ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯಲ್ಲಿ ಜನಪರ ಅಭಿವೃದ್ಧಿ ವಿಜ್ಞಾನೋತ್ಸವ ಕಾರ್ಯಕ್ರಮವು ಏತಡ್ಕ ಸಮಾಜ ಮಂದಿರದಲ್ಲಿ ಶುಕ್ರವಾರ ಜರಗಿತು. ಕಾಸರಗೋಡು ತಾಲೂಕು ಗ್ರಂಥಾಲಯ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯ ಸಜೇಶ್ ಕೆ.ವಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಗತಿ ನಡೆಸಿದರು.
1996 ರಿಂದ ಇದುವರೆಗೆ 25 ವರ್ಷಗಳಲ್ಲಿ ಕೇರಳದಲ್ಲಿ ನಡೆದು ಬಂದ ಜನಪರ ಯೋಜನೆಗಳನ್ನು ವಿವರವಾಗಿ ಮಂಡಿಸಿದರು.ಕೇರಳದ ಇತಿಹಾಸ, ಭಾಷಾವಾರು ಪ್ರಾಂತ್ಯ ರಚನೆ, ಅಧಿಕಾರ ವಿಕೇಂದ್ರೀಕರಣ, ಸಾಕ್ಷರತೆ ಮೊದಲಾದ ವಿಷಯಗಳ ಕುರಿತು ಮಾತನಾಡಿದರು. ಮುಂಗಡಪತ್ರದಲ್ಲಿ ಶೇ.40 ರಷ್ಟು ಹಣವನ್ನು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮೀಸಲಾಗಿರಿಸುವುದನ್ನು ಉದಾಹರಿಸಿದರು. ಬಳಿಕ ಸಂವಾದ ನಡೆದು ಪಾಲ್ಗೊಂಡವರ ಸಂಶಯಗಳನ್ನು ಪರಿಹರಿಸಿದರು.
ಗ್ರಾ.ಪಂ. ಸದಸ್ಯ ಕೃಷ್ಣ ಶರ್ಮ ಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಗ್ರಂಥಾಲಯದ ಅಧ್ಯಕ್ಷ ಕೆ. ನರಸಿಂಹ ಭಟ್ ಮಾತನಾಡಿ ವಿವಿಧ ಕಾರ್ಯಕ್ರಮಗಳ ವಿವರ ನೀಡಿದರು. ಕಾರ್ಯದರ್ಶಿ ಡಾ. ವೇಣುಗೋಪಾಲ್ ಕಳೆಯತ್ತೋಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಏತಡ್ಕ ವಂದಿಸಿದರು.