ಕಾಸರಗೋಡು: ಜನಪರ ಯೋಜನೆಯ 25ನೇ ವರ್ಷಾಚರಣೆ (ಬೆಳ್ಳಿಹಬ್ಬ ಆಚರಣೆ)ಗೆ ಮಂಗಳವಾರ ಚಾಲನೆ ನೀಡಲಾಯಿತು. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವರ್ಷಪೂರ್ತಿ ಈ ಸರಣಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿವೆ.
ಕಾಸರಗೋಡು ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಯೋಜನಾ ಸಮಿತಿ ವತಿಯಿಂದ ಜಿಪಂ ಸಭಾಂಗಣದಲ್ಲಿ ನಡೆದ ಬೆಳ್ಳಿಹಬ್ಬವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಸಮಾರಂಭ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದ ಮಿಯಾವಾಕಿ ಉದ್ಯಾನವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ವೀರ್ಚಂದ್ ಉದ್ಘಾಟಿಸಿದರು.
ಮಾಜಿ ಹಣಕಾಸು ಸಚಿವ ಡಾ.ಟಿ.ಎಂ.ಥಾಮಸ್ ಐಸಾಕ್ ಪ್ರಧಾನ ಭಾಷಣ ಮಾಡಿದರು. ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎ.ಕೆ.ಎಂ.ಅಶ್ರಫ್, ಜಿಪಂ ಉಪಾಧ್ಯಕ್ಷ ಶಾನವಾಜ್ ಪಾದೂರು, ಕಾರ್ಯದರ್ಶಿ ಪಿ.ನಂದಕುಮಾರ್ ಉಪಸ್ಥಿತರಿದ್ದರು. ವಿವಿಧ ಜನಪ್ರತಿನಿಧಿಗಳಿಗೆ, ಜನಪರ ಯೋಜನೆಯ ಕಾರ್ಯಕರ್ತರಿಗೆ, ಸಿಬ್ಬಂದಿಗೆ ಮೊದಲಾದವರಿಗೆ ಅಭಿನಂದನೆ ನಡೆಯಿತು. ಇದೇ ಸಂದರ್ಭ ಜಿಲ್ಲೆಯ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಜನಪರ ಯೋಜನೆಯ ಬೆಳ್ಳಿಹಬ್ಬ ಆಚರಣೆಗೆ ಚಾಲನೆ ನೀಡಲಾಯಿತು.




