ಪೆರ್ಲ: ಕೋವಿಡ್-19 ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕೇರಳದ ಹಾಲು ಸಂಗ್ರಹ, ಸಂಸ್ಕರಣೆ ಮತ್ತು ಮಾರಾಟ ಘಟಕ'ಮಿಲ್ಮಾ' ಹೈನುಗಾರರಿಂದ ಹಾಲು ಸಂಗ್ರಹಿಸುವುದಕ್ಕೆ ಏಪ್ರಿಲ್ 2ರಿಂದ ನಿಯಂತ್ರಣ ಹೇರಿರುವುದರಿಂದ ಕಾಸರಗೋಡು ಜಿಲ್ಲೆಯ ಹಾಲು ಉತ್ಪಾದಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿರುವ ಕಾಸರಗೊಡು ಜಿಲ್ಲೆಯ ಎಣ್ಮಕಜೆ ಪಂಚಾಯಿತಿಯ ಪೆರ್ಲ ಖಂಡಿಗೆ ಫಾರ್ಮ್ ಮಾಲಿಕ ಅಬೂಬಕ್ಕರ್ ಸಿದ್ದಿಕ್ ಅವರು ಪ್ರತಿ ದಿನ 1ಸಾವಿರ ಲೀ. ಹಾಲು ಡಿಪೊ ಹಾಗೂ ಇತರ ಸಂಸ್ಥೆಗಳಿಗೆ ಪೂರೈಸುತ್ತಿದ್ದು, ಈ ನಿಯಂತ್ರಣದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಖಂಡಿಗೆ ಫಾರ್ಮ್ನಲ್ಲಿ ನೂರು ಕರೆಯುವ ದನಗಳು ಹಾಗೂ ಐವತ್ತಕ್ಕೂ ಹೆಚ್ಚು ಗಡಸು, ಹೋರಿಗಳಿವೆ. ಕರೊನಾ ವೈರಸ್ ಸಂಕಷ್ಟ ಆರಂಭಗೊಂಡಂದಿನಿಂದ ದನಗಳಿಗೆ ಆಹಾರ ಒದಗಿಸುವಲ್ಲಿ ಕಡಿತಮಾಡುವುದರೊಂದಿಗೆ 600 ಲೀಟರ್ಗೆ ಹಾಲು ಉತ್ಪಾದನೆಯನ್ನು ಕಡಿತಗೊಳಿಸುವ ಮೂಲಕ ಸ್ವಯಂ ನಿಯಂತ್ರಣಮಾಡಿಕೊಂಡಿದ್ದರು. ಪ್ರಸಕ್ತ ದಿನ ಬಿಟ್ಟು ದಿನದಲ್ಲಿ ಒಟ್ಟು ಉತ್ಪಾದನೆಯ ಅರ್ಧದಷ್ಟು ಹಾಲನ್ನು ಖರೀದಿಸುವ ನಿಯಂತ್ರಣವನ್ನು ಮಿಲ್ಮಾ ಹೇರಿದೆ. ಈ ಮೂಲಕ ಎರಡು ದಿವಸಗಳಿಗೆ ಒಂದು ಬಾರಿ 300ಲೀ. ಹಾಲು ಮಾತ್ರ ಡಿಪೋಗೆ ಪೂರೈಸಲು ಸಾಧ್ಯವಾಗಲಿದೆ ಎಂದು ಅಬೂಬಕ್ಕರ್ ಸಿದ್ದೀಕ್ ತಿಳಿಸುತ್ತಾರೆ. ಅಬೂಬಕ್ಕರ್ ಸಿದ್ದೀಕ್ ಅವರು ಪೆರ್ಲದಲ್ಲಿ ಪಶುಆಹಾರ ಹಾಗೂ ಕೋಳಿ ಆಹಾರ ಘಟಕ ನಡೆಸುತ್ತಿದ್ದರೂ, ಕಚ್ಛಾವಸ್ತು ಲಭ್ಯವಾಗದೆ ಆಹಾರ ತಯಾರಿಸುವ ಸ್ಥಿತಿಯಲ್ಲೂ ಇವರಿಲ್ಲ. ಕರೊನಾ ವೈರಸ್ ಹಿನ್ನೆಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ತೀರ್ಮಾನದನ್ವಯ ಕೇರಳ-ಕರ್ನಾಟಕ ಗಡಿಪ್ರದೇಶ ಸಾರಡ್ಕದಲ್ಲಿ ಗಡಿ ಮುಚ್ಚುಗಡೆಗೊಳಿಸಿರುವುದು ನ್ಯಾಯೋಚಿತವಾಗಿದ್ದರೂ, ಜಾನುವಾರುಗಳ ಆಹಾರ, ತರಕಾರಿ ಸಹಿತ ನಿತ್ಯೋಪಯೋಗಿ ಸಾಮಗ್ರಿ ಪೂರೈಕೆಗೆ ಸಹಕಾರಿಯಾಗುವ ರೀತಿಯಲ್ಲಿ ನಿಯಂತ್ರಣದೊಂದಿಗೆ ವಾಹನ ಸಂಚಾರಕ್ಕೆ ಅವಕಾಶಮಾಡಿಕೊಡುವಲ್ಲಿ ಕರ್ನಾಟಕ ಸರ್ಕಾರ ಗಮನಹರಿಸಬೇಕು ಎಂದು ಅಬೂಬಕ್ಕರ್ ಸಿದ್ದೀಕ್ ಮನವಿ ಮಾಡಿದ್ದಾರೆ.
ಮಲಬಾರ್ ಪ್ರದೇಶದಲ್ಲಿ ಮಿಲ್ಮಾ ಪ್ರತಿ ದಿನ 6ಲಕ್ಷ ಲೀ. ಹಾಲು ಸಂಗ್ರಹಿಸುತ್ತಿದೆ. ಇದೀಗ ನಿಯಂತ್ರಣ ಹೇರಿರುವುದರಿಂದ ಹಾಲು ಉತ್ಪಾದಕರಿಗಿದ್ದ ಏಕ ಭವರವಸೆಯೂ ಕೈತಪ್ಪಿದಂತಾಗಿದೆ.