ಅಹ್ಮದಾಬಾದ್ : ಖಿನ್ನತೆ ಮತ್ತು ಆತ್ಮಹತ್ಯೆ ಯೋಚನೆಗಳಿಂದಾಗಿ ಅಗತ್ಯ ಪರೀಕ್ಷೆಗೆ ಗೈರು ಹಾಜರಾಗಿದ್ದಕ್ಕಾಗಿ ಸರಕಾರಿ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಯ ನೋಂದಣಿ ಮತ್ತು ಪ್ರವೇಶವನ್ನು ರದ್ದುಗೊಳಿಸಿದ್ದನ್ನು ತಳ್ಳಿಹಾಕಿರುವ ಗುಜರಾತ್ ಉಚ್ಚ ನ್ಯಾಯಾಲಯವು, ಕೋವಿಡ್ ಸಂದರ್ಭದಲ್ಲಿ ಖಿನ್ನತೆಯನ್ನು ಗಂಭೀರ ಕಾಯಿಲೆಯನ್ನಾಗಿ ವರ್ಗೀಕರಿಸಬಹುದಾಗಿದೆ ಎಂದು ಹೇಳಿದೆ.
ಮುಂದಿನ ಸೆಮಿಸ್ಟರ್ ಗೆ ಪ್ರವೇಶವನ್ನು ಪಡೆಯಲು ಅಗತ್ಯವಾಗಿದ್ದ 25 ಅಂಕಗಳನ್ನು ಗಳಿಸದ್ದಕ್ಕಾಗಿ ಮೊದಲ ವರ್ಷದ ಬಿಟೆಕ್ ವಿದ್ಯಾರ್ಥಿಯ ನೋಂದಣಿ ಮತ್ತು ಪ್ರವೇಶವನ್ನು ಸೂರತ್ನ ಸರ್ದಾರ್ ವಲ್ಲಭಭಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಶೈಕ್ಷಣಿಕ ಸಾಧನೆ ಪುನರ್ಪರಿಶೀಲನಾ ಸಮಿತಿಯು 2020 ಅಕ್ಟೋಬರ್ನಲ್ಲಿ ರದ್ದುಗೊಳಿಸಿತ್ತು.
ಕೋವಿಡ್ ಸಾಂಕ್ರಾಮಿಕದ ಸ್ಥಿತಿಯಿಂದಾಗಿ ತಾನು ತೀವ್ರ ಖಿನ್ನತೆ ಮತ್ತು ಆತ್ಮಹತ್ಯೆ ಯೋಚನೆಗಳಿಂದ ಬಳಲುತ್ತಿದ್ದರಿಂದ ತನಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ ಎಂಬ ಕಾರಣವನ್ನು ನೀಡಿ ವಿದ್ಯಾರ್ಥಿಯು ಪುನರ್ಪರಿಶೀಲನಾ ಸಮಿತಿಯ ಕ್ರಮವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ.
ಪ್ರಕರಣದಲ್ಲಿಯ ಅಂಶಗಳು ಮತ್ತು ಸನ್ನಿವೇಶಗಳ ಬೆಳಕಿನಲ್ಲಿ ಹಾಗೂ ವಿಶೇಷವಾಗಿ ಕೋವಿಡ್ ಸಂದರ್ಭವನ್ನು ಪರಿಗಣಿಸಿದರೆ ಅರ್ಜಿದಾರ ಖಿನ್ನತೆಗೊಳಗಾಗಿದ್ದ ಮತ್ತು ಖಿನ್ನತೆಯನ್ನು ಗಂಭೀರ ಅನಾರೋಗ್ಯವೆಂದು ವರ್ಗೀಕರಿಸಬಹುದು ಎಂದು ಹೇಳಿದ ನ್ಯಾ.ಎನ್.ವಿ.ಅಂಜರಿಯಾ ಅವರು, ಸಾಂಕ್ರಾಮಿಕವು ಅರ್ಜಿದಾರನ ಎಳೆಯ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿತ್ತು ಮತ್ತು ಆತನನ್ನು ಅಧ್ಯಯನದಿಂದ ವಿಮುಖಗೊಳಿಸಿತ್ತು ಎಂದು ನಂಬುವುದು ಸಮಂಜಸವಾಗಿದೆ.
ಪ್ರತಿವಾದಿ ಸಂಸ್ಥೆಯ ಸಂಶಯ ನಿಲುವು ಸಂವೇದನಾಹೀನವಾಗಿದೆ ಮತ್ತು ವೈದ್ಯರ ಪ್ರಮಾಣಪತ್ರವನ್ನು ಲಗತ್ತಿಸಿರುವ ವಿದ್ಯಾರ್ಥಿಯ ಪೋಷಕರ ಪತ್ರವನ್ನು ಕಡೆಗಣಿಸಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.