ಕಾಬೂಲ್ (ಅಫ್ಘಾನಿಸ್ತಾನ): ಕಳೆದೆರಡು ದಿನಗಳಿಂದ ಅಫ್ಘಾನಿಸ್ತಾನದಲ್ಲಿ ಭಯಾನಕ ವಾತಾವರಣ ಸೃಷ್ಟಿಯಾಗಿದೆ. ಇಡೀ ದೇಶವನ್ನು ತಾಲಿಬಾನಿಗಳು ವಶಕ್ಕೆ ಪಡೆದ ನಂತರ ಅಲ್ಲಿರುವವರ ಸ್ಥಿತಿ ಅದರಲ್ಲಿಯೂ ಹಿಂದೂಗಳ ಸ್ಥಿತಿ ಹೇಳತೀರದಾಗಿದೆ. ಆದ್ದರಿಂದ ತಮ್ಮ ತಮ್ಮ ದೇಶಗಳ ವಾಸಿಗಳನ್ನು ಕರೆಸಿಕೊಳ್ಳಲು ಕೆಲವು ರಾಷ್ಟ್ರಗಳು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿವೆ.
ಅದೇ ರೀತಿ ಭಾರತೀಯ ರಾಯಭಾರ ಕಚೇರಿ ಕೂಡ ಭಾರತೀಯರನ್ನು ಕರೆಸಿಕೊಳ್ಳುತ್ತಿದೆ. ಇದಾಗಲೇ ಹಲವಾರು ಭಾರತೀಯರು ಅಫ್ಘಾನ್ನಿಂದ ಸುರಕ್ಷಿತವಾಗಿ ತವರು ಸೇರಿದ್ದಾರೆ. ಆದರೆ ಕಾಬುಲ್ನಲ್ಲಿರುವ ಏಕೈಕ ಹಿಂದೂ ಅರ್ಚಕ ರಾಜೇಶ್ ಕುಮಾರ್ ಮಾತ್ರ ದೇವಿಯ ಸನ್ನಿಧಿ ಬಿಟ್ಟು ಬರಲಾರೆ ಎಂದು ಪಟ್ಟುಹಿಡಿದಿದ್ದಾರೆ.ಹೌದು ನಾನು ಹಿಂದೂ. ಹಲವಾರು ವರ್ಷಗಳಿಂದ ರತನ್ನಾಥ್ ದೇವಾಲಯದ ಅರ್ಚಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ತಾಲಿಬಾನಿಗಳು ಬಂದು ನನ್ನನ್ನು ಕೊಂದರೂ ಪರವಾಗಿಲ್ಲ. ದೈವಿಚ್ಛೆ ಎಂದು ದೇವಿಯ ಸನ್ನಿಧಿಯಲ್ಲಿಯೇ ಪ್ರಾಣ ಬಿಡುವೆ, ಇದು ದೇವಿಯ ಸೇವೆ ಎಂದುಕೊಳ್ಳುವೆ. ಆದರೆ ಜೀವ ಇರುವವರೆಗೂ ದೇವಿಯ ಪಾದದ ಬಳಿಯೇ ಇರುವೆ. ಊಟ ನೀಡಿದ ನನ್ನ ದೇಶ ಅಫ್ಘಾನಿಸ್ತಾನ್ ಬಿಟ್ಟು ಬರಲಾರೆ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಕೆಲವು ಹಿಂದೂಗಳು ಕಾಬೂಲ್ ಬಿಟ್ಟು ಹೋಗುವಂತೆ ನನ್ನನ್ನು ಒತ್ತಾಯಿಸಿದ್ದಾರೆ. ನನ್ನ ಪ್ರಯಾಣಕ್ಕೆ ಮತ್ತು ಉಳಿಯಲು ಅವಕಾಶ ಮಾಡಿಕೊಡುವುದಾಗಿ ಹೇಳಿದರು. ಆದರೆ, ನನ್ನ ಪೂರ್ವಜರು ನೂರಾರು ವರ್ಷಗಳಿಂದ ಈ ಮಂದಿರಕ್ಕೆ ಸೇವೆ ಸಲ್ಲಿಸಿದ್ದಾರೆ. ನಾನು ಅದನ್ನು ಕೈಬಿಡುವುದಿಲ್ಲ ಎಂದಿದ್ದಾರೆ.