ನವದೆಹಲಿ: ಸೋಂಕಿಗಿಂತ ಕೋವಿಡ್ ಕೇರ್ ಕೇಂದ್ರಗಳ ಅವ್ಯವಸ್ಥೆಯೇ ಕೆಲವೊಮ್ಮೆ ಭಯ ಹುಟ್ಟಿಸುತ್ತವೆ.
ಹೌದು, ಭಾರತದಲ್ಲಿ ಪ್ರತಿನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ, ಕೊರೊನಾ ಎರಡನೇ ಅಲೆ ಸಾಮಾನ್ಯವಾಗಿಲ್ಲ, ತೀವ್ರ ಮಟ್ಟಕ್ಕೆ ರೋಗಿಗಳನ್ನು ಕೊಂಡೊಯ್ಯುತ್ತಿದೆ.
ನಿತ್ಯ ಲಕ್ಷಾಂತರ ರೋಗಿಗಳು ಸೋಂಕಿಗೆ ತುತ್ತಾಗುತ್ತಿದ್ದಾರೆ, ಬಹುತೇಕ ಮಂದಿಯಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದ್ದು, ಆಮ್ಲಜನಕ, ಆಸ್ಪತ್ರೆಯ ಹಾಸಿಗೆ, ಐಸಿಯುಗಾಗಿ ಜನರು ಪರಿತಪಿಸುವಂತಾಗಿದೆ.
ಯಾರು ಎಷ್ಟೇ ಶ್ರೀಮಂತರಾಗಿದ್ದರೂ ಎಷ್ಟೇ ಹಣವಿದ್ದರೂ ಪ್ರಯೋಜನವಿಲ್ಲ, ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗುತ್ತಿಲ್ಲ. ಇನ್ನು ಕೋವಿಡ್ ಕೇಂದ್ರಗಳ ಪರಿಸ್ಥಿತಿ ಕೂಡ ಸಮಸ್ಯೆಯ ಆಗರವಾಗಿದೆ.
ಕೋವಿಡ್ ಕೇರ್ ಕೇಂದ್ರದಲ್ಲಿ ಒಂದೇ ರೂಮಿನಲ್ಲಿ ಎಂಟರಿಂದ ಹತ್ತು ಜನರನ್ನು ಮಲಗಿಸುತ್ತಿರುವುದು, ಬಿಸಿನೀರಿನ ವ್ಯವಸ್ಥೆ ಇಲ್ಲ, ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆ ಇಲ್ಲದಿರುವ ಹಲವು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಹಾಗೆಯೇ ಟ್ವಿಟ್ಟರ್ನಲ್ಲಿ ಇಬ್ರಾಹಿಂ ಎಂಬುವವರು ವಿಡಿಯೋ ಒಂದನ್ನು ಪೋಸ್ಟ್ ಮಾಡಿ, ಈ ಕೋವಿಡ್ ಕೇಂದ್ರದಲ್ಲಿ ಸೋಂಕಿಗಿಂತ ಈ ಫ್ಯಾನ್ ನೋಡಿಯೇ ಭಯ ಹೆಚ್ಚಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಆ ಕೇಂದ್ರದಲ್ಲಿ ಫ್ಯಾನ್ಗಳು ಈಗಲೋ ಆಗಲೋ ಬೀಳುವಂತಿದೆ, ಇದರ ಜತೆಗೆ ಸಾಕಷ್ಟು ಸಮಸ್ಯೆಗಳು ಇರುವ ಕುರಿತು ಕೊರೊನಾ ಸೋಂಕಿತರೊಬ್ಬರು ಮಾತನಾಡಿರುವುದು ವೈರಲ್ ಆಗಿದೆ.
ದೇಶದ ಹಲವು ಆಸ್ಪತ್ರೆಗಲ್ಲಿ ಒಂದೇ ಹಾಸಿಗೆಯನ್ನು ಇಬ್ಬರು ರೋಗಿಗಳನ್ನು ಮಲಗಿಸಿರುವುದನ್ನು ನೋಡಿದ್ದೇವೆ, ಇನ್ನು ಮೃತಪಟ್ಟ ರೋಗಿಗಳ ಅಂತ್ಯಸಂಸ್ಕಾರವು ಕೂಡ ಸುಲಭದ ಮಾತಲ್ಲ, ಆಂಬ್ಯುಲೆನ್ಸ್ನಲ್ಲಿ ಹೆಣವನ್ನಿಟ್ಟುಕೊಂಡು ನಾಲ್ಕೈದು ಗಂಟೆ ಕ್ಯೂನಲ್ಲಿ ನಿಂತು ಟೋಕನ್ ಪಡೆದು ಬಳಿಕ ಅಂತ್ಯಸಂಸ್ಕಾರ ನಡೆಸುವ ಪರಿಸ್ಥಿತಿಯನ್ನು ಪ್ರತಿಯೊಬ್ಬರು ಎದುರಿಸುತ್ತಿದ್ದಾರೆ.