ಕಾಸರಗೋಡು: ಸ್ವಂತ ಸಂಸ್ಥೆಯೊಂದರಲ್ಲಿ ಕೆಲಸ ನಡೆಸುತ್ತಿದ್ದ ಯುವಕನೊಂದಿಗೆ ಗೃಹಿಣಿ ಪರಾರಿಯಾಗಿರುವುದಾಗಿ ವಾಟ್ಸಪ್ ಮೂಲಕ ಸುಳ್ಳು ಪ್ರಚಾರ ನಡೆಸಿದವರ ವಿರುದ್ಧ ಕೊನೆಗೂ ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಹೊಸದುರ್ಗ ನ್ಯಾಯಾಲಯದ ನಿರ್ದೇಶಾನುಸಾರ ಈ ಕೇಸು ದಾಖಲಾಗಿದೆ.
ಕಾಸರಗೋಡು ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ. ಚೆಮ್ಮಟ್ಟಂವಯಲಿನಲ್ಲಿ ಅಕ್ಷಯ ಕೇಂದ್ರ ನಡೆಸುತ್ತಿರುವ ಕಾಸರಗೋಡು ನಿವಾಸಿ ಹೇಮಲತಾ ಎಂಬವರ ಪುತ್ರನ ವಾಟ್ಸಪ್ ಗ್ರೂಪಿಗೆ 'ಹೇಮಲತಾ ತನ್ನದೇ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಯುವಕನೊಂದಿಗೆ ಪರಾರಿ'ಎಂಬುದಾಗಿ ಫೋಟೋ ಸಹಿತ ಸಂದೇಶ ಲಭಿಸಿತ್ತು. ಇದರಿಂದ ಕಂಗೆಟ್ಟ ಮಹಿಳೆ ಬೇಕಲ ಠಾಣೆಗೆ ದೂರು ನೀಡಿದರೂ, ಕೆಲವೊಂದು ಕಾರಣ ನೀಡಿ ಕೇಸು ದಾಖಲಿಸಲು ಹಿಂದೇಟು ಹಾಕಿದ್ದರು.
ಹೇಮಲತಾ ದುಡಿಯುತ್ತಿದ್ದ ಸಂಸ್ಥೆಯಲ್ಲಿ ಕೆಲಸ ನಡೆಸುತ್ತಿದ್ದ 24ರ ಹರೆಯದ ಯುವಕನಿಗೆ ಬೇರೆ ಉದ್ಯೋಗ ಲಭಿಸಿದ ಹಿನ್ನೆಲೆಯಲ್ಲಿ ಫೆಬ್ರವರಿ ತಿಂಗಳಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದ ಫೋಟೋ ಬಳಸಿ, 'ಗೃಹಿಣಿ ಯುವಕನೊಂದಿಗೆ ಪರಾರಿ'ಎಂಬ ತಲೆಬರಹದೊಂದಿಗೆ ವಾಟ್ಸಪ್ ಪ್ರಚಾರ ನಡೆಸಲಾಗಿತ್ತು. ಹೇಮಲತಾ ಅವರ ಪುತ್ರನ ಮೊಬೈಲ್ಗೇ ಈ ಸಂದೇಶ ಲಭಿಸಿದಾಗ ಕಂಗಾಲಾಗಿ ವಾರದ ಹಿಂದೆ ಬೇಕಲ ಠಾಣೆಗೆ ದೂರು ನೀಡಿದ್ದರು. ಈ ಮಧ್ಯೆ ಸಂದೇಶ ಕಳುಹಿಸಿದ ಯುವಕನನ್ನು ಪತ್ತೆಹಚ್ಚಿ ಠಾಣೆಗೆ ಕರೆಸಿದ ಮಹಿಳೆ ಕ್ಷಮೆ ಯಾಚಿಸುವಂತೆ ಮಾಡಿದ್ದಾರೆ. ಆದರೆ ಪೊಲೀಸರು ಕೇಸು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಮಹಿಳೆ ನ್ಯಾಯಾಲಯದ ಮೆಟ್ಟಿಲೇರಿದ್ದರು.