ಮಂಜೇಶ್ವರ: ಈ ಶೈಕ್ಷಣಿಕ ವರ್ಷದಲ್ಲಿ ಕೊರೋನ ಮಹಾಮಾರಿಯಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಆದ ಬದಲಾವಣೆ ಮಕ್ಕಳಿಗೆಲ್ಲಾ ಒಂದು ವಿಶಿಷ್ಟ ಅನುಭವವನ್ನು ತಂದುಕೊಟ್ಟಿದೆ. ಸರ್ಕಾರವು ಆನ್ ಲೈನ್ ತರಗತಿಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದರೂ, ಕೊರೋನ ಸಂದಿಗ್ಧತೆಯಲ್ಲಿ ಈ ಆನ್ ಲೈನ್ ಶಿಕ್ಷಣ ಅನಿವಾರ್ಯವಾಯಿತು. ಶಾಲೆಯು ಮಕ್ಕಳಿಲ್ಲದೆ ಹತ್ತು ಹಲವು ಶಾಲಾ ಕಾರ್ಯಕ್ರಮಗಳಿಂದ ವಂಚಿತವಾಯಿತು. ಎಲ್ಲಾ ಚಟುವಟಿಕೆಗಳು ಆನ್ ಲೈನ್ ಮೂಲಕ ನಡೆಯುತ್ತಿರುವ ಈ ಸಂದರ್ಭದಲ್ಲಿ ಕುಳೂರು ಶಾಲೆ ಆನ್ ಲೈನ್ ಶಾಲಾ ವಾರ್ಷಿಕೋತ್ಸವ ನಡೆಸಿ ಎಲ್ಲರ ಗಮನ ಸೆಳೆಯುತ್ತಿದೆ.
ಮಂಜೇಶ್ವರದ ಕುಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷ ಆನ್ ಲೈನ್ ಶಾಲಾ ವಾರ್ಷಿಕೋತ್ಸವವನ್ನು ಮಾಡಿ ಗಮನ ಸೆಳೆದಿರುವರು. ಪ್ರತಿ ವರ್ಷ ಶಾಲಾ ರಕ್ಷಕ-ಶಿಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘ ಹಾಗೂ ಊರವರ ಸಹಕಾರದಿಂದ ನಡೆಯುತ್ತಿದ್ದ ಶಾಲಾ ವಾರ್ಷಿಕೋತ್ಸವವು ಈ ವರ್ಷವೂ ಸರ್ಕಾರದ ಕೋವಿಡ್ ನಿಯಂತ್ರಣಾ ಮಾನದಂಡಗಳನ್ನು ಪಾಲಿಸಿಕೊಂಡು ನಡೆದಿರುವುದು ವಿಶೇಷವಾಗಿದೆ.
ಪ್ರಪ್ರಥಮವಾಗಿ ನಡೆದ ಈ ಆನ್ ಲೈನ್ ಶಾಲಾ ವಾರ್ಷಿಕೋತ್ಸವವನ್ನು ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಕಮಲಾಕ್ಷಿ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ ಎಂ. ಎಲ್, ಮೀಂಜ ಗ್ರಾಮ ಪಂಚಾಯಿತಿ ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಸರಸ್ವತಿ ಕೆ, ಕುಳೂರು ವಾರ್ಡ್ ಸದಸ್ಯ ಜನಾರ್ಧನ ಪೂಜಾರಿ, ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಮಂಜೇಶ್ವರ ಬಿ. ಆರ್. ಸಿ ಯ ಬ್ಲಾಕ್ ಕಾರ್ಯನಿರ್ವಹಣಾಧಿಕಾರಿ ಆದರ್ಶ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಕಂಚಿಲ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ, ಮಾತೃ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಎಲಿಯಾಣ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯ ಪಿ ವಂದಿಸಿದರು. ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು. ಈ ಎಲ್ಲಾ ಕಾರ್ಯಕ್ರಮಗಳು 'ನಮ್ಮ ಕುಳೂರು' ಎಂಬ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರವಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.