿ ಪಡುಪಾಟಲು ಪಡುವ ಹಿನ್ನೆಲೆಯಲ್ಲಿ ಈ ಅಭಿಯಾನ ತಾರಕಕ್ಕೇರಿದೆ.