ಕುಂಬಳೆ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಉಪ್ಪಳ ವ್ಯಾಪ್ತಿಯ ವ್ಯಾಪಾರಿಗಳು ಕಳೆದ ಎರಡು ತಿಂಗಳುಗಳಿಂದ ಕೊರೊನಾ ಮಹಾಮಾರಿಯ ಸಂಕಷ್ಟಕ್ಕೊಳಗಾಗಿದ್ದಾರೆ. ಜೂನ್ನಿಂದ ಅಗತ್ಯ ಸೇವೆಗಳ ಒದಗಿಸುವಿಕೆಯ ಹಿನ್ನೆಲೆಯಲ್ಲಿ ಹಲವಾರು ಅಂಗಡಿಗಳು ಸರ್ಕಾರದ ಮಾನದಂಡಗಳಿಗೆ ಅನುಸಾರವಾಗಿ ಮತ್ತೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿತು.ಆದರೆ ಇದೀಗ ಮತ್ತೆ ವ್ಯಾಪಕಗೊಂಡಿರುವ ವೈರಸ್ ಬಾಧೆಯ ಹಿನ್ನೆಲೆಯಲ್ಲಿ ಜೂ.8 ರಿಂದ ಉಪ್ಪಳ ವ್ಯಾಪ್ತಿಯಲ್ಲಿ ಅಂಗಡಿ-ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲು ಅಧಿಕೃತರು ಮುಂದಾಗಿದ್ದು ಇದರಿಂದ ದಿಕ್ಕೆಟ್ಟು ಸಂಕಷ್ಟಕ್ಕೊಳಗಾದ ವ್ಯಾಪಾರಿಗಳಿಗೆ ನ್ಯಾಯದೊರಕಿಸಬೇಕು ಎಂದು ಉಪ್ಪಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪ್ರತಿನಿಧಿಗಳು ಗುರುವಾರ ಸಂಜೆ ಕುಂಬಳೆಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಂಬರಲಿರುವ ವಿವಿಧ ಹಬ್ಬಾಚರಣೆಗಳನ್ನು ಲಕ್ಷ್ಯವಾಗಿರಿಸಿ ಹಲವು ವ್ಯಾಪಾರಿಗಳು ಸಾಲ ರೂಪದಲ್ಲಿ ಮೂಲಧನ ಒಟ್ಟಾಗಿಸಿ ಮತ್ತೆ ವ್ಯವಹಾರ ವೃದ್ದಿಗೆ ತೊಡಗಿಸಿಕೊಳ್ಳುವ ಮಧ್ಯೆ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಿಸುವ ಯತ್ನ ಆತ್ಮಹತ್ಯೆಯಂತಹ ವ್ಯವಸ್ಥೆಗೆ ವ್ಯಾಪಾರಿಗಳನ್ನು ಕೊಂಡೊಯ್ಯಲಿದೆ. ಆದ್ದರಿಂದ, ವ್ಯವಹಾರ ವ್ಯವಹಾರದ ಸುವ್ಯವಸ್ಥಿತ ನಿರ್ವಹಣೆಗೆ ಜಿಲ್ಲಾಧಿಕಾರಿ, ಪೆÇಲೀಸ್ ಮುಖ್ಯಸ್ಥರು ಮತ್ತು ಆರೋಗ್ಯ ಇಲಾಖೆಯ ಅಧಿಕೃತರು ಕಾನೂನು ರೂಪಣೆಯ ವೇಳೆ ಒಂದಷ್ಟು ಮಾನವೀಯತೆ ತೋರ್ಪಡಿಸಿ ಬದುಕಲು ಅವಕಾಶ ಮಾಡಿಕೊಡಬೇಕೆಂದು ಸಮಿತಿ ಪದಾಧಿಕಾರಿಗಳು ವಿನಂತಿಸಿದರು. ಉಪ್ಪಳ ಘಟಕದ ಅಧ್ಯಕ್ಷ ಮೊಹಮ್ಮದ್ ರಫೀಕ್ ಕೆ.ಐ, ಕಾರ್ಯದರ್ಶಿ ಕಮಲಾಕ್ಷ, ಸದಸ್ಯರಾದ ಅಬ್ದುಲ್ ಜಬ್ಬಾರ್, ರಿಶಾದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.


