ಪೆರ್ಲ: ತೀವ್ರ ಕಳವಳಕಾರಿಯಾಗಿರುವ ಕರೊನಾ ವೈರಸ್ ಕಾರಣ ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ಮನೆಯಲ್ಲೇ ಉಳಿದು ಪರಿತಪಿಸುತ್ತಿರುವ ಮಧ್ಯೆ ಯುವ ಕವಿ ಮನಸ್ಸುಗಳ ತಂಡವೊಂದು ವಾಟ್ಸ್ಆಫ್ ಮೂಲಕ ಸಾಹಿತ್ಯಗೋಷ್ಠಿ ನಡೆಸಿ ಗಮನ ಸೆಳೆಯಿತು.
ಪೆರ್ಲ ಕೇಂದ್ರವಾಗಿಸಿ ಕಾರ್ಯನಿರ್ವಹಿಸುವ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ನೇತೃತ್ವದಲ್ಲಿ ಭಾನುವಾರ ದಿನಪೂರ್ತಿ ವಾಟ್ಸ್ಆಫ್ ಸಾಹಿತ್ಯಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಸುಮಾರು 14 ಮಂದಿ ಕವಿ, ಕಲಾವಿದರು ಭಾಗವಹಿಸಿದ್ದ ಗೋಷ್ಠಿಯ ಅಧ್ಯಕ್ಷತೆಯನ್ನು ಯುವ ಸಾಹಿತಿ, ಜಲತಜ್ಞ ಮಧುರಕಾನ ಗಣಪತಿ ಭಟ್ ವಹಿಸಿದ್ದರು.ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು.
ಧ್ವನಿ ರೆಕಾರ್ಡಿಂಗ್ ಪ್ರಾರ್ಥನೆ:
ವೇದಿಕೆಯ ಸದಸ್ಯ ವಸಂತ ಬಾರಡ್ಕ ಅವರ ಮುದ್ರಿತ ಪ್ರಾರ್ಥನಾ ಗೀತೆಯನ್ನು ಗುಂಪಿಗೆ ಹಂಚುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಸ್ವಾಗತ, ಪ್ರಾಸ್ತಾವಿಕ ಮಾತುಗಳ ಬಳಿಕ ಅಧ್ಯಕ್ಷತೆ ವಹಿಸಿದ್ದ ಮಧುರಕಾನನ ಗಣಪತಿ ಭಟ್ ಅವರು ನಲ್ಮೆಯ ಸಂದೇಶ ನೀಡುವುದರೊಂದಿಗೆ ಅಧಿಕೃತ ಚಾಲನೆ ನೀಡಲಾಯಿತು. ಮೊದಲೇ ಹೆಸರು ನೋಂದಾಯಿಸಿದ ಕವಿಗಳಿಗೆ ನೀಡಲಾದ ನಿಶ್ಚಿತ ಅರ್ಧ ಗಂಟೆಯ ಸಮಯಾವಕಾದಲ್ಲಿ ಬರಹಗಳನ್ನು ಹಂಚಲು ಇಲ್ಲಿ ಸೂಚಿಸಲಾಗಿತ್ತು. ಕವಿಗಳಾದ ಕಾಸರಗೋಡು ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ರತ್ನಾಕರ ಮಲ್ಲಮೂಲೆ, ಮಂಗಳೂರು ಬಾನುಲಿ ಕೇಂದ್ರದ ಉದ್ಘೋಷಕಿ ಅಕ್ಷತಾ ರಾಜ್ ಪೆರ್ಲ, ಆರ್ಥಿಕ ತಜ್ಞ, ಸಾಹಿತಿ ರಂಗ ಶರ್ಮ ಉಪ್ಪಂಗಳ, ಅನುಪಮಾ ಪ್ರಸಾದ್ ಬೆಂಗಳೂರು, ಹಿರಿಯ ಸಾಹಿತಿ ಹರೀಶ್ ಪೆರ್ಲ, ಪ್ರೇಮಾ ಉದಯಕುಮಾರ್, ಅಕ್ಷತಾ ಭಟ್ ಪುದುಕೋಳಿ, ನಾರಾಯಣ ಭಟ್ ಹಿಳ್ಳೆಮನೆ, ಹರೀಶ್ ಸುಲಾಯ ಒಡ್ಡಂಬೆಟ್ಟು, ಸುಶ್ಮಿತಾ ಪಿ.ಎನ್.ಸೀತಾಂಗೋಳಿ, ಪದ್ಮಾವತಿ ಏದಾರ್, ಚೇತನಾ ಕುಂಬಳೆ, ನ್ಯಾಪಿ ಪೆರಡಾಲ, ದೇವರಾಜ ಆಚಾರ್ಯ ಕುಂಬಳೆ, ನಿರ್ಮಲಾ ಎಸ್ ಖಂಡಿಗೆ, ದಯಾನಂದ ರೈ ಕಳ್ವಾಜೆ, ವಿಜಯರಾಜ ಪುಣಿಚಿತ್ತಾಯ ಗೋಷ್ಠಿಯಲ್ಲಿ ಕಥೆ, ಕವನಗಳನ್ನು ಹಂಚಿದರು. ಹಿರಿಯ ಕಾರ್ಟೂನಿಸ್ಟ್ ವೆಂಕಟ್ ಭಟ್ ಎಡನೀರು ಅವರು ವ್ಯಂಗ್ಯ ಚಿತ್ರಗಳನ್ನು ಹಂಚಿದರು. ವಸಂತ ಬಾರಡ್ಕ ಅವರು ತಾವು ಸ್ವತಃ ಹಾಡಿರುವ ಎರಡು ಭಾವ ಗೀತೆಗಳ ಧ್ವನಿಗಳನ್ನು ಹಂಚಿದರು.
ಕರೊನಾ ಜಾಗೃತಿ ಗಾಯನ:
ಹಿರಿಯ ಯಕ್ಷಗಾನ ಅರ್ಥಧಾರಿ ಪಕಳಕುಂಜ ಶಾಮ ಬಟ್ ಅವರು ರಚಿಸಿರುವ ಕರೊನಾ ಜಾಗೃತಿ ಬಗೆಗಿನ ಗೀತೆಯೊಂದನ್ನು ಡಾ.ಸತೀಶ ಪುಣಿಚಿತ್ತಾಯ ಪೆರ್ಲ ಅವರು ಹಾಡಿರುವ ಧ್ವನಿ ಸುರುಳಿಯನ್ನೂ ಗುಂಪಲ್ಲಿ ಹಂಚಿ ಗಮನ ಸೆಳೆಯಲಾಯಿತು.
ಪುರುಷೋತ್ತಮ ಭಟ್ ಕೆ ಸ್ವಾಗತಿಸಿ, ನಿರೂಪಿಸಿದ ಗೋಷ್ಠಿಯಲ್ಲಿ ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ ವಂದಿಸಿದರು. ಗೋಷ್ಠಿಯ ಕೊನೆಗೆ ಅಧ್ಯಕ್ಷೀಯ ಭಾಷಣ, ಮುಖ್ಯ ಅತಿಥಿಗಳ ಭಾಷಣ, ಭಾಗವಹಿಸಿದವರಿಂದ ಅಭಿಪ್ರಾಯ ಹಂಚಿಕೆ ಹಾಗೂ ಭಾಗವಹಿಸಿದವರಿಗೆ ಡಾ.ಎಸ್ ಎಲ್.ಬೈರಪ್ಪ ಅವರ ಅನ್ವೇಷಣ ಮತ್ತು ಡಾ.ಯು.ಆರ್.ಅನಂತಮೂರ್ತಿಗಳ ಸಂಸ್ಕಾರ ಕಾದಂಬರಿಯ ಪಿಡಿಎಫ್ ಪುಸ್ತಕಗಳನ್ನು ವಿತರಿಸಲಾಯಿತು.