ಉಪ್ಪಳ: ಮಂಗಳವಾರದಿಂದ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಹೇರಲಾಗುತ್ತದೆ ಎಂಬ ಸುಳ್ಳು ಪ್ರಚಾರದ ಹಿನ್ನೆಲೆಯಲ್ಲಿ ಜನರು ಒಮ್ಮಿಂದೊಮ್ಮೆಗೆ ಪೇಟೆಯಲ್ಲಿ ಮುಗಿಬಿದ್ದು ಖರೀದಿಯಲ್ಲಿ ತೊಡಗಿದ ಘಟನೆ ಸೋಮವಾರ ಉಪ್ಪಳದಲ್ಲಿ ನಡೆದಿದ್ದು ತೀವ್ರ ಕಳವಳಕ್ಕೆ ಕಾರಣವಾಯಿತು.
ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕೇರಳದಲ್ಲಿ ಹೆಚ್ಚಳಗೊಂಡಿರುವ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಮಂಗಳವಾರದಿಂದ ಲಾಕ್ ಡೌನ್ ಸಾಧ್ಯೆ ಎಂಬ ಪ್ರಚಾರಗಳು ಕಳೆದ ಎರಡು ದಿನಗಳಿಂದ ಹರಿದಾಡಿತ್ತು. ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಮಾಂತರ ನಿಯಂತ್ರಣಗಲನ್ನಷ್ಟೇ ಹೇರಲಾಗಿದ್ದು, ಅದನ್ನು ಜನರು ತಪ್ಪಾಗಿ ಅರ್ಥೈಸಿದರೆಂಬ ಸಂಶಯ ಮೂಡಿದೆ.
ಕೈಕಂಬದಿಂದ ಉಪ್ಪಳ ಪೇಟೆವರೆಗಿನ ಹೆದ್ದಾರಿಯಲ್ಲಿ ವಾಹನಗಳು ತೀವ್ರವಾಗಿ ತುಂಬಿ ಸಂಚಾರ ತೊಡಕು ಉಂಟಾಯಿತು. ಅಂಗಡಿಗಳಲ್ಲಿ ಸಾಮಗ್ರಿಗಳನ್ನು ಖರೀದಿಸಲು ಜನರು ಮುಗಿಬಿದ್ದಿರುವುದು ಕಂಡುಬಂತು. ಶನಿವಾರ ಮತ್ತು ಭಾನುವಾರ ಕೋವಿಡ್ ನಿಯಂತ್ರಣಗಳಿದ್ದುದರಿಂದ ಬಹಳಷ್ಟು ಕುಟುಂಬಗಳಲ್ಲಿ ದಿನಸಿ ಸಹಿತ ಅಗತ್ಯ ವಸ್ತುಗಳ ಕೊರತೆ ಇತ್ತೆಂದು ಗ್ರಾಹಕರೊಬ್ಬರು ತಿಳಿಸಿದ್ದಾರೆ. ಮಂಗಳವಾರದಿಂದ ಲಾಕ್ ಡೌನ್ ಹೇರಲ್ಪಡುವುದೆಂಬ ವದಂತಿ ಜನರನ್ನು ಭೀತಿಗೋಲಿಸಿದ್ದು ಈ ಕಾರಣದಿಂದ ದಟ್ಟಣೆ ಹೆಚ್ಚಿತೆನ್ನಲಾಗಿದೆ.
ಅಂಗಡಿ ಮುಗ್ಗಟ್ಟುಗಳ ಎದುರು ಕೋವಿಡ್ ಮಾನದಂಡಗಳನ್ನು ಪಾಲಿಸದೆ ಜನರು ಮುಗಿಬಿದ್ದಿದ್ದರಿಂದ ಸೋಂಕು ಹರಡುವ ವೇಗ ಭಾರೀ ಆತಂಕಕ್ಕೆ ಕಾರಣವಾಗಿದ್ದು, ಮುಂದಿನ ಕೆಲವು ದಿನಗಳು ಉಪ್ಪಳದ ಮಟ್ಟಿಗೆ ನಿರ್ಣಾಯಕವಾಗಿದೆ.





