ಕುಂಬಳೆ: ಕೋವಿಡ್ ಕೊರೊನಾ ಹಿನ್ನೆಲೆಯಲ್ಲಿ ವ್ಯಾಪಕ ಅತಂತ್ರತೆ ಜನರನ್ನು ಹೈರಾಣುಗೊಳಿಸುತ್ತಿರುವ ಮಧ್ಯೆ ಅಧಿಕಾರಿಗಳ ಮುಂದುವರಿದ ಅನಾಸ್ಥೆಯ ಕಾರಣ ಅನ್ಯರಾಜ್ಯ ಕಾರ್ಮಿಕರು ಅನ್ನ ಆಹಾರಗಳಿಲ್ಲದೆ ಪರಿತಪಿಸುತ್ತಿರುವ ಕರುಣಾಜನಕ ಸ್ಥಿತಿ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಆದಾಯದ ಪ್ರಧಾನ ಮೂಲವಾದ ಸೀತಾಂಗೋಳಿ ಸಮೀಪದ ಅನಂತಪುರ ಇಂಡಸ್ಟ್ರಿಯಲ್ ಎಸ್ಟೇಟ್ ದಲ್ಲಿ ವಿವಿಧ ಸಂಸ್ಥೆಗಳಲ್ಲಿ ಕಾರ್ಯವೆಸಗುವ 60 ರಷ್ಟು ಅನ್ಯರಾಜ್ಯ ಕಾರ್ಮಿಕರು ಲಾಕ್ ಡೌನ್ ಆರಂಭಗೊಂಡ ಬಳಿಕ ಆಹಾರಗಳಿಲ್ಲದೆ ಪರಿತಪಿಸುತ್ತಿದ್ದಾರೆ.
ಕೌಗಾರಿಕಾ ಪ್ರಾಂಗಣದಲ್ಲಿ ಸುಮಾರು 20ಕ್ಕಿಂತಲೂ ಹೆಚ್ಚು ಕೌಗಾರಿಕೆಗಳು ಕಾರ್ಯವೆಸಗುತ್ತಿದ್ದು, 600ಕ್ಕಿಂತಲೂ ಹೆಚ್ಚು ಅನ್ಯ ರಾಜ್ಯ ಕಾರ್ಮಿಕರು ದುಡಿಯುತ್ತಿದ್ದಾರೆ. ಕೊರೊನಾ ಕಾರಣದ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಶಿಸುತ್ತಿರುವಂತೆ ಬಹುತೇಕ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದು, ಆದರೆ ಹೋಗಲಾರದೆ ಉಳಿಕೆಯಾದ 60 ರಷ್ಟು ಕಾರ್ಮಿಕರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗಾರಿಕಾ ಪ್ರಾಂಗಣದಿಂದ ಹೊರಗೂ ತೆರಳಲು ಅವಕಾಶವಿಲ್ಲದೆ ಸಂಪೂರ್ಣ ದಿಕ್ಕೆಟ್ಟ ಕಾರ್ಮಿಕರ ಅವಸ್ಥೆಯನ್ನು ಗಮನಿಸಿದ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಉಪಾಧ್ಯಕ್ಷ ವಿಕ್ರಂ ಪೈ ಕುಂಬಳೆ ಅವರು ಈ ಬಗ್ಗೆ ಲಾಕ್ ಡೌನ್ ಆರಂಭಗೊಂಡ ದಿನದಿಂದಲೂ ಜಿಲ್ಲಾಡಳಿತ, ಜಿಲ್ಲಾ ಆಹಾರ ಪೂರೈಕೆ, ಜಿಲ್ಲಾ ಕಾರ್ಮಿಕ ಇಲಾಖೆ, ಪುತ್ತಿಗೆ ಗ್ರಾ.ಪಂ. ಅಧಿಕೃತರಲ್ಲಿ ಕಾರ್ಮಿಕರ ಬಗ್ಗೆ ಆಹಾರ ವಸ್ತುಗಳ ಪೂರೈಕೆಗೆ ಮನವಿ ಮಾಡುತ್ತಿದ್ದು ಈವರೆಗೆ ಯಾವ ವ್ಯವಸ್ಥೆಗಳನ್ನೂ ಕಲ್ಪಿಸದಿರುವುದು ಆಶ್ಚರ್ಯಮೂಡಿಸುವುದರ ಜೊತೆಗೆ ಅಧಿಕೃತರ ಅನಾಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಪ್ರಸ್ತುತ ಸ್ವತಃ ವಿಕ್ರಂ ಪೈ ಅವರು ತಾವೇ ಮೊತ್ತ ವಿನಿಯೋಗಿಸಿ ಒಂದೆರಡು ಬಾರಿ ಅಕ್ಕಿ, ಬೇಳೆ ಕಾಳುಗಳನ್ನು ಅನ್ಯರಾಜ್ಯ ಕಾರ್ಮಿಕರಿಗೆ ಒದಗಿಸುತ್ತಿದ್ದು, ಎಡನಾಡು ಗ್ರಾಮ ಕಚೇರಿಯ ಅಧಿಕೃತರು ಒಂದು ಬಾರಿ ಆಹಾರ ಕಿಟ್ ಗಳನ್ನು ವಿತರಿಸಿರುವರು.
ಪ್ರಸ್ತುತ ದಿನಸಿ ಅಂಗಡಿಗಳಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಹೆಚ್ಚಿನ ಪ್ರಮಾಣದ ಕ್ವಿಂಟಾಲ್ ಗಟ್ಟಲೆ ಅಕ್ಕಿ ವಿತರಿಸಲು ಹಿಂದೇಟು ಹಾಕುತ್ತಿರುವುದರಿಂದ ಅನ್ಯರಾಜ್ಯ ಕಾರ್ಮಿಕರಿಗೆ ಅಗತ್ಯದ ಆಹಾರ ದೊರಕದೆ ಉಪವಾಸ ಬೀಳುವಂತಾಗಿದೆ. ಅಧಿಕೃತರಿಗೆ ತಾನು ಪೂರ್ಣ ಪ್ರಮಾಣದ ಹಣ ಪಾವತಿಸಲು ಸಿದ್ದನಿದ್ದು, ಅಕ್ಕಿ ಒದಗಿಸಿ ಎಂದು ಬೇಡಿಕೊಂಡರೂ ವಿತರಿಸುವಲ್ಲಿ ಮೀನಮೇಶ ಎಣಿಸುತ್ತಿರುವುದಾಗಿ ವಿಕ್ರಂ ಪೈ ಅವಲತ್ತುಕೊಂಡಿದ್ದಾರೆ.
ಈ ಬಗ್ಗೆ ವಿಕ್ರಂ ಪೈ ಅವರು ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈ ಮೈಲ್ ಮೂಲಕ ದೂರು ನೀಡಿದ್ದು ಇದರ ಹಿನ್ನೆಲೆಯಲ್ಲಿ ಗುರುವಾರ ಪ್ರಧಾನಿ ಕಾರ್ಯಾಲಯದಿಂದ ರಾಜ್ಯಮುಖ್ಯಮಂತ್ರಿಗಳಿಗೆ ಸಮಮಸ್ಯೆ ಬಗೆಹರಿಸಲು ನಿರ್ದೇಶನ ಬಂದಿರುವುದಾಗಿ ತಿಳಿದುಬಂದಿದೆ.
ಕೊರೊನಾ ನಿಯಂತ್ರಣದಲ್ಲಿ ಜಗತ್ತಿಗೇ ಮಾದರಿಯಾದ ಕೇರಳ, ಈ ಹಿನ್ನೆಲೆಯ ಪರಿಣಾಮಗಳನ್ನು ಎದುರಿಸುವಲ್ಲಿ, ಅಗತ್ಯದ ನೆರವುಗಳನ್ನು ಅರ್ಹರಿಗೆ ನೀಡುವಲ್ಲಿ ಕಾಸರಗೋಡು ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಲಾಗಿದೆ.



