ಕುಂಬಳೆ/ಮಂಜೇಶ್ವರ: ಮೂರು ಹಂತಗಳ ಬಳಿಕ ಕೋವಿಡ್ ಬಾಧಿಸಿದವರಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿಯಾಗಿರುವುದು ಕಾಸರಗೋಡು ನಗರ ಸಭೆ ಹಾಗೂ ಚೆಮ್ನಾಡು ಗ್ರಾ.ಪಂ. ವ್ಯಾಪ್ತಿಗಳಲ್ಲಾಗಿದೆ. ಶನಿವಾರದ ವರದಿಯ ಅನ್ವಯ ಕಾಸರಗೋಡು ನಗರ ಸಭೆ 58 ಹಾಗೂ ಚೆಮ್ನಾಡು ಗ್ರಾ.ಪಂ. ನಲ್ಲಿ 56 ಒಟ್ಟು ಸೋಂಕಿತರು ಪತ್ತೆಯಾಗಿದ್ದಾರೆ. ಎರಡನೇ ಹಂತದ ಕೋವಿಡ್ ಸಂದರ್ಭ ರಾಜ್ಯದಲ್ಲೇ ಅತೀ ಹೆಚ್ಚು ಸೋಂಕು ಬಾಧಿತರಿದ್ದ ಗ್ರಾ.ಪಂ. ಚೆಮ್ನಾಡು ಆಗಿದ್ದುದು ಇಲ್ಲಿ ಉಲ್ಲೇಖಾರ್ಹ. ಮೂರು ಹಂತದ ಲಾಕ್ ಡೌನ್ ಸಂದರ್ಭಗಳಲ್ಲೂ ಅತೀ ಜಾಗೃತ ವಲಯವಾಗಿ ಕಾಸರಗೋಡು ನಗರ ಸಭೆ ಹಾಗೂ ಚೆಮ್ನಾಡು ಪಂಚಾಯತಿಗಳಲ್ಲಿ ವಹಿಸಿದ್ದ ಕಾಳಜಿಯ ಪರಿಣಾಮ ಸಾಮುದಾಯಿಕ ಹರಡುವಿಕೆಯನ್ನು ಸಮರ್ಥವಾಗಿ ನಿಯಂತ್ರಿಸಲಾಗಿತ್ತು.
ಆದರೆ ಮೂರನೇ ಹಂತದಲ್ಲಿ ಅನ್ಯ ರಾಜ್ಯಗಳು ಮತ್ತು ಹೊರ ದೇಶಗಳಿಂದ ತಮಡೋಪತಂಡಗಳಾಗಿ ಜನರು ಆಗಮಿಸುತ್ತಿರುವಂತೆ ಈ ಪ್ರದೇಶಗಳಲ್ಲಿ ಸೋಂಕು ಹರಡುವಿಕೆ ತೀವ್ರಗೊಂಡಿದೆ. ಆದರೆ ಹೀಗೆ ಬಂದವರಲ್ಲಿ ಶೇ. 50 ಜನರು ಮಂಜೇಶ್ವರ ತಾಲೂಕು ವ್ಯಾಪ್ತಿಯ ವಿವಿಧಡೆಗಳ ಜನರಾಗಿದ್ದು ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಇದೀಗ ತೀವ್ರ ಕಳವಳಕಾರಿ ಸೋಂಕು ಬಾಧಿತರು ಪತ್ತೆಯಾಗಿರುವರು. ಎರಡನೇ ಹಂತದ ಲಾಕ್ ಡೌನ್ ಸಂದರ್ಭ ಜಿಲ್ಲೆಯ 15 ಗ್ರಾ.ಪಂ. ಗಳು ಮತ್ತು ಎರಡು ನಗರಸಭೆಯಲ್ಲಿ ಮಾತ್ರ ಸೋಂಕಿತರು ಕಂಡುಬಂದಿದ್ದರು. ಮೂರನೇ ಹಂತದ ಲಾಕ್ ಡೌನ್ ವೇಳೆ 37 ಗ್ರಾ.ಪಂ.ಗಳಲ್ಲೂ ಮೂರು ನಗರ ಸಭೆಗಳ ಜನರು ರೋಗ ಬಾಧಿತರಾದರು.
ಮಂಜೇಶ್ವರ ತಾಲೂಕು ಆಸ್ಪತ್ರೆ ಸೀಲ್ ಡೌನ್!:
ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆಗಮಿಸಿದ ಯುವತಿಯೊಬ್ಬಳಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಯನ್ನು ಶನಿವಾರ ಸಂಜೆಯಿಂದ ಸೀಲ್ ಡೌನ್ ಮಾಡಲಾಗಿದೆ. ಎರಡು ದಿನಗಳ ಹಿಂದೆ ಚಿಕಿತ್ಸೆಗಾಗಿ ಆಗಮಿಸಿದ್ದ ಉಪ್ಪಳ ಪರಿಸರದ ಯುವತಿಯೊಬ್ಬಳಿಗೆ ಶನಿವಾರ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಶುಕ್ರವಾರ ಎರಡನೇ ಬಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿದ ಯುವತಿ ಸಂಜೆ 5 ರಿಂದ ರಾತ್ರಿ 8ರ ವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದರ ಜೊತೆಗೆ ಶನಿವಾರ ಸಂಜೆಯ ಕೋವಿಡ್ ವರದಿಯಲ್ಲಿ ಸೋಂಕು ದೃಢಪಟ್ಟಿರುವ ಅಂಶವನ್ನು ತಿಳಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಎರಡು ಪಾಳಿಗಳಲ್ಲಾಗಿ ಕಾರ್ಯನಿರ್ವಹಿಸಿದ ಉದ್ಯೋಗಿಗಳನ್ನು ನಿರೀಕ್ಷಣೆಗಾಗಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಯಾವುದೇ ಉದ್ಯೋಗಿಗಳಿಲ್ಲದೆ ಸಂಪೂರ್ಣ ಸೀಲ್ ಡೌನ್ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಭಾನುವಾರ ಪೂರ್ತಿ ಆಸ್ಪತ್ರೆಯಲ್ಲಿ ಅಣು ವಿಮುಕ್ತ ಚಟುವಟಿಕೆ ನಡೆಸಲಾಯಿತು. ಸೋಮವಾರ ಅಗತ್ಯದ ಉದ್ಯೋಗಿಗಳನ್ನು ನೇಮಿಸುವ ಬಗ್ಗೆ ಅಧಿಕೃತರು ಭರವಸೆ ನೀಡಿರುವರು.



