ತಿರುವನಂತಪುರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಂ ಅಶ್ರಫ್ ಅವರು ರಾಜ್ಯ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸವೀಕರಿಸುವ ಮೂಲಕ ಸುದ್ದಿಯಾಗಿದ್ದರೆ, ಇದೀಗ ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಕೃತಿಯಲ್ಲಿರುವ ಸಾಲುಗಳನ್ನು ಉದ್ಧರಿಸುವ ಮೂಲಕ ಕನ್ನಡಿಗರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರ ದಂಡಿ ಯಾತ್ರೆಗೆ ಮಂಜೇಶ್ವರ ಗೋವಿಂದ ಪೈ ಅವರು ಊರುಗೋಲು ಕಳುಹಿಸಿಕೊಟ್ಟಿರುವುದನ್ನು ಎ.ಕೆ.ಎಂ ಅಶ್ರಫ್ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಜತೆಗೆ ಗೋವಿಂದ ಪೈ ಅವರ ಪ್ರಸಿದ್ಧ ಸಾಹಿತ್ಯ ಹೆಬ್ಬೆರಳು ಕೃತಿಯ ಕೆಲವೊಂದು ಸಾಲುಗಳನ್ನು ಉಚ್ಛರಿಸುವ ಮೂಲಕ ತಾನೊಬ್ಬ ಅಪ್ಪಟ ಕನ್ನಡಿಗ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅಶ್ರಫ್ ಅವರು ಒಂದನೇ ತರಗತಿಯಿಂದ ಪದವಿ ವರೆಗೂ ನಾನು ಕನ್ನಡದಲ್ಲೇ ವಿದ್ಯಾಭ್ಯಾಸ ನಡೆಸಿದ್ದೇನೆ. ಜತೆಗೆ ತನನ್ನ ಮಕ್ಕಳನ್ನೂ ಕನ್ನಡ ಮಾಧ್ಯಮದಲ್ಲೇ ಕಲಿಸುತ್ತಿದ್ದೇನೆ. ಕನ್ನಡದಲ್ಲಿ ಕಲಿತ ನಾನು ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ ಅಷ್ಟೆ. ಅದೆಷ್ಟೋ ಕನ್ನಡಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದೇನೆ. ವಿಧಾನಸಭೆಯ ಪ್ರಥಮ ಭಾಷಣದಲ್ಲಿ ರಾಷ್ಟ್ರಕವಿಗಳ ಕೃತಿಯ ಸಾಲುಗಳನ್ನು ಉಲ್ಲೇಖಿಸುವ ಮೂಲಕ ಧನ್ಯನಾಗಿದ್ದೇನೆ. ಅವಕಾಶ ಸಿಕ್ಕಾಗಲೆಲ್ಲ ಕುವೆಂಪು, ಡಾ. ಕಯ್ಯಾರ ಕಿಞಣ್ಣ ರೈ ಮುಂತಾದ ಕವಿಗಳ ಕೃತಿಗಳ ಸಾಲುಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ತೀರ್ಮಾನಿಸಿದ್ದೇನೆ. ಕನ್ನಡ ಭಾಷೆ ಮತ್ತು ಕನ್ನಡಿಗರ ಸಮಸ್ಯೆಗಳಿಗೆ ವಿಧಾನಸಭೆಯಲ್ಲಿ ಧ್ವನಿಯೆತ್ತುತ್ತೇನೆ ಎಂಬುದಾಗಿ ಶಾಸಕ ಎ.ಕೆ.ಎಂ ಅಶ್ರಫ್ ಅವರು 'ಸಮರಸ ಸುದ್ದಿಗೆ ತಿಳಿಸಿದ್ದಾರೆ.





