ಮಂಜೇಶ್ವರ: ಕಿಫ್ಬಿ ಯಿಂದ ಮಂಜೂರುಗೊಂಡ ಶಾಲೆಗಳ ಮೂಲ ಸೌಕರ್ಯಾಭಿವೃದ್ದಿ ಯೋಜನೆಯ ಅಂಗವಾಗಿ ಬಂಗ್ರಮಂಜೇಶ್ವರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಯ ಉದ್ಘಾಟನಾ ಸಮಾರಂಭ ಶಾಲೆಯಲ್ಲಿ ಕೋವಿಡ್ ಮಾನದಂಡಗಳನ್ನು ಪಾಲಿಸಿ ಶನಿವಾರ ಸರಳವಾದ ವಿಧಾನದಲ್ಲಿ ನಡೆಯಿತು.
ವಿಡಿಯೋ ಕಾನ್ಫರೆನ್ಸ್ ಮೂಲಕ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿ ಶುಭಹಾರೈಸಿದರು. ರಾಜ್ಯದಲ್ಲಿ ಏಕಕಾಲದಲ್ಲಿ ನಡೆದ ಐವತ್ತಾರು ಸರ್ಕಾರೀ ಶಾಲೆಗಳಿಗೆ ಸರ್ಕಾರವು ಮಂಜೂರು ಗೊಳಿಸಿದ ನೂತನ ಕಟ್ಟಡದ ನಿರ್ಮಾಣ ಕಾರ್ಯಕ್ರಮ ಉದ್ಘಾಟನೆ ಈ ಮೂಲಕ ಆನ್ ಲೈನ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂ. ಅಧ್ಯಕ್ಷ ಎ.ಜಿ.ಸಿ. ಬಶೀರ್, ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷ ಅಜೀಜ್ ಹಾಜಿ, ವಾರ್ಡ್ ಸದಸ್ಯೆ ಸಿಯಾನ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್, ಮುಖ್ಯೋಪಾಧ್ಯಾಯಿನಿ ಸುನಿತಾ ಸಹಿತ ಹಲವರು ಪಾಲ್ಗೊಂಡರು.
ಕಿಫ್ಬಿ(ಕೇರಳ ಇನ್ಪ್ರಾ ಷ್ಟ್ರಕ್ಷರಲ್ ಡೆವೆಲಪ್ ಮೆಂಟ್ ಬೋರ್ಡ್) ಯಿಂದ ಕಾಸರಗೋಡು ಜಿಲ್ಲೆಯ 9 ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಪಡಿಸಲು 10.62 ಕೋಟಿ ರೂ.ನ ಆರ್ಥಿಕ ಸಹಾಯ ಮಂಜೂರಾಗಿದೆ.
ರಾಜ್ಯದಲ್ಲಿ ಒಟ್ಟು 56 ಶಾಲೆಗಳಿಗೆ ಈ ನಿಟ್ಟಿನಲ್ಲಿ ಕಿಫ್ಬಿ ಯಿಂದ 69.25 ಕೋಟಿ ರೂ. ಮಂಜೂರುಗೊಂಡಿರುವ ಅಂಗವಾಗಿ ಜಿಲ್ಲೆಗೂ ಈ ಸೌಲಭ್ಯ ಒದಗಿದೆ. ಕಾಸರಗೋಡು ವಿಧಾನಸಭೆ ಕ್ಷೇತ್ರದ ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ (1,61,68,969 ರೂ.) ಮತ್ತು ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಬಂಗ್ರಮಂಜೇಶ್ವರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ( 1,79,34,343 ರೂ.)ಗಳಿಗೆ ಈ ಮೂಲಕ ಸೌಲಭ್ಯ ಒದಗಿದೆ.


