ನವದೆಹಲಿ: ಪೂರ್ವ ಲಡಾಖ್ನಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪುನಃಸ್ಥಾಪಿಸಲು ಚೀನಾದೊಂದಿಗೆ ಚರ್ಚೆಯನ್ನು ಮುಂದುವರಿಸುವುದಾಗಿ ಭಾರತ ಬುಧವಾರ ಹೇಳಿದೆ.
ಗಾಲ್ವಾನ್ ಘರ್ಷಣೆಯಲ್ಲಿ ಚೀನಾ ತಮ್ಮ ಕಮಾಂಡೋಗಳ ಮೃತಪಟ್ಟಿರುವುದಾಗಿ ಒಪ್ಪಿಕೊಂಡಿದೆಯೇ ಎಂಬ ಪ್ರಶ್ನೆಗೆ ಲೋಕಸಭೆಯಲ್ಲಿ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ವಿ ಮುರಲೀಧರನ್, ಚೀನೀ ಸೈನಿಕರಿಗೆ ಚೀನಾದ ಕೇಂದ್ರ ಮಿಲಿಟರಿ ಆಯೋಗವು ಮರಣೋತ್ತರವಾಗಿ ಗೌರವ ಪ್ರಶಸ್ತಿಗಳು ಮತ್ತು ಅರ್ಹತಾ ಪತ್ರವನ್ನು ನೀಡುವುದಾಗಿ ಫೆಬ್ರವರಿ 19ರಂದು ಘೋಷಿಸಿದೆ ಎಂದರು.
ಘೋಷಣೆಯ ಪ್ರಕಾರ, ಜೂನ್ 2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಮುಖಾಮುಖಿ ಘರ್ಷಣೆಯಲ್ಲಿ ಭಾಗಿಯಾಗಿದ್ದ ಸೈನಿಕರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಗಾಲ್ವಾನ್ ಘರ್ಷಣೆಯ ಭೀಕರ ಕಾಳಗದಲ್ಲಿ ಇಪ್ಪತ್ತು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಘಟನೆಯು ದಶಕಗಳಲ್ಲಿ ಉಭಯ ತಂಡಗಳ ನಡುವಿನ ಅತ್ಯಂತ ಗಂಭೀರವಾದ ಮಿಲಿಟರಿ ಘರ್ಷಣೆ ಎಂದೇ ಗುರುತಿಸಲಾಗಿದೆ.
ಭಾರತೀಯ ಸೇನೆಯೊಂದಿಗಿನ ಘರ್ಷಣೆಯಲ್ಲಿ ಐದು ಚೀನಾದ ಮಿಲಿಟರಿ ಅಧಿಕಾರಿಗಳು ಮತ್ತು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ.
"ಪೂರ್ವ ಲಡಾಖ್ನ ಎಲ್ಎಸಿಯ ಉದ್ದಕ್ಕೂ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಎಲ್ಲಾ ಘರ್ಷಣೆ ಕೇಂದ್ರಗಳಿಂದ ಸೇನೆಯನ್ನು ವಿಮುಖಗೊಳಿಸುವುದರ ಜೊತೆಗೆ ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪುನಃಸ್ಥಾಪಿಸುವ ಉದ್ದೇಶದಿಂದ ಚೀನಾದೊಂದಿಗೆ ಸರ್ಕಾರ ಚರ್ಚೆಯನ್ನು ಮುಂದುವರಿಸಲಿದೆ ಎಂದು ಮುರಲೀಧರನ್ ಹೇಳಿದರು.
ಸರಣಿ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಯ ಪರಿಣಾಮವಾಗಿ, ಉಭಯ ಪಕ್ಷಗಳು ಪ್ಯಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ.