ನವದೆಹಲಿ: ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣಗಳಲ್ಲಿ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮ ಹಾಗೂ ಓಟಿಟಿಗಳಿಗೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗದರ್ಶಿ ಸಂಪೂರ್ಣವಾಗಿ ಜಾರಿಗೆ ಬಂದರೆ ವಾಟ್ಸ್ಆಯಪ್, ಟೆಲಿಗ್ರಾಂ ಸೇರಿ ಅನೇಕ ಆಯಪ್ಗಳಿಗೆ ಹೊಡೆತ ಬೀಳಲಿದೆ ಎನ್ನಲಾಗಿದೆ.
ಒಂದು ವೇಳೆ ಯಾವುದೇ ಸಂದೇಶ ಭಾರತದ ಮೂಲದ್ದಲ್ಲದೇ ಬೇರೆ ದೇಶದಿಂದ ಭಾರತೀಯರಿಗೆ ಬಂದ್ದಿದ್ದರೆ, ಆ ಸಂದೇಶ ಯಾವ ಭಾರತೀಯನಿಗೆ ಮೊದಲು ಬಂದಿದೆ ಎನ್ನುವ ಮಾಹಿತಿಯನ್ನು ಆಯಪ್ಗಳು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದ ಸಮಗ್ರತೆ, ರಕ್ಷಣೆಯ ದೃಷ್ಟಿಯಿಂದ ಇದು ಅವಶ್ಯಕ ಎಂದು ತಿಳಿಸಲಾಗಿದೆ. ಆದರೆ ವಾಟ್ಸ್ಆಯಪ್ ಸಂಸ್ಥೆಯು ಈ ಹಿಂದೆಯೇ ಇಂತಹ ಬೇಡಿಕೆಯನ್ನು ನಿರಾಕರಿಸಿತ್ತು. ನಮ್ಮ ಗ್ರಾಹಜಕರಿಗೆ ನಾವು ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಸರ್ವೀಸ್ ಕೊಡುತ್ತಿದ್ದೇವೆ. ಹಾಗಿದ್ದ ಮೇಲೆ ಯಾರು ಸಂದೇಶ ಕಳುಹಿಸಿದ್ದಾರೆ ಅಥವಾ ಯಾರಿಗೆ ಸಂದೇಶ ಹೋಗಿದೆ ಎನ್ನುವ ಮಾಹಿತಿ ನೀಡಿದರೆ ನಮ್ಮ ಸಂಸ್ಥೆಯ ಪಾಲಿಸಿಗೆ ನಾವು ಮೋಸ ಮಾಡಿದಂತಾಗುತ್ತದೆ ಎಂದು ವಾಟ್ಸ್ಆಯಪ್ ಹೇಳಿತ್ತು.
ಹಾಗಿದ್ದರೂ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ತಾವು ಯಾವುದೇ ಆಯಪ್ನ ಎಂಡ್ ಟು ಎಂಡ್ ಎನ್ಕ್ರಿಪ್ಷನ್ಗೆ ತೊಂದರೆಯನ್ನುಂಟು ಮಾಡಲು ಬಯಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಾವು ಸಂದೇಶ ಯಾವುದೆಂದು ಕೇಳುತ್ತಿಲ್ಲ ಬದಲಾಗಿ ಆ ರೀತಿಯ ಸಂದೇಶ ಯಾರಿಗೆ ಬಂದಿದೆ ಎನ್ನುವುದನ್ನು ಮಾತ್ರವೇ ಕೇಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಇದೀಗ ಮಾಡಲಾಗಿರುವ ಮಾರ್ಗಸೂಚಿಗಳಿಗೆ ವಾಟ್ಸ್ಆಯಪ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು.



