HEALTH TIPS

ರಾಜ್ಯವೇ ಕಂಬನಿ ಮಿಡಿದಿದ್ದ ವಿಸ್ಮಯ ಸಾವು ಪ್ರಕರಣ: ಪೊಲೀಸ್​ ಚಾರ್ಜ್​ಶೀಟ್​ನಲ್ಲಿ ಗಂಡನ ಕರಾಳ ಮುಖ ಬಯಲು!

             ತಿರುವನಂತಪುರ: ಬಾಳಿ ಬದುಕಬೇಕಾದ ಹಾಗೂ ಅನೇಕರ ಬದುಕಿನ ಆಶಾಕಿರಣವಾಗಿದ್ದ ಯುವ ವೈದ್ಯೆಯ ಆತ್ಮಹತ್ಯೆ ಪ್ರಕರಣ ಇಡೀ ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಗಂಡನ ಹಣ ದಾಹಕ್ಕೆ ಯುವ ವೈದ್ಯೆ ಸಾವಿನ ಹಾದಿ ಹಿಡಿದಳು. ಅದಕ್ಕೂ ಮುಂಚೆ ಗಂಡನ ಅಸಲಿ ಮುಖವಾಡವನ್ನು ಮೃತ ವೈದ್ಯೆ ಬಿಚ್ಚಿಟ್ಟಿದ್ದಳು. ಅಷ್ಟಕ್ಕೂ ಆಕೆಯ ಗಂಡ ಅನಾಗರಿಕನೇನಲ್ಲ. ಆದರೆ, ಆತ ಮಾಡಿದ ಕೆಲಸ ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು, ವೃತ್ತಿಯಲ್ಲಿ ಕೇರಳದ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ. ಒಳ್ಳೆಯ ಉದ್ಯೋಗ, ಕೈತುಂಬ ಸಂಬಳ ಪಡೆಯುತ್ತಿದ್ದರೂ ಆತನ ಅತಿಯಾದ ದುರಾಸೆ ಯುವ ವೈದ್ಯೆಯ ಪ್ರಾಣವನ್ನೇ ಕಸಿದುಕೊಂಡಿತು. ಇದೀಗ ಕೇರಳ ಸರ್ಕಾರ ಅದಕ್ಕೆ ತಕ್ಕ ಶಿಕ್ಷೆಯಾಗಿ ಆರೋಪಿಯ ಸರ್ಕಾರಿ ಕೆಲಸವನ್ನೇ ಕಸಿದುಕೊಂಡು ಕಂಬಿ ಹಿಂದೆ ತಳ್ಳಿದೆ.

               ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಿದ್ದು, ವಿಸ್ಮಯ ನಾಯರ್​ ಆತ್ಮಹತ್ಯೆ ಸಾವಿಗೀಡಾಗಿದ್ದಾರೆ. ಆದರೆ, ಅವರನ್ನು ವರದಕ್ಷಿಣೆ ಹಾಗೂ ಮಾನಸಿಕ ಕಿರುಕುಳ ನೀಡಿ ಆಕೆಯ ಪತಿ ಕಿರಣ್​ ಕುಮಾರ್​ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾನೆಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ. 500 ಪುಟಗಳ ಚಾರ್ಜ್​ಶೀಟ್​​ ಆಗಿದ್ದು, ಅದರಲ್ಲಿ 2 ಸಾಕ್ಷಿದಾರರು, 98 ದಾಖಲೆಗಳು, 56 ದೈಹಿಕ ಸಾಕ್ಷಿಯ ತುಣುಕುಗಳು ಒಳಗೊಂಡಿವೆ ಎಂದು ಸಾಸ್ಥಕೋಟ ಉಪ ಪೊಲೀಸ್​ ವರಿಷ್ಠಾಧಿಕಾರಿ ರಾಜ್​ಕುಮಾರ್​ ತಿಳಿಸಿದ್ದಾರೆ.

         ತನಿಖೆಯ ಸಮಯದಲ್ಲಿ, ಗಂಭೀರವಾದ ಸಮಸ್ಯೆಗಳು (ಸಾವಿಗೆ ಸಂಬಂಧಿಸಿ) ಹುಟ್ಟಿಕೊಂಡವು. ಕೊಲ್ಲಂ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಕೆಬಿ ರವಿ ಮಾಧ್ಯಮಗಳಿಗೆ ತಿಳಿಸಿದರು. ವಿಸ್ಮಯ ಪ್ರಕರಣವನ್ನು ನಿರ್ವಹಿಸುವ ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ್ ದಾಸ್ ಅವರು ಮಾತನಾಡಿ, ನಾವು 90 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಬದ್ಧರಾಗಿದ್ದೆವು ಮತ್ತು ಅದನ್ನು 80 ದಿನಗಳಲ್ಲಿ ಮಾಡಲಾಗಿದೆ ಎಂದರು.

             ಈ ಪ್ರಕರಣದಲ್ಲಿ ಪೊಲೀಸರಿಗೆ ವಿವಿಧ ವಿಭಾಗಗಳಿಂದ ಸಹಾಯ ದೊರೆತಿದೆ. ಅದರಲ್ಲೂ ಡಿಜಿಟಲ್ ಸಾಕ್ಷ್ಯವೇ ನಿರ್ಣಾಯಕವಾಗಿದೆ. ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಈ ಪ್ರಕರಣದಲ್ಲಿ ಬಲವಾದ ಪುರಾವೆಗಳನ್ನು ಹೊಂದಿದ್ದು, ಹಲವಾರು ಸ್ವತಂತ್ರ ಸಾಕ್ಷಿಗಳಿದ್ದಾರೆ. ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಡಿಜಿಟಲ್ ಪುರಾವೆಗಳು ಸೈಬರ್ ವಿಂಗ್ ತನಿಖಾ ತಂಡ ಹಿಂಪಡೆದಿದೆ. ಕೆಲವು ಸಾಕ್ಷಿಗಳು ಎರ್ನಾಕುಲಂನಲ್ಲಿದ್ದಾರೆ ಮತ್ತು ಅವರಿಗೆ (ವಿಸ್ಮಯ) ಚಾಟ್ ಸಂದೇಶಗಳನ್ನು ಕಳುಹಿಸಿದ ಪುರಾವೆಗಳಿವೆ ಎಂದು ಡಿವೈಎಸ್ಪಿ ರಾಜಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.

                ವಿಸ್ಮಯ ನಾಯರ್​ ನೋಡಲು ಸೌಂದರ್ಯವತಿ ಆಗಿದ್ದಳು. ವೈದ್ಯೆಯಾಗಿದ್ದ ಆಕೆಯ ಗಂಡ ಕಿರಣ್ ಕುಮಾರ್​ ಸಾರಿಗೆ ಅಧಿಕಾರಿಯಾಗಿದ್ದ. ಇಬ್ಬರು ಒಳ್ಳೆಯ ಉದ್ಯೋಗದಲ್ಲೇ ಇದ್ದರೂ. ಸುಂದರ ವೈವಾಹಿಕ ಜೀವನ ನಡೆಸಲು ಇದಕ್ಕಿಂತ ಇನ್ನೇನು ಬೇಕು ಹೇಳಿ. ಆದರೆ, ಗಂಡ ಕಿರಣ್​ ಕುಮಾರ್​ಗೆ ಸಂಬಂಧಗಳಿಗಿಂತ ಹಣದ ಮೌಲ್ಯವೇ ಹೆಚ್ಚಾಗಿತ್ತು. ಪತ್ನಿಗಿಂತ ಹಣದ ಮೇಲಿನ ವ್ಯಾಮೋಹ ಅತಿಯಾಗಿತ್ತು. ಕಿರಣ್​ ಹಣದ ಹಪಾಹಪಿಗೆ ಬಿದ್ದಿದ್ದ.

              ಒಂದು ವರ್ಷದ ಹಿಂದಷ್ಟೇ ಅಂದರೆ, 2020ರ ಮೇ ತಿಂಗಳಲ್ಲಿ ಇಬ್ಬರು ಮದುವೆ ಆಗಿದ್ದರು. ವಿಸ್ಮಯಳ ಮದುವೆಯನ್ನ ಕುಟುಂಬಸ್ಥರು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ದಂಪತಿ ಇಬ್ಬರೂ ಕೇರಳದ ಕೊಲ್ಲಂನಲ್ಲಿ ವಾಸವಿದ್ದರು. ಆದರೆ, ಗಂಡನ ಹಣದಾಹ ಮತ್ತು ಕಿರುಕುಳ ಸಹಿಸದೇ ಜೂನ್​ 21ರ ಸೋಮವಾರ ಬೆಳಗ್ಗೆ ಗಂಡನ ಮನೆಯಲ್ಲಿಯೇ ವಿಸ್ಮಯ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ದೇಹದ ಮೇಲೆ ಗಾಯದ ಗುರುತುಗಳಾಗಿತ್ತು. ಗಂಡನ ಹಣದಾಹಕ್ಕೆ ವಿಸ್ಮಯ ಬಲಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಸಾವಿಗೂ ಮುನ್ನ ಅಂದರೆ ಭಾನುವಾರ ರಾತ್ರಿ ವಾಟ್ಸ್‌ಆಯಪ್​ ಮತ್ತು ಫೇಸ್​ಬುಕ್​ನಲ್ಲಿಯೂ ಸೋದರ ಸಂಬಂಧಿ ಜತೆ ಚಾಟ್​ ಮಾಡಿದ್ದ ವಿಸ್ಮಯ, ಬಹುಶಃ ಇದೇ ನನ್ನ ಕೊನೇ ಮೆಸೇಜ್​ ಆಗಬಹುದು. ಗಂಡನ ಕಿರುಕುಳ ಸಹಿಸಲಾಗ್ತಿಲ್ಲ ಎಂದು ಹೇಳಿದ್ದರು. ಗಂಡ ಹಿಂಸೆ ನೀಡಿರುವ ಕೆಲವು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು.

ಮುಖ್ಯಮಂತ್ರಿಯಿಂದಲೂ ಖಂಡನೆ
                ವಿಸ್ಮಯ ಸಾವಿನ ಪ್ರಕರಣ ಕೇರಳದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರೇ ಘಟನೆಯನ್ನು ಖಂಡಿಸಿದ್ದರು. ಅಲ್ಲದೆ, ವಿಶೇಷ ತನಿಖೆ ನಡೆಸುವಂತೆ ಆದೇಶಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ವಿಸ್ಮಯ ಪ್ರಕರಣದ ಬಗ್ಗೆ ಬಹಳ ಚರ್ಚೆ ನಡೆದಿತ್ತು.

ಅದ್ಧೂರಿ ಮದುವೆ
            ಸಾರಿಗೆ ಅಧಿಕಾರಿಯಾಗಿದ್ದ ಕಿರಣ್​ ಜತೆ ಮದುವೆ ಮಾಡಿಕೊಡಲು ವರದಕ್ಷಿಣೆಯಾಗಿ 800 ಗ್ರಾಂ ಚಿನ್ನ, ಒಂದು ಎಕರೆಗೂ ಅಧಿಕ ಜಮೀನು, 10 ಲಕ್ಷ ಮೌಲ್ಯದ ಕಾರನ್ನು ವಿಸ್ಮಯ ಪಾಲಕರು ನೀಡಿದ್ದರು. ಮದುವೆ ನಂತರವೂ ಕಿರಣ್​ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ. ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ. ಇದನ್ನು ಸಹಿಸದ ವಿಸ್ಮಯ ಒಮ್ಮೆ ತವರಿಗೂ ಹೋಗಿದ್ದಳು. ಬಳಿಕ ಹಿರಿಯರ ಮುಂದೆ ಸಂಧಾನ ನಡೆದು ಮತ್ತೆ ಗಂಡನ ಮನೆ ಸೇರಿದ್ದಳು. ಕೊನೆಗೆ ಆತನ ಕಾಟವನ್ನು ಸಹಿಸದೇ ಇನ್ನೆಂದು ಮತ್ತೆ ಬಾರದ ಲೋಕಕ್ಕೆ ಕಣ್ಣೀರಿನ ವಿದಾಯ ಹೇಳಿದ್ದಾಳೆ.

                                       ಕೆಲಸದಿಂದಲೇ ವಜಾ
           ಘಟನೆಯ ಬೆನ್ನಲ್ಲೇ ಕಿರಣ್​ನನ್ನು ಕೇರಳ ಪೊಲೀಸರು ಬಂಧಿಸಿದ್ದರು. ಅಲ್ಲದೆ, ಅವರನ್ನು ಕೆಲಸದಿಂದ ಆ ಕ್ಷಣದಲ್ಲಿ ಅಮಾನತುಗೊಳಿಸಲಾಗಿತ್ತು. ಇದೀಗ ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಯ ವಿರುದ್ಧ ಬಲವಾದ ಸಾಕ್ಷಿಗಳು ಲಭ್ಯವಾಗಿವೆ. ಇದರ ನಡುವೆ ಕಿರಣ್​ರನ್ನು ಶಾಶ್ವತವಾಗಿ ಸರ್ಕಾರಿ ಕೆಲಸದಿಂದ ವಜಾಗೊಳಿಸಲಾಗಿದೆ. 35 ವರ್ಷದ ಕಿರಣ್​ ಕುಮಾರ್​ ಕೇರಳ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ.

            ಕೇರಳದ ಸಾರಿಗೆ ಸಚಿವ ಆಂಟೋನಿ ರಾಜು ಇಲಾಖೆಯ ಕಾಳಜಿ ದೃಷ್ಟಿಯಿಂದ ಕಿರಣ್​ ಕುಮಾರ್​ ವಿರುದ್ಧ ತನಿಖೆ ನಡೆಸಲು 45 ದಿನಗಳ ಕಾಲಾವಕಾಶ ನೀಡಿದ್ದರು. ನಿನ್ನೆಗೆ ತನಿಖೆ ಸಂಪೂರ್ಣವಾಗಿದ್ದು, ಪೊಲೀಸರು ತನಿಖಾ ವರದಿಯನ್ನು ಸಚಿವರ ಮುಂದೆ ಪ್ರಸ್ತುತ ಪಡಿಸಿದ್ದಾರೆ. ಅದರಲ್ಲಿ ಕಿರಣ್​ ಕುಮಾರ್​ ಸೇವಾ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿರುವುದರಿಂದ ಕೆಲಸದಿಂದಲೇ ವಜಾಗೊಳಿಸಲಾಗಿದೆ. ಸದ್ಯ ಆರೋಪಿ ಕಿರಣ್​ ವಿರುದ್ಧ ತನಿಖೆ ಮುಂದುವರಿದಿದ್ದು, ಬಂಧನದಲ್ಲಿದ್ದಾನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries