ಕಾಸರಗೋಡು: ಸಾಮಾಜಿಕ ಬದಲಾವಣೆ ಆದಂತೆ ಭಾಷೆಯೂ ಪರಿವರ್ತನೆಗೊಳ್ಳುತ್ತದೆ. ಹೆಚ್ಚು ಚಟುವಟಿಕೆಗಳಿದ್ದಾಗ ಭಾಷೆ ಬದಲಾಗುವುದು ಸಹಜ. ಇದನ್ನು ಸವೆಯುವುದು, ಕೀಳಾಗುವುದು ಎಂದು ತಿಳಿಯಬೇಕಾಗಿಲ್ಲ. ಇದು ಕೇವಲ ಬದಲಾವಣೆ ಅಷ್ಟೇ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ಕೋಡಗುಂಟಿ ಹೇಳಿದರು.
ಅವರು ಇಲ್ಲಿನ ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗು ಕಾಸರಗೋಡು ಕನ್ನಡ ಬಳಗ ವಿದ್ಯಾನಗರ ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಲಾದ ಸ್ಮೃತಿ ದಿನಾಚರಣೆ ಮತ್ತು ಮಾನಸೋಲ್ಲಾಸ ಜಾಲಗೋಷ್ಠಿ ಸರಣಿಯ ಉದ್ಘಾಟನೆ ನಿರ್ವಹಿಸಿ ?ಕನ್ನಡ ಭಾಷೆಯ ಬೆಳವಣಿಗೆ: ಸಾಮಾಜಿಕ ಆಯಾಮ' ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.
ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡ ಎಂದು ನಾಲ್ಕು ಘಟ್ಟಗಳಲ್ಲಿ ಕನ್ನಡದ ಬೆಳವಣಿಗೆಯನ್ನು ಹೊಂದಿಸುವ ಕ್ರಮವೂ ಅನುಮಾನಾಸ್ಪದವಾಗಿದೆ. ಇಂತಹ ನಾಲ್ಕು ಘಟ್ಟಗಳು ಇಲ್ಲ. ಹಳಗನ್ನಡದ ಅವಧಿ ಕೇವಲ ಇನ್ನೂರು ವರ್ಷ ಇದ್ದು, ನಡುಗನ್ನಡ ಅವಧಿ ಆರುನೂರು ವರ್ಷ. ಎರಡನೆಯ ಅವಧಿಯಲ್ಲಿ ಹೆಚ್ಚಿನ ಭಾಷಿಕ ವ್ಯವಹಾರ ನಡೆದಿತ್ತಲ್ಲವೇ ಎಂದು ಅವರು ಪ್ರಶ್ನಿಸಿದರು.
ಭಕ್ತಿ ಎಂಬ ಪದವನ್ನು ಅದೇ ರೀತಿ ಕನ್ನಡದಲ್ಲಿ ಬಳಸಿದರೆ ತತ್ಸಮವಾಗುತ್ತದೆ. ಬಕುತಿ ಎಂದು ಬಳಸಿದರೆ ತದ್ಭವವಾಗುತ್ತದೆ. ಕನ್ನಡ ಭಾಷೆಯು ಪೂರಕವಾದ ಆಯಾಮಗಳಿಂದಲೇ ಬೆಳೆದು ಬಂದಿದೆ. ಈಗ ಹಲವು ಭಾಷೆಗಳೊಂದಿಗೆ ಬೆರೆತುಕೊಂಡಿದೆ. ಆದರೂ ನಾವು ನಮ್ಮ ಭಾಷೆಯ ಬಗೆಗೆ ಹೆಮ್ಮೆಪಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಮೃತಿ ದಿನಾಚರಣೆಯ ಅಂಗವಾಗಿ ಕನ್ನಡ ವಿಭಾಗದಲ್ಲಿ ಸೇವೆ ಸಲ್ಲಿಸಿ ಅಗಲಿದ ಚೇತನಗಳಾದ ಪ್ರೊ. ಸುಬ್ರಾಯ ಭಟ್, ಡಾ. ಬಿ.ಕೆ. ತಿಮ್ಮಪ್ಪ, ಪ್ರೊ. ಬಿ. ಪದ್ಮನಾಭ, ಪ್ರೊ. ವೇಣುಗೋಪಾಲ ಕಾಸರಗೋಡು, ಪ್ರೊ. ದಿನೇಶ್ ಕುಮಾರ್ ಅವರ ಕುರಿತ ಸ್ಮೃತಿ ಉಪನ್ಯಾಸವನ್ನು ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಶ್ರೀನಾಥ ಎ. ನೆರವೇರಿಸಿ, ಇವರೆಲ್ಲರೂ ಕನ್ನಡ ಸಾಹಿತ್ಯ ಪರವಾದ ಚಟುವಟಿಕೆಗಳನ್ನು ನಡೆಸಿಕೊಂಡು ವಿದ್ಯಾರ್ಥಿಗಳನ್ನೂ ಪೆÇ್ರೀತ್ಸಾಹಿಸುತ್ತಿದ್ದ ವ್ಯಕ್ತಿಗಳಾಗಿದ್ದರು ಎಂಬುದು ಗಮನಾರ್ಹ ವಿಚಾರ ಎಂದು ಅಭಿಪ್ರಾಯಪಟ್ಟರು.
ವಿಭಾಗ ಮುಖ್ಯಸ್ಥೆ ಪ್ರೊ. ಸುಜಾತ ಎಸ್. ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಅಕ್ಷಯ ಪ್ರಾರ್ಥನೆ ಹಾಡಿದರು, ಡಾ. ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ಡಾ.ರಾಧಾಕೃಷ್ಣ ಎನ್.ಬೆಳ್ಳೂರು ವಂದಿಸಿದರು. ಡಾ.ಬಾಲಕೃಷ್ಣ ಬಿ.ಎಂ.ಹೊಸಂಗಡಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.




