ಕುಂಬಳೆ: ಕೋವಿಡ್ ತುರ್ತು ಸಂದರ್ಭದಲ್ಲಿ ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದಾಗಿ ಮಂಗಲ್ಪಾಡಿಯಲ್ಲಿರುವ ಮಂಜೇಶ್ವರ ತಾಲ್ಲೂಕು ಆಸ್ಪತ್ರೆ ಮೂಲ ಸೌಕರ್ಯಗಳಿಂದ ವಂಚಿತಗೊಂಡು ನಾಗರಿಕರಿಗೆ ಅಲಭ್ಯಗೊಂಡಿರುವುದು ಖೇದಕರ. ಸರ್ಕಾರ ಇತರ ತಾಲ್ಲೂಕು ಆಸ್ಪತ್ರೆಗಳ ಅಭಿವೃದ್ದಿಗೆ ವಿವಿಧ ನೆರವನ್ನು ಒದಗಿಸುತ್ತಿದ್ದರೂ ಮಂಜೇಶ್ವರ ತಾಲೂಕು ಆಸ್ಪತ್ರೆಯನ್ನು ಅವಗಣಿಸುತ್ತಿದೆ ಎಂದು ಮಂಗಲ್ಪಾಡಿ ಪೀಪಲ್ಸ್ ಫಶಾರಂ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದೆ.
ಕೋವಿಡ್ ಲಾಕ್ ಡೌನ್ ಸಂದರ್ಭ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ 20ಕ್ಕಿಂತಲೂ ಹೆಚ್ಚು ಮಂದಿ ತುರ್ತು ಚಿಕಿತ್ಸೆ ಲಭ್ಯವಾಗದೆ ಮೃತಪಟ್ಟಿರುವುದು ತಾಲೂಕು ಆಸ್ಪತ್ರೆಯ ಅಸಮರ್ಥತೆಯನ್ನು ಎತ್ತಿ ತೋರಿಸುತ್ತದೆ. ತಾಲೂಕು ಆಸ್ಪತ್ರೆಯ ಸಮಗ್ರ ಅಭಿವೃದ್ದಿಗಾಗಿ ಮಂಗಲ್ಪಾಡಿ ಪೀಪಲ್ಸ್ ಪಾರಂ(ಜನಕೀಯ ವೇದಿ) ನೇತೃತ್ವದಲ್ಲಿ ಇಂದಿನಿಂದ(ಜು.9) ಅನಿರ್ಧಿಷ್ಠಾವದಿ ಪ್ರತಿಭಟನೆಯನ್ನು ಆರಂಭಿಸಲಿದೆ ಎಂದು ಸಂಬಂಧಪಟ್ಟವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಲ್ಲೂಕು ಆಸ್ಪತ್ರೆಗೆ ಅಗತ್ಯವಾದ ಕಟ್ಟಡವನ್ನು ನಿರ್ಮಿಸಬೇಕು, ಸಾಕಷ್ಟು ವೈದ್ಯರು ಮತ್ತು ಅಗತ್ಯ ಸಿಬ್ಬಂದಿಗಳನ್ನು ನೇಮಿಸಬೇಕು, ವಿಶೇಷ ತಜ್ಞ ವೈದ್ಯರನ್ನು ನೇಮಿಸಬೇಕು, 24 ಗಂಟೆಗಳೂ ಕಾರ್ಯಾಚರಿಸುವ ಪ್ರಯೋಗಾಲಯ(ಕ್ಲಿನಿಕಲ್ ಲ್ಯಾಬ್) ಸೌಲಭ್ಯಗಳನ್ನು ಕಲ್ಪಿಸಬೇಕು, ತುರ್ತು ಅಪಘಾತ ಚಿಕಿತ್ಸೆಗೆ ವಿಶೇಷ ಸೌಲಭ್ಯವನ್ನು ಏರ್ಪಡಿಸಬೇಕು ಮತ್ತು ತಾಲ್ಲೂಕು ಆಸ್ಪತ್ರೆಯ ಅಭಿವೃದ್ದಿಗಾಗಿ ಕಿಬ್ಬಿಯಲ್ಲಿ ಸೇರ್ಪಡೆಗೊಳಿಸಬೇಕು ಎಂಬ ಬೇಡಿಕೆಗಳನ್ನೊಳಗೊಂಡ ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಯಲಿದೆ.
