ಕಾಸರಗೋಡು: ಬ್ರಹ್ಮೈಕ್ಯರಾದ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ ಪ್ರಥಮ ಆರಾಧನಾ ಕಾರ್ಯಕ್ರಮವು ಸೆ.15 ಮತ್ತು 16 ರಂದು ಶ್ರೀಮಠ ಪರಿಸರದಲ್ಲಿ ನಡೆಸಲು ಮಂಗಳವಾರ ಶ್ರೀಮಠದ ಆವರಣದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕರ್ನಾಟಕ ಸರ್ಕಾರದ ನಿವೃತ್ತ ಲೋಕಸೇವಾ ಆಯುಕ್ತ ಟಿ.ಶಾಮ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಮಹತ್ತರ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಕರೋನಾ ನಿಬಂಧನೆಗಳ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಿ ಎಲ್ಲಾ ವೈದಿಕ ವಿಧಾನಗಳೊಂದಿಗೆ ನಿರ್ವಹಿಸಲು ತೀರ್ಮಾನಿಸಲಾಯಿತು.
ಜೊತೆಗೆ ನೂತನ ಯತಿವರ್ಯರಾಗಿ ಸಚ್ಚಿದಾನಂದ ಭಾರತೀ ಶ್ರೀಗಳ ಪೀಠಾರೋಹಣ ಕಾರ್ಯಕ್ರಮವು ಅ.1 ರಂದು ಶ್ರೀಮಠದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದರ ಪೂರ್ವಭಾವಿಯಾಗಿ ಅ.19 ರಿಂದ ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಒಂದಾದ ಅಡೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ದಿಂದ ಆರಂಭಗೊಳ್ಳುವ ಪುಣ್ಯ ಕ್ಷೇತ್ರಗಳ ಸಂದರ್ಶನವು ಕುಂಬಳೆ ಸೀಮೆಯ ಎಲ್ಲಾ ದೇವಾಲಯಗಳಿಗೂ ಭೇಟಿ ನೀಡಿ ಹೊರನಾಡು, ಹೊರ ರಾಜ್ಯಗಳನ್ನು ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ ಕಾಂಚಿ ಕಾಮಕೋಟಿ ಜಗದ್ಗುರು ಪೀಠದಲ್ಲಿ ಸಂಪನ್ನಗೊಳ್ಳಲಿದೆ. ಸೆ.28 ರಂದು ಕಾಂಚಿಕಾಮಕೋಟಿ ಜಗದ್ಗುರುಗಳಾದ ಶ್ರೀವಿಜಯೇಂದ್ರ ಸರಸ್ವತೀ ಶ್ರೀಗಳಿಂದ ಅಧಿಕೃತವಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಿ ಮರಳುವ ಸಚ್ಚಿದಾನಂದ ತೀರ್ಥರ ಪುರಪ್ರವೇಶ ಹಾಗೂ ಪೀಠಾರೋಹಣ ಕಾರ್ಯಕ್ರಮ ಅ.1 ರಂದು ನಡೆಸಲು ತೀರ್ಮಾನಿಸಲಾಯಿತು.
ಆರಾಧನೆ ಹಾಗೂ ಪೀಠಾರೋಹಣ ಕಾರ್ಯಕ್ರಮಗಳ ನಿರ್ವಹಣೆಗೆ ವಿವಿಧ ಸಮಿತಿಗಳನ್ನು ಈ ಸಂದರ್ಭ ರಚಿಸಲಾಯಿತು. ಮಂಗಳವಾರ ಟಿ. ಶಾಮ ಭಟ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಮಠಾಧಿಪತಿಗಳಾಗಿ ಪೀಠಾರೋಹಣಗೈಯ್ಯಲಿರುವ ಶ್ರೀಸಚ್ಚಿದಾನಂದ ಭಾರತೀ, ಮಲ್ಲ ಶ್ರೀಕ್ಷೇತ್ರದ ಮೊಕ್ತೇಸರ ಆನೆಮಜಲು ವಿಷ್ಣು ಭಟ್, ಡಾ.ಬಿ.ಎಸ್.ರಾವ್, ವಿದ್ವಾನ್.ಪಂಜ ಭಾಸ್ಕರ ಭಟ್, ಪ್ರಕಾಶ್ ರೆಡ್ಡಿ ಬೆಂಗಳೂರು ಮೊದಲಾದವರು ಉಪಸ್ಥಿತರಿದ್ದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹಾಗೂ ಸೂರ್ಯನಾರಾಯಣ ಎಡನೀರು ಸ್ವಾಗತಿಸಿ ಸಭೆ ನಿರ್ವಹಿಸಿದರು. ರಾಜೇಂದ್ರ ಕಲ್ಲೂರಾಯ ವಂದಿಸಿದರು.