ಕಾಸರಗೋಡು: ಕೋವಿಡ್ ಸಮುದಾಯ ಹರಡುವಿಕೆ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕಗೊಳ್ಳುತ್ತಿದೆ. ಸಿಪಿಎಂ ರಾಜ್ಯ ಸಮಿತಿ ಸದಸ್ಯ ಕೆ.ಪಿ.ಸತೀಶ್ಚಂದ್ರ್ರನ್, ತ್ರಿಕ್ಕರಿಪುರ ಶಾಸಕ ಎಂ.ರಾಜಗೋಪಾಲ್ ಸೇರಿದಂತೆ ಡಜನ್ ಗಟ್ಟಲೆ ಸಿಪಿಎಂ ನಾಯಕರು ಇದೀಗ ನಿರೀಕ್ಷಣೆಗೆ ಒಳಗಾಗಿದ್ದಾರೆ.
ನೀಲೇಶ್ವರ ಬ್ಲಾಕ್ ಪಂಚಾಯತಿ ಸದಸ್ಯರೋರ್ವರಿಗೆ ಶನಿವಾರ ಕೋವಿಡ್ ಸೋಂಕು ದೃಢಪಡಿಸಲಾಗಿದ್ದು ಜು. 19 ರಂದು ಚೀಮೇನಿಯಲ್ಲಿ ನಡೆದ ಸಭೆಯೊಂದರಲ್ಲಿ ಇವರು ಪಾಲ್ಗೊಂಡಿದ್ದರು. ಆ ಸಭೆಗೆ ಶಾಸಕ, ರಾಜಕೀಯ ಪಕ್ಷಗಳ ಪ್ರಮುಖ ನೇತಾರರೂ ಭಾಗವಹಿಸಿದ್ದರಿಂದ ಅವರೆಲ್ಲ ಇದೀಗ ನಿರೀಕ್ಷಣೆಗೆ ಒಳಗಾಗಬೇಕಾಯಿತು.
ಭಾನುವಾರ ಅಂದಿನ ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ನೀಲೇಶ್ವರ ತಾಲ್ಲೂಕು ಆಸ್ಪತ್ರೆಗೆ ತೆರಳಿ ಗಂಟಲ ದ್ರವ ಪರೀಕ್ಷೆ ನಡೆಸಿರುವರು. ಆದರೆ ಬ್ಲಾಕ್ ಪಂಚಾಯತಿ ಸದಸ್ಯ ಹಲವು ದಿನಗಳಿಂದ ಕಚೇರಿಗೆ ಆಗಮಿಸದ ಕಾರಣ ಬ್ಲಾ.ಪಂ. ಕಾರ್ಯಾಲಯವನ್ನು ಮುಚ್ಚಬೇಕಾದ ಅಗತ್ಯ ಕಂಡುಬಂದಿಲ್ಲ.
ಆಸ್ಪತ್ರೆ ಮುಚ್ಚುಗಡೆ:
ರೋಗಿಯೊಬ್ಬರಿಗೆ ಕೋವಿಡ್ ಬಾಧಿಸಿದ್ದರಿಂದ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕವನ್ನು ಎರಡು ದಿನಗಳ ಕಾಲ ಮುಚ್ಚಲಾಯಿತು. ರೋಗಿಗಳನ್ನು ಸ್ಥಳಾಂತರಿಸಲಾಯಿತು. ವೈದ್ಯರೊಬ್ಬರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಮಂಗಲ್ಪಾಡಿ ತಾಲ್ಲೂಕು ಆಸ್ಪತ್ರೆಯಯನ್ನು ಎರಡು ದಿನಗಳ ಕಾಲ ಮುಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತ್ರಿಕ್ಕರಿಪುರ ಲೈಫ್ ಕೇರ್ ಆಸ್ಪತ್ರೆಯ ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿರುವುದರಿಂದ ಆಸ್ಪತ್ರೆಯನ್ನು ಶನಿವಾರದಿಂದ ಎರಡು ದಿನಗಳವರೆಗೆ ಮುಚ್ಚಲಾಗಿದೆ ಎಂದು ಆಸ್ಪತ್ರೆ ಆಡಳಿತ ಸಮಿತಿ ತಿಳಿಸಿದೆ.
ಜಿಲ್ಲೆಯಲ್ಲಿ ಶನಿವಾರ ಮೂರು ಹೊಸ ಕ್ಲಸ್ಟರ್ಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬದಿಯಡ್ಕ ಗ್ರಾ.ಪಂ. ವ್ಯಾಪ್ತಿಯ ನೀರ್ಚಾಲು, ಬೆಳ್ಳೂರು ಗ್ರಾ.ಪಂ.ನ ನಾಟೆಕಲ್ಲು ಮತ್ತು ಚೆಂಗಳ ಪಂಚಾಯತಿಯ ಪಿಲಾಂಕಟ್ಟೆಯ ಮ್ಯಾರೇಜ್ ಕ್ಲಸ್ಟರ್ ಜಿಲ್ಲೆಯಲ್ಲಿ ಹೊಸದಾಗಿ ರೂಪುಗೊಂಡ ಕ್ಲಸ್ಟರ್ಗಳಾಗಿವೆ. ಇದು ಜಿಲ್ಲೆಯ ಕ್ಲಸ್ಟರ್ಗಳ ಸಂಖ್ಯೆಯನ್ನು ಒಂಬತ್ತಕ್ಕೆ ಏರಿಸಿದೆ.