ತಾಲೂಕು ಆಸ್ಪತ್ರೆಗೆ ಐದು ಅಂತಸ್ತಿನ ಕಟ್ಟಡ ನಿರ್ಮಿಸಲು 5 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುವುದೆಂದು ಈ ಹಿಂದೆ ಜಿಲ್ಲಾಧಿಕಾರಿಗಳು ಪ್ರಕಟಣೆ ನೀಡಿದ್ದರು. ಆದರೆ ಅದಿನ್ನೂ ಸಾಕಾರಗೊಂಡಿಲ್ಲ. 2019ರ ಆಗಸ್ಟ್ 15 ರಂದು ದಾಖಲಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಆರಂಭಗೊಂಡರೂ ಬಳಿಕ ಮೊಟಕುಗೊಂಡಿದೆ.20 ಕೋಟಿ ರೂ.ಗಳ ನೂತನ ಕಟ್ಟಡ ಯೋಜನೆ ತಯಾರಿಸಿ ಸರ್ಕಾರದ ಅನುಮತಿಗೆ ನೀಡಲಾಗಿದೆ ಎಂದು ಅಧಿಕೃತರು ಹೇಳಿಕೆ ನೀಡುತ್ತಿದ್ದರೂ ನಿಖರವಾಗಿ ನಂಬುವಂತಿಲ್ಲ. 2014ರ ಮಾ.20 ರಂದು ನೂತನ ಮಂಜೇಶ್ವರ ತಾಲೂಕು ಉದ್ಘಾಟನೆ ಬಳಿಕ 2018ರ ಕೊನೆಯವರೆಗೂ ಆಸ್ಪತ್ರೆಯನ್ನು ಭಡ್ತಿಗೊಳಿಸಿರಿಲ್ಲ. ಬಳಿಕ ತಾಲೂಕುಆಸ್ಪತ್ರೆಯಾಗಿ ಭಡ್ತಿ ನೀಡಿದರೂ ಮೂಲ ಸೌಕರ್ಯ ಒದಗಿಸದೆ ಇರುವುದು ವ್ಯಾಪಕ ಅವಗಣನೆಯಾಗಿದೆ.
ಮಂಗಲ್ಪಾಡಿ ಪೀಪಲ್ಸ್ ಫೆÇೀರಂ ಈ ಹಿಂದೆ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದ್ದು, ಮಂಗಲ್ಪಾಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಸೌಲಭ್ಯಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿ, ಇದನ್ನು ಮೇಲ್ದರ್ಜೆಗೇರಿಸಲುಒತ್ತಾಯಿಸಿತ್ತು. ಪ್ರಸ್ತುತ ಮೂವರು ವೈದ್ಯರುಗಳು ಮಾತ್ರ ಸೇವಾ ನಿರತರಾಗಿದ್ದಾರೆ. ಸಿಬ್ಬಂದಿಗಳ ಕೊರತೆಯೂ ಸಾಕಷ್ಟಿದೆ. ದಿನವೊಂದರಲ್ಲಿ 600 ರಿಂದ 700 ರಷ್ಟು ಮಂದಿ ರೋಗಿಗಳು ಆಗಮಿಸುವ ಈ ಆಸ್ಪತ್ರೆಯ ಸೌಲಭ್ಯ ಸಮರ್ಪಕವಾಗಿ ಇರದಿರುವುಉದ ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ. ಪ್ರಾಥಮಿಕ ಹಂತದ ಪರೀಕ್ಷೆಗಳಿಗೆ ಮಾತ್ರ ಇರುವ ಪ್ರಯೋಗಾಲಯ, ಸ್ಕ್ಯಾನಿಂಗ್ ಎಕ್ಸರೇ ಸೌಲಭ್ಯಗಳು ಇನ್ನೂ ವ್ಯವಸ್ಥೆಗೊಳಿಸಿಲ್ಲ. ಈಹಿನ್ನೆಲೆಯಲ್ಲಿ ಆಸ್ಪತ್ರೆಯ ಅವಗಣನೆ ವಿರೋಧಿಸಿ ಪೀಪಲ್ಸ್ ಫೋರಂ ಅನಿರ್ಧಿಷ್ಠಾವಧಿ ಹೋರಾಟವನ್ನು ಕೈಗೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಪೀಪಲ್ಸ್ ಪೋರಂನ ಸಂಚಾಲಕ ಅಬು ತಮಾಂ, ಕಾರ್ಯದರ್ಶಿ ಸಿದ್ದೀಕ್ ಕೈಕಂಬ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.


