ಕಾಸರಗೋಡು: ಮಾರಣಾಂತಿಕ ಕೊರೊನಾ ವೈರಸ್ ಸೋಂಕು ವಿರುದ್ಧ ಅಭಿಯಾನದ ಅಂಗವಾಗಿ ಕೇರಳ ಸಾಮಾಜಿಕ ಸುರಕ್ಷಾ ಮಿಷನ್ ಹಾಗು ಕೇರಳ ಕಾರ್ಟೂನ್ ಅಕಾಡೆಮಿ ಸಂಯುಕ್ತವಾಗಿ ರಾಜ್ಯ ವ್ಯಾಪಕವಾಗಿ ಆಯೋಜಿಸುವ ಕಾರ್ಟೂನ್ ಗೋಡೆ ಕಾಸರಗೋಡಿನಲ್ಲೂ ಸಿದ್ಧಗೊಳ್ಳುತ್ತಿದೆ. ಆದರೆ ಇದೇ ವೇಳೆ ಕನ್ನಡವನ್ನು ಅವಗಣಿಸಲಾಗಿದೆ.
ಕಾಸರಗೋಡು ಸರ್ಕಾರಿ ಯು.ಪಿ. ಶಾಲೆಯ ಕಂಪೌಂಡ್ ಗೋಡೆಯಲ್ಲಿ ಒಂಭತ್ತು ಮಂದಿ ಕಾರ್ಟೂನಿಸ್ಟ್ಗಳು ಕಾರ್ಟೂನ್ ಗೋಡೆಯನ್ನು ಸಿದ್ಧಪಡಿಸುತ್ತಿದ್ದಾರೆ.
ಆದೂರು ನಿವಾಸಿ ಕಾರ್ಟೂನಿಸ್ಟ್ ಆಲಿ ಹೈದರ್ ನೇತೃತ್ವದ ಕಾರ್ಟೂನಿಸ್ಟ್ಗಳು ಗೋಡೆಗಳಲ್ಲಿ ಕೊರೊನಾ ವಿರುದ್ಧ ಅಭಿಯಾನದ ಕಾರ್ಟೂನ್ಗಳನ್ನು ರಚಿಸಿದ್ದಾರೆ. ಆದರೆ ಈ ಶಾಲೆಯಲ್ಲಿ ಕನ್ನಡ ಹಾಗು ಮಲಯಾಳ ಮಾಧ್ಯಮಗಳಿದ್ದು, ಕಾರ್ಟೂನ್ ಗೋಡೆಯಲ್ಲಿ ಕೇವಲ ಮಲಯಾಳದಲ್ಲಿ ಮಾತ್ರವೇ ರಚಿಸಲಾಗಿದೆ. ಕನ್ನಡದ ಒಂದೇ ಒಂದು ಅಕ್ಷರಗಳಿಲ್ಲ. ಇದು ಕನ್ನಡದ ಅವಗಣನೆಗೆ ಸ್ಪಷ್ಟ ಉದಾಹರಣೆಯಾಗಿದೆ.
ಕಾರ್ಟೂನ್ ಗೋಡೆ ನಿರ್ಮಾಣದಲ್ಲೂ ಮಲಯಾಳೀಕರಣದ ಉದ್ದೇಶ ಹೊಂದಿದೆ ಎಂದು ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಬಿಜೆಪಿ ನಗರ ಸಮಿತಿ ನೇತೃತ್ವದಲ್ಲಿ ಕನ್ನಡದ ಅವಗಣನೆಯನ್ನು ಕಾರ್ಯಕರ್ತರು ಪ್ರತಿಭಟಿಸಿದರು.
ಶಾಲಾ ಕಂಪೌಂಡ್ಗೆ ಗುರುವಾರವಷ್ಟೇ ಸಿಮೆಂಟ್ ಹಾಕಲಾಗಿತ್ತು. ಸಾಮಾನ್ಯವಾಗಿ ಸಿಮೆಂಟ್ ಹಾಕಿದ ಬಳಿಕ ಕನಿಷ್ಠ ಹತ್ತು ದಿನಗಳಾದರೂ ನೀರು ಸಿಂಪಡಿಸಬೇಕು. ಆದರೆ ಇಂತಹ ಯಾವುದೇ ನಿರ್ವಹಣೆ ಮಾಡದೆ ಗೋಡೆಗಳಲ್ಲಿ ಕಾರ್ಟೂನ್ಗಳನ್ನು ರಚಿಸಿದ ಬಗ್ಗೆಯೂ ಪ್ರತಿಭಟನೆ ವ್ಯಕ್ತವಾಗಿದೆ. ಕನ್ನಡದ ಅಭಿಮಾನಿಗಳೂ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.