ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಪ್ರಧಾನ ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ಅವರನ್ನು ಬಂಧಿಸಿದ ಬಳಿಕ ಇದೀಗ ಮಾಜಿ ರಾಜ್ಯ ಕಾರ್ಯದರ್ಶಿ ಎಂ.ಶಿವಶಂಕರ್ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಎಂ.ಶಿವಶಂಕರ್ ಇವರಿಬ್ಬರೊಡನೆ ನಿಕಟ ಸಂಬಂಧ ಹೊಂದಿದ್ದರೆಂದು ತಿಳಿದುಬಂದಿದೆ. ಎನ್ಐಎ ಶನಿವಾರ ಬೆಂಗಳೂರಿನಲ್ಲಿ ಬಂಧಿಸಿ ಭಾನುವಾರ ಕೊಚ್ಚಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ತನಿಖಾ ತಂಡವು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಈ ಬಗ್ಗೆ ವಿವರವಾದ ವಿಚಾರಣೆಗೆ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಮಾಜಿ ಐಟಿ ಕಾರ್ಯದರ್ಶಿ ಶಿವಶಂಕರ್ ಅವರ ಹೇಳಿಕೆಯನ್ನು ದಾಖಲಿಸಬಹುದು ಎಂಬ ವರದಿಗಳಿವೆ.
ಶನಿವಾರ ತಿರುವನಂತಪುರಂನ ಶಿವಶಂಕರ್ ಅವರ ಫ್ಲ್ಯಾಟ್ನಲ್ಲಿ ಕಸ್ಟಮ್ಸ್ ಸಂಪೂರ್ಣ ತಪಾಸಣೆ ನಡೆಸಿದೆ. ಆದರೆ ಚಿನ್ನದ ಕಳ್ಳಸಾಗಣೆಗೆ ಸಂಬಂಧಿಸಿರುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಈ ಪ್ರಕರಣದಲ್ಲಿ ಈ ಹಿಂದೆ ಬಂಧಿಸಲ್ಪಟ್ಟಿದ್ದ ಸರಿತ್ ತಾನು ಶಿವಶಂಕರ್ ಮನೆಗೆ ಹೋಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದ ಮೂವರು ಆರೋಪಿಗಳೊಂದಿಗೆ ಶಿವಶಂಕರ್ ಪರಿಚಯ ಹೊಂದಿದ್ದರು ಎಂದು ತಿಳಿದುಬಂದಿದೆ. ಶಿವಶಂಕರ್ ಅವರನ್ನು ಏಕೆ ಅಮಾನತುಗೊಳಿಸಲಾಗಿಲ್ಲ ಎಂದು ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಅವರು ವ್ಯಕ್ತಪಡಿಸಿದ್ದಾರೆ.
ಎಂ.ಶಿವಶಂಕರನ್ ಅವರು ಸಚಿವಾಲಯದ ಎದುರಿನ ಹೀದರ್ ಫ್ಲ್ಯಾಟ್ನಲ್ಲಿ ತಂಗುತ್ತಿದ್ದರು ಎಂದು ಕೆಲವು ವರದಿಗಳು ತಿಳಿಸಿವೆ. ತಡರಾತ್ರಿಯಲ್ಲಿ ಅಧಿಕೃತ ವಾಹನದಲ್ಲಿ ಫ್ಲ್ಯಾಟ್ಗೆ ಬಂದಿರುವುದಾಗಿ ಫ್ಲ್ಯಾಟ್ನ ಭದ್ರತಾ ಸಿಬ್ಬಂದಿಯನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಅವರೊಂದಿಗೆ ಯಾರೆಲ್ಲ ಇದ್ದರೆಂಬ ಬಗ್ಗೆ ಸ್ಪಷ್ಟತೆ ವ್ಯಕ್ತವಾಗಿಲ್ಲ. ಆರೋಪಿಗಳಾದ ಸಂದೀಪ್, ಸ್ವಪ್ನಾ ಮತ್ತು ಸರಿತ್ ಅವರು ಒಂದೇ ಫ್ಲಾಟ್ ಕಾಂಪ್ಲೆಕ್ಸ್ನಲ್ಲಿ ಚಿನ್ನದ ಕಳ್ಳಸಾಗಣೆ ವ್ಯವಹಾರದ ಬಗ್ಗೆ ಚರ್ಚಿಸುತ್ತಿದ್ದರು ಎಂದು ತಿಳಿದುಬಂದಿದೆ.
ವಿವಾದದಲ್ಲಿ ಶಿವಶಂಕರ್ ಅವರ ಪಾತ್ರ ಬಹಿರಂಗಗೊಂಡ ಬಳಿಕ ಸರ್ಕಾರ ಅವರನ್ನು ಪ್ರಧಾನ ಕಾರ್ಯದರ್ಶಿ ಮತ್ತು ಐಟಿ ಕಾರ್ಯದರ್ಶಿ ಹುದ್ದೆಗಳಿಂದ ತೆಗೆದುಹಾಕಿತ್ತು. ಆದರೆ ಅವರನ್ನು ಅಮಾನತುಗೊಳಿಸುವ ಮೊದಲು ಕೇರಳ ರಾಜ್ಯ ಐಟಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ನಲ್ಲಿ 34 ಹೆಚ್ಚುವರಿ ಹುದ್ದೆಗಳನ್ನು ಹೊಂದಿದ್ದರೆಂದೂ ತಿಳಿದುಬಂದಿದೆ. ಈ ಪೈಕಿ 16 ಖಾಯಂ ನೇಮಕಾತಿಯಾಗಿದೆ. ಇದೀಗ ಸರ್ಕಾರ ಎಚ್ಚೆತ್ತಿದ್ದು ಸೃಸ್ಟಿಸಲಾಗಿದ್ದ ಹೊಸ ಹುದ್ದೆಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಮುಂದಾಗಿದೆ.


