HEALTH TIPS

ನಾಯಕರಿಂದ ಕಿರುಕುಳ: ಕಣದಿಂದ ಹಿಂದೆ ಸರಿದ ಕೇರಳದ ಮೊದಲ ತೃತೀಯಲಿಂಗಿ ಅಭ್ಯರ್ಥಿ!

           ಮಲಪ್ಪುರಂ : ಕೇರಳ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅನನ್ಯಾ ಕುಮಾರ್ ಅಲೆಕ್ಸ್, ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ತಮ್ಮನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದ ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಾರ್ಟಿಯ (ಡಿಎಸ್‌ಜೆಪಿ) ನಾಯಕರಿಂದ ಮಾನಸಿಕ ಹಿಂಸೆ ಮತ್ತು ಜೀವ ಬೆದರಿಕೆಗಳು ಬಂದಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅನನ್ಯಾ ತಿಳಿಸಿದ್ದಾರೆ.


            ಚುನಾವಣೆ ನಡೆಯಲು ಇನ್ನು ಮೂರು ದಿನ ಮಾತ್ರ ಬಾಕಿ ಇದ್ದು, ನಾಮಪತ್ರ ವಾಪಸ್ ತೆಗೆದುಕೊಳ್ಳುವ ದಿನ ಕೂಡ ಮುಗಿದುಹೋಗಿದೆ. ಹೀಗಾಗಿ 28 ವರ್ಷದ ಅನನ್ಯಾ ತಮ್ಮ ಚುನಾವಣಾ ಪ್ರಚಾರವನ್ನು ತಕ್ಷಣವೇ ಮೊಟಕುಗೊಳಿಸಲು ನಿರ್ಧರಿಸಿದ್ದಾರೆ.

          ಅನನ್ಯಾ ಅವರನ್ನು ಮಲಪ್ಪುರಂ ಜಿಲ್ಲೆಯ ವೆಂಗಾರಾ ವಿಧಾನಸಭೆ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಡಿಎಸ್‌ಜೆಪಿ ಆಯ್ಕೆ ಮಾಡಿತ್ತು. ಯುಡಿಎಫ್ ಒಕ್ಕೂಟದ ಪ್ರತಿನಿಧಿ ಯೂನಿಯನ್ ಮುಸ್ಲಿಂ ಲೀಗ್ ಅಭ್ಯರ್ಥಿ ಪಿ.ಕೆ. ಕುನ್ಹಾಲಿಕುಟ್ಟಿ ಮತ್ತು ಎಲ್‌ಡಿಎಫ್ ಪ್ರತಿನಿಧಿಯಾಗಿರುವ ಸಿಪಿಎಂ ಅಭ್ಯರ್ಥಿ ಪಿ. ಜಿಜಿ ವಿರುದ್ಧ ಅವರು ಕಣಕ್ಕಿಳಿದಿದ್ದರು.

        'ಪಿಕೆ ಕುನ್ಹಾಲಿಕುಟ್ಟಿ ಮತ್ತು ಎಲ್‌ಡಿಎಪ್ ಸರ್ಕಾರದ ವಿರುದ್ಧ ಕೀಳುಮಟ್ಟದಲ್ಲಿ ಟೀಕೆಗಳನ್ನು ಮಾಡುವಂತೆ ಡಿಎಸ್‌ಪಿಜೆ ನಾಯಕರು ನನ್ನ ಮೇಲೆ ಒತ್ತಡ ಹೇರಿದ್ದರು. ಎಲ್ಲದೆ ಚುನಾವಣೆ ಪ್ರಚಾರದ ವೇಳೆ ಮುಖ ಮುಚ್ಚಿಕೊಳ್ಳುವ ಪರ್ದಾ ಪದ್ಧತಿ ಅನುಸರಿಸುವಂತೆಯೂ ಒತ್ತಡ ಹೇರಿದ್ದರು. ನಾನು ನನ್ನ ವ್ಯಕ್ತಿತ್ವವನ್ನು ಬಿಟ್ಟುಕೊಡುವುದಿಲ್ಲ ಎಂದು ನಾನು ಖಡಾಖಂಡಿತವಾಗಿ ಹೇಳಿದ ಬಳಿಕ ನನಗೆ ಕಿರುಕುಳ ನೀಡಲಾಯಿತು' ಎಂದು ಅವರು ಆರೋಪಿಸಿದ್ದಾರೆ.

       'ಡಿಎಸ್‌ಜೆಪಿ ನಾಯಕರು ನನ್ನನ್ನು ಬಳಸಿಕೊಂಡಿದ್ದಾರೆ. ನನ್ನನ್ನು ಮುಂದಿರಿಸಿಕೊಳ್ಳುವುದರ ಹಿಂದೆ ಅವರಲ್ಲಿ ಬೇರೆಯೇ ಯೋಜನೆ ಮತ್ತು ಕಾರಣಗಳಿದ್ದವು. ಆದರೆ ನನಗೆ ಆರಂಭದಲ್ಲಿ ಅದು ಅರ್ಥವಾಗಿರಲಿಲ್ಲ. ಕೇರಳದಲ್ಲಿನ ತೃತೀಯಲಿಂಗಿ ಜನರನ್ನು ಪ್ರತಿನಿಧಿಸಲು ಮತ್ತು ಅವರಿಗೆ ಸಮಾನತೆ ಕಲ್ಪಿಸುವ ಉದ್ದೇಶದಿಂದ ನಾನು ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೆ. ಆದರೆ ವೆಂಗಾರಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ನನಗೆ ಪಕ್ಷವು ಸೂಚನೆ ನೀಡಿತ್ತು. ಅದು ಕೂಡ ನನ್ನ ನಿರ್ಧಾರವಾಗಿರಲಿಲ್ಲ' ಎಂದು ತಿಳಿಸಿದ್ದಾರೆ.

       'ನನಗೆ ನನ್ನದೇ ಆದ ಅಭಿಪ್ರಾಯ, ಚಿಂತನೆಗಳಿವೆ. ಅವರಿಗಾಗಿ ಅವುಗಳನ್ನು ಬಲಿಕೊಡಲು ನಾನು ತಯಾರಿಲ್ಲ. ಅವರನ್ನು ವಿರೋಧಿಸಿದ ಕಾರಣಕ್ಕೆ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ನನ್ನನ್ನು ವೇಶ್ಯೆಯಂತೆ ಬಿಂಬಿಸಿ ಅವಮಾನಿಸಿದ್ದಾರೆ' ಎಂದು ಅನನ್ಯಾ ಆರೋಪಿಸಿದ್ದಾರೆ.

        ಕೇರಳದ ಕೊಲ್ಲಂ ಜಿಲ್ಲೆಯ ಪೆರುಮಾನ್‌ನ ಮೂಲದವರಾದ ಅನನ್ಯಾ, ಕೇರಳದ ಮೊದಲ ರೇಡಿಯೋ ಜಾಕಿ ಎಂದು ಹೆಸರಾಗಿದ್ದಾರೆ. ಜತೆಗೆ ವೃತ್ತಿಪರ ಮೇಕಪ್ ಕಲಾವಿದೆ ಹಾಗೂ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಸುದ್ದಿ ನಿರೂಪಕಿ ಕೂಡ ಆಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries