ಕಾಸರಗೋಡು: ಕರ್ನಾಟಕ ರಾಜ್ಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಾಸರಗೋಡು ಜಿಲ್ಲೆಯಿಂದ 367 ಮಂದಿ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಗಡಿಪ್ರದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತೆ ಬಸ್ ಸೌಲಭ್ಯ ಏರ್ಪಡಿಸಿದೆ. ವಿಶೇಷ ನೋಡೆಲ್ ಅಧಿಕಾರಿಗಳೂ ಈ ನಿಟ್ಟಿನಲ್ಲಿ ನೇಮಕಗೊಂಡಿದ್ದಾರೆ.
ತಲಪ್ಪಾಡಿ ವರೆಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ: ಜಿಲ್ಲಾಧಿಕಾರಿ
ಮಂಜೇಶ್ವರ ವರೆಗೆ ಸಂಚಾರ ನಡೆಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಪರೀಕ್ಷೆ ನಡೆಯುವ ದಿನಗಳಲ್ಲಿ ವಿದ್ಯಾರ್ಥಿಗಳ ಸೌಕರ್ಯಾರ್ಥ ತಲಪ್ಪಾಡಿ ವರೆಗೆ ಸಂಚಾರ ನಡೆಸಲಿವೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ತಿಳಿಸಿರುವರು.
ವಿದ್ಯಾರ್ಥಿಗಳಿಗೆ ಪ್ರತ್ಯೇಕ ಇ-ಪಾಸ್ ಅಗತ್ಯವಿಲ್ಲ:
ವಿದ್ಯಾರ್ಥಿಗಳಿಗೆ ಪ್ರತ್ಯೇಕ ಇ-ಪಾಸ್ ಅಗತ್ಯವಿಲ್ಲ. ಬೆಳಗ್ಗೆ 7.30 ರ ಒಳಗೆ ವಿದ್ಯಾರ್ಥಿಗಳು ನಿಗದಿ ಪಡಿಸಲಾದ ಗಡಿ ಕೇಂದ್ರಗಳಿಗೆ ಬಂದು ತಲಪಬೇಕು. ಪರೀಕ್ಷಾ ಅಡ್ಮಿಷನ್ ಟಿಕೆಟ್ ಮಾತ್ರ ಜತೆಗಿದ್ದರೆ ಸಾಕು. ವಿದ್ಯಾರ್ಥಿಗಳ ಜೊತೆ ಹೆತ್ತವರು ಪರೀಕ್ಷಾ ಕೇಂದ್ರಗಳಿಗೆ ಬರಲು ಅನುಮತಿಯಿಲ್ಲ. ಗಡಿ ಕೇಂದ್ರಗಳಿಗೆ ಸೂಕ್ತ ಸಮಯದಲ್ಲಿ ವಿದ್ಯಾರ್ಥಿಗಳನ್ನು ತಲಪಿಸುವ ಮತ್ತು ಮರಳಿ ಒಯ್ಯುವ ಹೊಣೆ ಹೆತ್ತವರದು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಗತ್ಯದ ಆಹಾರ ಮತ್ತು ಕುಡಿಯುವ ನೀರನ್ನು ಜತೆಗೆ ತರಬೇಕು.



