ಬದಿಯಡ್ಕ: ಸಾಮಾಜಿಕ ಜಾಲತಾಣದ ಮೂಲಕ ಇಂದು ಹಲವರ ಬದುಕಿಗೆ ಬೆಳಕನ್ನು ನೀಡಲು ಪ್ರಯತ್ನಿಸುತ್ತಿರುವುದು ನೀರ್ಚಾಲು ಆಸುಪಾಸಿನಲ್ಲಿ ಕಾರ್ಯಾಚರಿಸುತ್ತಿರುವ ಸೇವಾಭಾರತಿ ವಾಟ್ಸಾಪ್ ಗ್ರೂಪ್. ಈ ನಿಟ್ಟಿನಲ್ಲಿ ಬೇಳ ವಿಷ್ಣುಮೂರ್ತಿ ನಗರದ ಲಕ್ಷ್ಮಿ ಶೆಟ್ಟಿ ಮತ್ತು ಅವರ ಇಬ್ಬರು ಸಹೋದರಿಯರು ಮಾತ್ರವಿರುವ ಕುಟುಂಬದ ಸಂಕಷ್ಟದ ಕುರಿತು ಸೇವಾಭಾರತಿ ನೀರ್ಚಾಲು ಘಟಕ ವಿವಿಧ ಸಮೂಹ ಮಾಧ್ಯಮದಲ್ಲಿ ಸುದ್ದಿಯನ್ನು ಪ್ರಸಾರ ಮಾಡಿತ್ತು. ಸೇವಾಭಾರತಿಯ ಕಾರ್ಯಕರ್ತರು ಕುಟುಂಬದ ಅಸೌಖ್ಯದಲ್ಲಿರುವ ಯುವತಿಗೆ ಶುಶ್ರೂಷೆಯನ್ನು ನೀಡಿ, ಸರಕಾರದಿಂದ ಲಭಿಸುವ ಸೌಲಭ್ಯಗಳನ್ನು ತೆಗೆಸಿಕೊಡಲು ಮುತುವರ್ಜಿ ವಹಿಸಿದ್ದಾರೆ. ಅದೇ ರೀತಿ ಪ್ರಸ್ತುತ ಕುಟುಂಬದ ಆರ್ಥಿಕ ಸಂಕಷ್ಟವನ್ನು ಪರಿಹರಿಸಲು ಹಲವರಿಂದ ಸಹಾಯವನ್ನು ಪಡೆದು ಸೇವಾಭಾರತಿಯು ವಸ್ತು ರೂಪ ಹಾಗೂ ಆರ್ಥಿಕ ಸಹಾಯವನ್ನು ಇತ್ತೀಚೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್, ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ, ಮಾಜಿ ಸದಸ್ಯೆ ಪ್ರೇಮ, ಸೇವಾಭಾರತಿಯ ಕಾರ್ಯಕರ್ತರಾದ ರಮೇಶ್ ಕಳೇರಿ, ಸದಾಶಿವ ಮಾಸ್ತರ್, ಪ್ರದೀಪ್ ಮಾಸ್ತರ್, ಗಣೇಶ್ ರೈ ಉಪಸ್ಥಿತರಿದ್ದರು.