ಕಾಸರಗೋಡು: ಕಲಾವಿದರು ಕೋವಿಡ್ ಅವಧಿಯಲ್ಲಿ ಅನುಭವಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಭಾನುವಾರ ಸಂಜೆ ಕಲಾವಿದರು/ ತತ್ಸಂಬಂಧಿ ವೃತ್ತಿ ನಿರತರ ಒಕ್ಕೂಟವಾದ ಸವಾಕ್(ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಆಫ್ ಕೇರಳ) ವತಿಯಿಂದ ರಾಜ್ಯಾದ್ಯಂತ “ಸಮರ ಭೂಮಿಕ”ಎಂಬ ಹೆಸರಿನಲ್ಲಿ ಧರಣಿ ಜರಗಿತು.
60 ವರ್ಷ ಪ್ರಾಯ ದಾಟಿದ ಕಲಾವಿದರಿಗೆ ಕಲ್ಯಾಣ ಮಂಡಳಿಯ ಪಿಂಚಣಿ ಯೋಜನೆಗೆ ಸೇರುವ ಅವಕಾಶ ನೀಡಬೇಕು, ಕೇಂದ್ರ-ರಾಜ್ಯ ಸರ್ಕಾರಗಳ ಪ್ರತ್ಯೇಕ ಪ್ಯಾಕೇಜ್ ಪ್ರಕಟಿಸಬೇಕು, ಕಲ್ಯಾಣ ಮಂಡಳಿಯ ಪಿಂಚಣಿಯನ್ನು 5000 ರೂ ಗೆ ಏರಿಸಬೇಕು, ಸಂಗೀತ ನಾಟಕ ಅಕಾಡಮಿಯ ಪಿಂಚಣಿ ಸೌಲಭ್ಯದಂತೆಯೇ ಕಲ್ಯಾಣ ಮಂಡಳಿಯ ಪಿಂಚಣಿಯನ್ನು ಏಕೀಕರಣಗೊಳಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿರಿಸಿ ಸವಾಕ್ ಸಂಘಟನೆ ಮಂಜೇಶ್ವರದಿಂದ ತಿರುವನಂತಪುರದ ವರೆಗೆ ಏಕಕಾಲಕ್ಕೆ ಧರಣಿ ನಡೆಸಿತು. ಕಲಾವಿದರು ತಮ್ಮ ತಮ್ಮ ವ್ಯಾಪ್ತಿ ಪ್ರದೇಶಗಳಲ್ಲಿ ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕಲಾಪ್ರಸ್ತುತಿಗಳ ಸಹಿತ ತಮ್ಮ ಧ್ವನಿ ಎತ್ತಿ ಗಮನ ಸೆಳೆದರು.
ಸವಾಕ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ನೂತನ ಬಸ್ ನಿಲ್ದಾಣ ಬಳಿ ಧರಣಿಯನ್ನು ನಡೆಸಲಾಯಿತು. ಜಿಲ್ಲಾ ಸಮಿತಿ ಅಧ್ಯಕ್ಷ, ಕೇರಳ ತುಳು ಅಕಾಡಮಿ ಅಧ್ಯಕ್ಷರೂ ಆದ ಉಮೇಶ್ ಎಂ.ಸಾಲ್ಯಾನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ‘ಕೇಂದ್ರ-ರಾಜ್ಯ ಸರ್ಕಾರಗಳು ಕಲಾವಿದರನ್ನು ಮಾನವೀಯ ದೃಷ್ಟಿಯಿಂದ ಗಮನಿಸಬೇಕು. ಯಕ್ಷಗಾನ ಸಹಿತ ಎಲ್ಲಾ ಕಲೆಗಳನ್ನು ನಂಬಿ ಬದುಕುತ್ತಿರುವವರು ಇಂದು ಕಂಗೆಟ್ಟಿದ್ದಾರೆ. ಇವರನ್ನು ಸರ್ವ ವಿಧ ಬೆಂಬಲ ನೀಡಿ ಪ್ರಧಾನ ವಾಹಿನಿಗೆ ಕರೆ ತರುವ ಯತ್ನಗಳು ತುರ್ತಾಗಿ ನಡೆಯಬೇಕು. ಜಾನಪದ ಕಲಾವಿದರು ಇಂದು ಬಹಳ ಸಂಕಷ್ಟ ಅನುಭವಿಸುತ್ತಿದ್ದು, ಅವರಿಗೆ ತಮ್ಮ ಪ್ರಸ್ತುತಿಗೆ ಅವಕಾಶ ನೀಡುವ ನಿಟ್ಟಿನ ಕೆಲಸಗಳಾಗಬೇಕು ಎಂದು ಒತ್ತಾಯಿಸಿದರು.
ಹಿರಿಯ ಕಲಾವಿದರಾದ ನರಸಿಂಹ ಬಲ್ಲಾಳ್, ವೇಣುಗೋಪಾಲ ಭಟ್, ಎಂ.ನಾ. ಚಂಬಲ್ತಿಮಾರ್, ವಾಸು ಬಾಯಾರ್ ಮೊದಲಾದವರು ಉಪಸ್ಥಿರಿದ್ದರು. ಭಾರತೀ ಬಾಬು ಸ್ವಾಗತಿಸಿ, ದಯಾ ಪಿಲಿಕುಂಜೆ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಗಾನಾಲಾಪನೆ ಜರಗಿತು. ಹಿಮ್ಮೇಳದಲ್ಲಿ ಉಮೇಶ್ ಮಾಸ್ಟರ್ ಪ್ಯೂಷನ್ ಸಾಥ್ ನೀಡಿದರು. ದಿವಾಕರ ಅಶೋಕನಗರ, ಭಾರತೀ ಬಾಬು, ಲೀಲಾಧರ ಆಚಾರ್ಯ ಮೊದಲಾದವರು ಗಾನಾಲಾಪನೆ ನಡೆಸಿದರು.
ಕಾಸಗೋಡು ಜಿಲ್ಲೆಯ ವಿವಿಧೆಡೆ ಸಾವಿರಾರು ಮಂದಿ ವಿಭಿನ್ನ ಶೈಲಿಗಳಿಂದ ಕಲಾಪ್ರಸ್ತುತಿ ಸಹಿತ ಬೇಡಿಕೆ ಮುಂದಿರಿಸಿ ಗಮನ ಸೆಳೆದರು. ಸವಾಕ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸನ್ನಿ ಆಗಸ್ಟಿನ್ ಮತ್ತು ಕೋಶಾಧಿಕಾರಿ ಚಂದ್ರಹಾಸ ಕಯ್ಯಾರು ವಿವಧೆಡೆಗಳ ಕಾರ್ಯಕ್ರಮಗಳಿಗೆ ನೇತೃತ್ವ ನೀಡಿದರು.