HEALTH TIPS

ವರದಕ್ಷಿಣೆ ಪದ್ಧತಿ: ರಾಜಕೀಯ ಚರ್ಚೆ ಹುಟ್ಟು ಹಾಕಿದ ಕೇರಳ ರಾಜ್ಯಪಾಲರ ಉಪವಾಸ

              ತಿರುವನಂತಪುರ: ವರದಕ್ಷಿಣೆ ಪದ್ಧತಿಯ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸಲು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೊನೆಗಾಣಿಸುವ ಉದ್ದೇಶದೊಂದಿಗೆ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಬುಧವಾರ ನಡೆಸಿದ ಉಪವಾಸವು ಕೇರಳದಲ್ಲಿ ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.

           ಆರಿಫ್ ಮೊಹಮ್ಮದ್ ಖಾನ್ ಅವರು ಇಲ್ಲಿನ ರಾಜಭವನದ ತಮ್ಮ ಅಧಿಕೃತ ನಿವಾಸದಲ್ಲಿ ಬುಧವಾರ ಬೆಳಿಗ್ಗೆಯಿಂದ ಒಂದು ದಿನದ ಉಪವಾಸ ಕೈಗೊಂಡರು. ‌‌ಗಾಂಧಿ ಸ್ಮಾರಕ ನಿಧಿ ಮತ್ತಿತರ ಸಂಘಟನೆಗಳ ಸಹಯೋಗದವರು ಕರೆ ನೀಡಿದ್ದ ವರದಕ್ಷಿಣೆ ಪದ್ಧತಿ ವಿರುದ್ಧದ ಸಾಮಾಜಿಕ ಜಾಗೃತಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ ಅವರು ಈ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

            'ರಾಜ್ಯಪಾಲರ ಉಪವಾಸವು, ಕೇರಳದಲ್ಲಿ ವರದಕ್ಷಿಣೆಯಂಥ ಸಾಮಾಜಿಕ ಪಿಡುಗಿನ ವಿರುದ್ಧ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರ್ಕಾರದ ನಿಷ್ಕ್ರಿಯತೆಯನ್ನು ತೋರುತ್ತದೆ' ಎಂದು ವಿರೋಧಪಕ್ಷವಾದ ಕಾಂಗ್ರೆಸ್ ಆರೋಪಿಸಿದೆ.

            ಈ ಕುರಿತು ಪ್ರತಿಕ್ರಿಯಿಸಿರುವ ಕೇರಳದ ಕಾಂಗ್ರೆಸ್‌ ಅಧ್ಯಕ್ಷ ಕೆ. ಸುಧಾಕರ್ ಅವರು, 'ರಾಜ್ಯಪಾಲರಂಥ ಹಿರಿಯರು ಇಂಥ ಸಾಮಾಜಿಕ ಪಿಡುಗಿನ ವಿರುದ್ಧ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಕ್ಕೆ ಕೇರಳ ಇಂದು ಸಾಕ್ಷಿಯಾಗಿದೆ. ರಾಜ್ಯಪಾಲರು ಎತ್ತಿರುವ ಈ ವಿಚಾರವು, ವರದಕ್ಷಿಣೆ ಪಿಡುಗಿನ ವಿರುದ್ಧ ಕ್ರಮ ಕೈಗೊಳ್ಳಲು ಆಡಳಿತಾರೂಢ ಸರ್ಕಾರದ ಕಣ್ಣು ತೆರೆಸುವಂತಾಗಲಿ' ಎಂದು ಹೇಳಿದ್ದಾರೆ.

           'ರಾಜ್ಯಪಾಲರ ಈ ಕ್ರಮವನ್ನು ನಾನು ಸಮರ್ಥಿಸುವುದಿಲ್ಲ. ಆದರೆ, ಹಿಂದೆಂದೂ ಇಂಥ ಕ್ರಮವನ್ನು ಕೈಗೊಳ್ಳದ ರಾಜ್ಯಪಾಲರು ಈ ರೀತಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಸರ್ಕಾರವೇ ಜವಾಬ್ದಾರಿಯಾಗಿದೆ' ಎಂದೂ ಹೇಳಿದ್ದಾರೆ.

         ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಮಾತನಾಡಿ, 'ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಸಂಖ್ಯೆಯ ಹೆಚ್ಚಳವು, ರಾಜ್ಯಪಾಲರ ಈ ನಡೆಗೆ ಕಾರಣವಾಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries