ತಿರುವನಂತಪುರ: ತಿರುವನಂತಪುರದ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ತನಗೆ ಯಾವುದೇ ಸಂಬಂಧವಿಲ್ಲ. ಆದರೆ ಈ ಬಗ್ಗೆ ತನ್ನ ಹೆಸರು ಕೇಳಿಬಂದಿದ್ದರಿಂದ ಭಯಗೊಂಡು ಅಡಗಬೇಕಾಯಿತು. ನಾನು ನಿರಪರಾಧಿ ಎಂದು ಆರೋಪಿತೆ ಸ್ವಪ್ನಾ ಸುರೇಶ್ ಗುರುವಾರ ಮಾಧ್ಯಮಗಳಿಗೆ ಕಳಿಸಲಾದ ಧ್ವನಿ ಸಂದೇಶದಲ್ಲಿ ಅವಲತ್ತುಕೊಂಡ ಘಟನೆ ನಡೆದಿದೆ.
ನನ್ನ ಕುಟುಂಬ ಮತ್ತು ನಾನು ಈಗ ಆತ್ಮಹತ್ಯೆಯ ಅಂಚಿನಲ್ಲಿದ್ದೇವೆ. ಯಾರೊಂದಿಗೂ, ಯಾವ ವಿಷಯಗಳಲ್ಲೂ ಸಂಬಂಧವಿಲ್ಲ. ಯಾವುದೇ ರೀತಿಯ ತನಿಖೆಗೂ ಸಿದ್ದಳಿದ್ದೇನೆ. ತನಗೆ ಮುಖ್ಯಮಂತ್ರಿಗಳಲ್ಲಾಗಲಿ ಅಥವಾ ಸಚಿವರೊಂದಿಗೆ ಯಾವುದೇ ಸಂಬಂಧವಿಲ್ಲ. ಯಾವುದೇ ಕಾರ್ಯಕ್ರಮಗಳಲ್ಲಿ ಈವರೆಗೆ ಮುಖ್ಯಮಂತ್ರಿಯೊಂದಿಗೆ ಭಾಗವಹಿಸಿಲ್ಲ. ಉನ್ನತ ಸ್ಥಾನದಲ್ಲಿರುವವರೊಂದಿಗೆ ಉದ್ಯೋಗ ಸಂಬಂಧಿ ಸಂಪರ್ಕವನ್ನಷ್ಟೇ ಹೊಂದಿರುವೆ ಎಂದು ಧ್ವನಿ ಸಂದೇಶದಲ್ಲಿ ಸ್ವಪ್ನಾ ತಿಳಿಸಿರುವರು.
ಮುಂಬರಲಿರುವ ರಾಜ್ಯ ವಿಧಾನ ಸಭಾ ಚುನಾವಣೆಯನ್ನು ಲಕ್ಷ್ಯವಾಗಿರಿಸಿ ಇಂತಹದೊಂದು ಗೊಂದಲ ಸೃಷ್ಟಿಸಲಾಗಿದೆ. ಪ್ರಸ್ತುತ ಕೆಲಸ ನಿರ್ವಹಿಸುವ ರಾಜ್ಯ ಸರ್ಕಾರಿ ಉದ್ಯೋಗಕ್ಕಿಂತ ಹೆಚ್ಚಿನ ಸಂಬಳ ತನಗೆ ಈ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ಯುಎನ್ ದೂತಾವಾಸದಲ್ಲಿ ಲಭ್ಯವಾಗುತ್ತಿತ್ತು. ತಾನೀಗ ಅಡಗಿಕೊಂಡಿರುವುದು ತನ್ನ ಬಗ್ಗೆ ಕೇಳಿ ಬಂದ ಅನಿರೀಕ್ಷಿತ ಆರೋಪಗಳ ಭಯದಿಂದ. ಮಾಧ್ಯಮಗಳಲ್ಲಿ ತನ್ನ ಬಗ್ಗೆ ಕೇಳಿಬರುತ್ತಿರುವ ಆರೋಪಗಳನ್ನು ಗಮನಿಸಿದರೆ ಹಲವು ಸಂಶಗಳಿಗೂ ಎಡೆಮಾಡಿದೆ. ಇದರ ಹಿಂದೆ ಏನೋ ಲಕ್ಷ್ಯ ಇದ್ದಂತಿದೆ. ಕಾರ್ಗೋ ವಿಮಾನದಲ್ಲಿ ಅಕ್ರಮ ಚಿನ್ನವನ್ನು ಯಾರು, ಯಾರಿಗೆ ಕಳಿಸಿದ್ದಾರೆ ಎಂಬ ಬಗ್ಗೆ, ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ನಾವು ಶೋಧಿಸಬೇಕು.ತನ್ನನ್ನು ಬಲಿಪಶುಮಾಡಲಾಗುತ್ತಿದೆ ಎಂದು ಸ್ವಪ್ನಾ ಸುರೇಶ್ ಹೇಳಿರುವರು.
ತಾನು ಮಂತ್ರಿಗಳು, ಮುಖ್ಯಮಂತ್ರಿಗಳು, ಪ್ರತಿಪಕ್ಷ ನಾಯಕರೊಂದಿಗೆ ಮಾತನಾಡಿರುವುದು ನಿಜ. ಆದರೆ ಅದು ವೈಯುಕ್ತಿಕವಾಗಿರದೆ ಉದ್ಯೋಗ ಸಂಬಂಧಿ ಮಾತುಕತೆಗಳಾಗಿದ್ದವು. ಆದರೆ ಮುಖ್ಯಮಂತ್ರಿ, ಮಂತ್ರಿಗಳ ಮನೆಗಳಿಗೆ ಈವರೆಗೆ ತೆರಳಿಲ್ಲ. ನಾನು ಮುಖ್ಯಮಂತ್ರಿಗಳೊಂದಿಗೆ ಕ್ಲಬ್ಗಳಿಗೆ ಹೋಗಿದ್ದೇನೆ ಎಂದು ಹೇಳಿದರೆ, ಯಾರಿಗೂ ತೊಂದರೆಯಾಗುವುದಿಲ್ಲ. ಅಂತಹ ಘಟನೆ ನಡೆದಿಲ್ಲ ಎಂದು ಸ್ವಪ್ನಾ ತಿಳಿಸಿರುವರು.


