HEALTH TIPS

ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಬೇಳ ಬಯಲಿನಲ್ಲಿ ಭತ್ತದ ನಾಟಿ-ಕಾರ್ಯಕ್ರಮ ಸುಭಿಕ್ಷ ಕೇರಳಂ ಯೋಜನೆಯಲ್ಲಿ ಜಿಲ್ಲೆಯು ರಾಜ್ಯದಲ್ಲೇ ಮುಂಚೂಣಿಯಲ್ಲಿದೆ : ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು



          ಬದಿಯಡ್ಕ: ಕೋವಿಡ್ ರೋಗವು ಮನುಷ್ಯನ ದೈನಂದಿನ ಜೀವನಕ್ಕೆ ದೊಡ್ಡ ಹೊಡೆತವನ್ನೇ ನೀಡಿದ್ದು, ಮುಂದಿನ ದಿನಗಳಲ್ಲಿ ಆಹಾರ ಕ್ಷಾಮ ಉಂಟಾಗಬಾರದು ಎಂಬ ಮುಂದಾಲೋಚನೆಯೊಂದಿಗೆ ಆರಂಭಗೊಂಡ `ಸುಭಿಕ್ಷ ಕೇರಳಂ' ಯೋಜನೆಯಲ್ಲಿ ಕಾಸರಗೋಡು ಜಿಲ್ಲೆಯು ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಈ ನಿಟ್ಟಿನಲ್ಲಿ ಸಹಕರಿಸುತ್ತಿರುವುದು ಶ್ಲಾಘನೀಯ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಹೇಳಿದರು.
           ಮಂಗಳವಾರ ಬೆಳಿಗ್ಗೆ ಬೇಳ ಬಯಲಿನಲ್ಲಿ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಆಯೋಜಿಸಿದ `ಸುಭಿಕ್ಷ ಕೇರಳ' ಬಂಜರು ಭೂಮಿ ಕೃಷಿ ಯೋಜನೆಯ ಅಂಗವಾಗಿ ನಡೆದ ಭತ್ತ ನಾಟಿ ಕಾರ್ಯಕ್ರಮವನ್ನು ನೇಜಿ ನೆಟ್ಟು ಉದ್ಘಾಟಿಸಿ ಅವರು ಮಾತನಾಡಿದರು.
       ಆಹಾರ ಧಾನ್ಯಗಳಿಗಾಗಿ ಇತರರನ್ನು ಆಶ್ರಯಿಸದೆ ಜೀವನನ್ನು ನಡೆಸಲು ಪ್ರತಿಯೊಬ್ಬನೂ ಮುಂದೆ ಬರಬೇಕು. ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕೃಷಿ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಮುಂದೆಬರಬೇಕು ಎಂದು ಅವರು ಕರೆಯಿತ್ತರು.
         ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸರ್ಕಾರದ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಕೂಡಲೇ ಸ್ಪಂದಿಸುತ್ತಿದೆ. ಬಂಜರು ಭೂಮಿ ಕೃಷಿ ಯೋಜನೆಯು  ಆಹಾರ ಧಾನ್ಯಗಳ ಕೊರತೆಯನ್ನು ನೀಗಿಸಲು ಸಹಕಾರಿ ಎಂದರು.
         ಬೇಳ ಶೋಕಮಾತಾ ಧರ್ಮಕೇಂದ್ರದ ಧರ್ಮಗುರುಗಳಾದ ರೆ.ಫಾ. ಜೋನ್ ವಾಸ್ ಗೌರವ ಉಪಸ್ಥಿತರಿದ್ದು ಮಾತನಾಡಿದರು. ಕಾಸರಗೋಡು ಬ್ಲಾಕ್ ಪಂ. ಸದಸ್ಯ ಅವಿನಾಶ್ ರೈ ವಿ., ಗ್ರಾಪಂ ಸದಸ್ಯರುಗಳಾದ ಶಂಕರ ಡಿ., ಅನಿತಾ ಕ್ರಾಸ್ತಾ, ಸಹಕಾರಿ ಇಲಾಖೆಯ ಎ.ಆರ್.ಮುರಳೀಧರನ್ ಕೆ., ಪ್ರಿನ್ಸಿಫಲ್ ಕೃಷಿ ಅಧಿಕಾರಿ ಪ್ರಸಾದ್ ಮ್ಯಾಥ್ಯೂ, ಕೃಷಿ ಸಹಾಯಕ ನಿರ್ದೇಶಕ ಆನಂದ ಕೆ., ಕೋಪರೇಟಿವ್ ಯೂನಿಟ್ ಇನ್ಸ್‍ಪೆಕ್ಟರ್ ಮಣಿಕಂಠನ್ ಎಂ., ಬದಿಯಡ್ಕ ಕೃಷಿ ಅಧಿಕಾರಿ ಸಾಬು ಯಸ್.ಯಸ್., ಸಹಕಾರ ಭಾರತಿ ಕಾಸರಗೋಡು ತಾಲೂಕು ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಉಪಸ್ಥಿತರಿದ್ದರು. ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ, ಕಾರ್ಯದರ್ಶಿ ಅಜಿತ ಕುಮಾರಿ ವಿ. ವಂದಿಸಿದರು.
        ಪ್ರಭಾಕರ ಬೇಳ, ಕೃಷ್ಣ ಭಟ್ ಕಳಿಯಂಕಾನ, ಗೋಪಾಲಕೃಷ್ಣ ಆಚಾರ್ಯ, ರಾಮಚಂದ್ರ ಭಟ್ ಇವರ ಸುಮಾರು 5 ಎಕ್ರೆ ಪ್ರದೇಶಗಳಲ್ಲಿ ಬ್ಯಾಂಕ್ ವತಿಯಿಂದ ಭತ್ತದ ಕೃಷಿಯನ್ನು ಮಾಡಲಾಗುವುದು. ಕಪ್ಪು ಟೀಶರ್ಟ್, ಕಪ್ಪು ಪ್ಯಾಂಟ್ ಧರಿಸಿ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಪ್ಯಾಂಟ್ ನ್ನು ಮಡಚಿ ಮೇಲ್ಕಟ್ಟಿ  ಸ್ವತಃ ಕೆಸರುಗದ್ದೆಗಿಳಿದು ನೇಜಿ ನಾಟಿ ಮಾಡಿ ಗಮನ ಸೆಳೆದರು. ಬ್ಯಾಂಕಿನ ನಿರ್ದೇಶಕರು, ನೌಕರರು, ಸ್ಥಳೀಯರು ಕೋವಿಡ್ 19 ನಿಯಮಾವಳಿಗನುಸಾರವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries